Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.
೩೮೧.
ಸುಖ ಬಂದರೆ ಪುಣ್ಯದ ಫಲವೆನ್ನೆನು,
ದುಃಖ ಬಂದರೆ ಪಾಪದ ಫಲವೆನ್ನೆನು,
ನೀ ಮಾಡಿದಡಾಯಿತ್ತೆನ್ನೆನು,
ಕರ್ಮಕ್ಕೆ ಕರ್ತೃವೇ ಕಡೆಯೆನ್ನೆನು,
ಉದಾಸೀನವಿಡಿದು ಶರಣೆನ್ನೆನು ಕೂಡಲಸಂಗಮದೇವ.
ನೀ ಮಾಡಿದುಪದೇಶವು ಎನಗೀ ಪರಿಯಲಿ!
ಸಂಸಾರವ ಸವೆಯ ಬಳಸುವೆನು.
೩೮೨.
ಕಾಯದ ಕಳವಳಕಂಜಿ ಕಾಯಯ್ಯ ಎನ್ನೆನು.
ಜೀವನೋಪಾಯಕಂಜಿ ಈಯಯ್ಯ ಎನ್ನೆನು.
'ಯದ್ಭಾವಂ ತದ್ಭವತಿ'
ಉರಿ ಬರಲಿ, ಸಿರಿ ಬರಲಿ
ಬೇಕು ಬೇಡೆನ್ನೆನಯ್ಯ!
ಆನು ನಿಮ್ಮ ಹಾರೆನು, ಮಾನವರ ಬೇಡೆನು;
ಆಣೆ, ನಿಮ್ಮಾಣೆ ಕೂಡಲಸಂಗಮದೇವ.
೩೮೩.
ನಾಳೆ ಬಪ್ಪುದು ನಮಗಿಂದೇ ಬರಲಿ.
ಇಂದು ಬಪ್ಪುದು ನಮಗೀಗಲೇ ಬರಲಿ.
ಇದಕಾರಂಜುವರು ? ಇದಕಾರಳುಕುವರು-
'ಜಾತಸ್ಯ ಮರಣಂ ಧ್ರುವಂ' ಎಂದುದಾಗಿ ?
ನಮ್ಮ ಕೂಡಲಸಂಗಮದೇವ ಬರೆದ
ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲ ?
೩೮೪.
ಕಳ ಹೋದರೆ ಕನ್ನದುಳಿಯ ಹಿಡಿವೆ.
ಬಂದಿವಿಡಿದರೆ ನಿಮ್ಮಿಂದ ಮುಂದೆ ನಡೆವೆ,
ಮನಭೀತಿ ಮನಶಂಕೆಗೊಂಡೆನಾದರೆ,
ನಿಮ್ಮಾಣೆ ನಿಮ್ಮ ಪುರಾತರಾಣೆ.
ಆಳ್ದರ ನಡೆ ಸದಾಚಾರವೆನ್ನದಿದ್ದರೆ
ಕಟ್ಟಾಳು ಶಿಷ್ಟತನಕ್ಕೆ ಹೋಹ ಕಷ್ಟವ ನೋಡಾ
ಕೂಡಲಸಂಗಮದೇವ.
೩೮೫.
ಜೋಳವಾಳಿಯಾನಲ್ಲ,
ವೇಳೆವಾಳಿಯವ ನಾನಯ್ಯ!
ಹಾಳುಗೆಟ್ಟೋಡುವಾಳು ನಾನಲ್ಲಯ್ಯ,
ಕೇಳು, ಕೂಡಲಸಂಗಮದೇವ,
ಮರಣವೇ ಮಹಾನವಮಿ.
೩೮೬.
ಎನಗೆ ಜನನವಾಯಿತ್ತೆಂಬರು,
ಎನಗೆ ಜನನವಿಲ್ಲಯ್ಯ!
ಎನಗೆ ಮರಣವಾಯಿತ್ತೆಂಬರು,
ಎನಗೆ ಮರಣವಿಲ್ಲಯ್ಯ!
ಜನನವಾದರೆ ನಿಮ್ಮ ಪಾದೋದಕಪ್ರಸಾದವ ಕೊಂಬೆ.
