Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.
೩೩೧.
ಶಿವಗಣಂಗಳ ಮನೆಯಂಗಳ
ವಾರಣಾಸಿಯೆಂಬುದು ಹುಸಿಯೇ
ಪುರಾತನರ ಮನೆಯ ಅಂಗಳದಲ್ಲಿ
ಅಷ್ಟಾಷಷ್ಟಿತೀರ್ಥಂಗಳು ನೆಲೆಸಿಪ್ಪವಾಗಿ?
ಅದೆಂತೆಂದಡೆ:
ಕೇದಾರಸ್ಯೋದಕೇ ಪೀತೇ
ವಾರಣಸ್ಯಾಂ ಮೃತೇ ಸತಿ
ಶೀಶೈಲ ಶಿಖರೇ ದೃಷ್ಟೇ
ಪುನರ್ಜನ್ಮ ನ ವಿದ್ಯತೇ
ಎಂಬ ಶಬ್ದಕ್ಕಧಿಕವು
ಸುತ್ತಿಬರಲು ಶ್ರೀಶೈಲ, ಕೆಲಬಲದಲ್ಲಿ ಕೇದಾರ
ಅಲ್ಲಿಂದ ಹೊರಗೆ ವಾರಣಾಸಿ
ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ
ಎನ್ನ ದೇವ ಚೆನ್ನಮಲ್ಲಿಕಾರ್ಜುನ
ನಿಮ್ಮ ಭಕ್ತರ ಮನೆಯಂಗಳ ವಾರಣಾಸಿಯಿಂದ
ಗುಂಜಿಯಧಿಕ ನೋಡಾ!
೩೩೨.
ನಿನ್ನ ಅಂಗದಾಚಾರವ ಕಂಡು
ಎನಗೆ ಲಿಂಗಸಂಗವಾಯಿತ್ತಯ್ಯ, ಬಸವಣ್ಣ
ನಿನ್ನ ಮನದ ಸುಜ್ಞಾನವ ಕಂಡು
ಎನಗೆ ಜಂಗಮಸಂಬಂಧವಾಯಿತ್ತಯ್ಯ, ಬಸವಣ್ಣ
ನಿನ್ನ ಸದ್ಭಕ್ತಿಯ ತಿಳಿದು
ಎನಗೆ ನಿಜಸಾಧ್ಯವಾಯಿತ್ತಯ್ಯ, ಬಸವಣ್ಣ
ಚೆನ್ನಮಲ್ಲಿಕಾರ್ಜುನನ ಹೆಸರಿಟ್ಟ
ಗುರು ನೀನಾದ ಕಾರಣ
ನಾನೆಂಬುದಿಲ್ಲವಯ್ಯ ಬಸವಣ್ಣ
೩೩೩.
ಅಯ್ಯ, ನಿಮ್ಮಾನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು!
ಅಯ್ಯ, ನಿಮ್ಮ ಅನುಭಾವಿಗಳು
ಎನ್ನನೊರೆದೊರೆದು, ಕಡಿಕಡಿದು, ಅರೆದರೆದು
ಅನುಮಾಡಿದ ಕಾರಣ
ಎನ್ನ ಮನ ಶುದ್ಧವಾಯಿತ್ತು!
ಎನ್ನ ಸರ್ವಭೋಗಾದಿ ಭೋಗಂಗಳೆಲ್ಲ
ನಿಮ್ಮ ಶರಣರಿಗರ್ಪಿತವಾಗಿ
ಎನ್ನ ಪ್ರಾಣ ಶುದ್ಧವಾಯಿತ್ತು!
ಎನ್ನ ಸರ್ವೇಂದ್ರಿಯಗಳೆಲ್ಲವು
ನಿಮ್ಮ ಶರಣರ ಪ್ರಸಾದವ ಕೊಂಡ ಕಾರಣ
ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯ!
ನಿಮ್ಮ ಶರಣರಿಂತು ಎನ್ನನಾಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರಿಗೆ ತೊಡಿಗೆಯಾದೆನಯ್ಯ ಪ್ರಭುವೆ!
೩೩೪.