ಮರಣವಾದರೆ ನಿಮ್ಮ ಶ್ರೀ ಚರಣವನೆಯ್ದುವೆ.
ಬಾವನ್ನದ ವೃಕ್ಷ ಊರೊಳಗಿದ್ದರೇನು ?
ಅಡವಿಯೊಳಗಿದ್ದರೇನು ?
ಪರಿಮಳವೊಂದೆ!
ಕೂಡಲಸಂಗಮದೇವ.
೩೮೭.
ಒಡೆಯರುಳ್ಳಾವಿಂಗೆ ಕೇಡಿಲ್ಲ ಕಾಣಿರೋ
ಊರೆನ್ನದೆ ಅಡವಿಯೆನ್ನದೆ ಆಳನರಸಿ ಬಹ ಆಳ್ದರುಂಟೆ!
ಜೋಳವಾಳಿಂಗೆ ಬಿಜ್ಜಳಂಗೆ ಆಳಾದರೇನು ?
ವೇಳೆವಾಳಿಂಗೆ ಕೊಡಿಕೊಂಡಿಪ್ಪ ಕೂಡಲಸಂಗಮದೇವ!
೩೮೮.
ಕರ್ಮವೆಂಬ ಅಂಕದೊಡನೆ ತೊಡರಿದೆ
ಬಿನ್ನಪವ ಅವಧಾರು-ನಿಮ್ಮಾಳಿನ ಭಾಷೆಯ:
ಕಡೆಗಳಕ್ಕೆ ನೂಂಕುವೆ, ಕೆಡಹುವೆನಂಕವ.
ಕರೆದಡೋಸರಿಸಿದರೆ ನಿಮ್ಮಾಳಲ್ಲ!
ಶಿವಶರಣೆಂಬ ದಂಡೆಯ ಹೂಡಿ
ಗಣಮೇಳಾಪವೆಂಬಲಗಿನಿಂದಿರಿವೆ
ಕೂಡಲಸಂಗಮದೇವ.
೩೮೯.
ಎಲೆ ಗಂಡುಗೂಸೆ ನೀ ಕೇಳಾ!
ನಿನಗೊಬ್ಬಗೆಂದುಟ್ಟೆ ಗಂಡುಡುಗೆಯನು;
ಮತ್ತೊಮ್ಮೆಯಾನು ಗಂಡಪ್ಪೆನಯ್ಯ;
ಮತ್ತೊಮ್ಮೆಯಾನು ಹೆಣ್ಣಪ್ಪೆನಯ್ಯ!
ಕೂಡಲಸಂಗಮದೇವ,
ನಿಮಗೆ ವೀರನಪ್ಪೆ! ನಿಮ್ಮ ಶರಣರಿಗೆ ವಧುವಪ್ಪೆ!
೩೯೦.
ಹುಟ್ಟುತ್ತ ದ್ರವ್ಯವನರಿಯದವಂಗೆ
ಐಶ್ವರ್ಯವಂತ ಮಗನಾದರೆ
ಲಕ್ಷಸಂಖ್ಯೆಯ ಹಿರಣ್ಯವ ತಂದು ಸಂತೋಷಂಬಡಿಸುವಂತೆ;
ಕಾಳಗದ ಮುಖವಾವುದೆಂದರಿಯದ ಹಂದೆ-ನೃಪಂಗೆ
ಒಬ್ಬ ಕ್ಷತ್ರಿಯನಂತಹ ಕುಮಾರ ಹುಟ್ಟಿ
ಕಿಗ್ಗಡಲ ರಕ್ತದ ಹೊನಲಲ್ಲಿ ಕಡಿದು ಮುಳುಗಾಡುವ
ಕೊಳುಗುಳವ ಕಂಡು ಪರಿಣಾಮಿಸುವಂತೆ
ಆನು ಪರಿಣಾಮಿಸುವೆನಯ್ಯ, ಕೂಡಲಸಂಗಮದೇವ,
ನೀ ಬಂದೆನ್ನ ಬೇಡಿದರೆ.
Comments
Post a Comment