ಬಸವಣ್ಣನ ಮನೆಯ ಮಗಳಾಗಿ ಬದುಕಿದೆನಾಗಿ
ತನ್ನ ಕರುಣ ಭಕ್ತಿ ಪ್ರಸಾದವ ಕೊಟ್ಟನು
ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕ ಪ್ರಸಾದವ ಕೊಟ್ಟನು
ಪ್ರಭುದೇವರ ತೊತ್ತಿನ ಮಗಳಾದ ಕಾರಣ
ಜ್ಞಾನಪ್ರಸಾದವ ಕೊಟ್ಟನು
ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ
ಪ್ರಾಣಪ್ರಸಾದವ ಸಾಧಿಸಿ ಕೊಟ್ಟನು
ಮಡಿವಾಳ ಮಾಚಿ ತಂದೆಯ ಮನೆಯ ಮಗಳಾದ ಕಾರಣ
ನಿರ್ಮಳ ಪ್ರಸಾದವ ನಿಶ್ಚಯಿಸಿ ಕೊಟ್ಟನು
ಇಂತೀ ಅಸಂಖ್ಯಾತಗಣಂಗಳೆಲ್ಲರೂ ತಮ್ಮ ಕರುಣದ ಕಂದನೆಂದು
ತಲೆದಡಹಿ ರಕ್ಷಿಸಿದ ಕಾರಣ
ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ಯೋಗ್ಯಳಾದೆನು
೩೩೫.
ತನು ಮೀಸಲಾಗೆ ಭಾವವಚ್ಚುಗೊಂಡಿಪ್ಪುವುದವ್ವ
ಅಚ್ಚುಗದ ಸ್ನೇಹ, ನಿಚ್ಚಟದ ಮೆಚ್ಚುಗೆ,
ಬೆಚ್ಚು ಬೇರಾಗದ ಭಾವವಾಗೆ
ಚೆನ್ನಮಲ್ಲಿಕಾರ್ಜುನಯ್ಯ ಒಳಗೆ ಗಟ್ಟಿಗೊಂಡನವ್ವ
೩೩೬. ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ
ಎಚ್ಚರೆ ಗರಿದೋರದಂತೆ ನಡಬೇಕು
ಅಪ್ಪಿದರೆ ಅಸ್ಠಿಗಳು ನುಗ್ಗುನುರಿಯಾಗಬೇಕು
ಬೆಚ್ಚರೆ ಬೆಸುಗೆಯರಿಯದಂತಿರಬೇಜು
ಮಚ್ಚು ಒಪ್ಪಿತ್ತು ಚೆನ್ನಮಲ್ಲಿಕಾರ್ಜುನಯ್ಯನ ಸ್ನೇಹ
೩೩೭.
ನಡೆಯದ ನುಡಿಗಡಣ, ಮಾಡದ ಕಲಿತನ
ಚಿತ್ರದ ಸತಿಯ ಶೃಂಗಾರವದೇತಕ್ಕೆ ಪ್ರಯೋಜನ?
ಎಲೆಯಿಲ್ಲದ ಮರನು, ಜಲವಿಲ್ಲದ ನದಿಯು,
ಗುಣಿಯಲ್ಲದವಗುಣಿಯ ಸಂಗವದೇತಕ್ಕೆ ಪ್ರಯೋಜನ?
ದಯವಿಲ್ಲದ ಧರ್ಮವು, ಭಯವಿಲ್ಲದ ಭಕ್ತಿಯು,
ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ?
ಎನ್ನ ದೇವ ಚೆನ್ನಮಲ್ಲಿಕಾರ್ಜುನ, ಲಿಂಗೈಕ್ಯವು
ಪ್ರಾಣಗುಣವರಿಯದವರ ಕೂಡೆ ಪ್ರಸಂಗವೇತಕ್ಕೆ?
೩೩೮.
ಪ್ರಾಣ ಹೊಲಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ
ದೇವದಾನವಮಾನವರೆಲ್ಲಾ ಜೋಳವಾಳಿಯಲೈದಾರೆ
ಜಾಣ ಕಲುಕುಟಿಕನನಗಲದೆ ಹೂವನೆ ಕೊಯ್ದು
ಕಲಿಯುಗ ಕರಸ್ಥಲದೇವಪೂಜೆ ಘನ
ಮೇರುವಿನ ಕುದುರೆ ನಲಿದಾಡಲದು
ಭೂತರಾಜ ರಾಜರಂಗಳಿಗಳ[?] ಜಗಳ ಮೇಳಾವ
ಮರುಪತ್ತದ ಮಾತು ನಗೆ ಹಗರಣ
ಕ್ಷೀರಸಾಗರದಲ್ಲಿ ದಾರಿಯಳವಡದಯ್ಯ
ನೀ ಹೇಳಬೇಕು ಭಕ್ತರೆಂತಪ್ಪರೋ
ಪಂಚವರ್ಣದ ಬಣ್ಣ ಸಂಧೆವರದಾಟವು[?]
ಚೆನ್ನಮಲ್ಲಿಕಾರ್ಜುನಯ್ಯ,
ತ್ರಿಭುವನದ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು
೩೩೯.
ಹಸಿದ ಹಸುಳೆಗೆರೆದೆಯಾಹ
ವಿಷವ, ರಾಜಹಂಸೆಗುಕ್ಕು
ರಸವನೀಂಟಿಸಿದೆ, ಮಹೇಶ, ನೋಳ್ಪ ಕಣ್ಣೊಳು
ಕಸವ ಕವಿದೆ, ಕರ್ಣಗಳಿಗೆ
ದಸಿಯ ಬಡಿದೆ; ಕರುಣವಿಲ್ಲ-
ದಸಮಪಾತಕವನು ಎನಗೆ ಕೇಳಿಸಿಂದು ನೀ ||೧||
ಹರನೆ, ಕಣ್ಣೊಳುರಿಯನ್ನಿಟ್ಟ
ದುರುಳ, ನಂಜುಗೊರಲ, ಸರ್ಪ
ಧರ ತ್ರಿಶೂಲಿ! ನಿನ್ನ ನಂಬಿದವರನಸಿಯೊಳು
ಅರೆದು ಸಣ್ಣಿಸುವುದೆ ನಿನ್ನ
ಕರುಣವಲ್ಲದದೆಲ್ಲರಂತೆ
ಕರುಣಿಯೆಂಬ ಮರುಳನಾವ ?! ಮಗನ ಕೊಲಿಸಿರೇ? ||೨||
ಯತಿಯ ರಸಿಕನೆನಿಸಿ, ಪತಿ-
ವ್ರತೆಯ ಸಿತಗೆಯೆನಿಸಿ, ದಿವ್ಯ-
ಮತಿಗೆ ಸಟೆಯ ಬಿತ್ತಿ, ದಾನಿ-
ಗತಿದರಿದ್ರದೆಡರನೀವ
ಮತವೆ ನಿನ್ನದುತ್ತಮಿಕೆಯ ನೆರೆವ ತಪ್ಪೆಯ? ||೩||
ಅರಗಿಲೆರೆದ ಬೊಂಬೆಗುರಿಯ
ಭರಣವನ್ನು ತೊಡಿಸಲಹುದೆ?!
ಹರನೆ ನಿನ್ನ ಸ್ತೋತ್ರವಲ್ಲದನ್ಯವರಿಯದ
ತರಳೆಯೆನ್ನ ಕಿವಿಯೊಳೆನ್ನ
ಪುರುಷವಚನವನ್ನು ತುಂಬೆ
ಕರುಣವಿಲ್ಲಲಾ ಕಪರ್ದಿ... ||೪||
ಗಂಡನುಳ್ಳ ಹೆಣ್ಣನಾವ
ಗಂಡು ಬಯಸಿ ಕೇಳ್ದಡವನ
ತುಂಡುಗಡಿಯದಿಹನೆಯವಳ ಗಂಡನೆನ್ನಯ
ಗಂಡ ನೀನಿರಲ್ಕೆ ಕೇಳ್ದೊ
ಡಂಡುಗೊಂಡು ಸುಮ್ಮನಿಹೆ! ಶಿ-
ಖಂಡಿಯೆಂಬ ನಾಮ ಸಾಮ್ಯವಾದುದಿಂದಲಿ ||೫||
೩೪೦.
ಪತಿಯೆ ಗತಿಯೆನಿಪ್ಪ ಸತಿಗೆ
ಪತಿವ್ರತಾಭಿಧಾನ ಸೆಲ್ವು
ದಿತರ ಪತಿಯ ರತಿಯೊಳಿರ್ಪ ಸತಿಯ ಕ್ಷಿತಿಯೊಳು
ಸಿತಗೆಯೆನ್ನದಿಹರೆ? ದಿಟದ
ಪತಿಯದೊರ್ವ, ಸತಿಗೆ ಸಟೆಯ
ಪತಿಯದೊರ್ವನುಂಟೆ ತಳರಿ ತಳುವದೆ?!
Comments
Post a Comment