Skip to main content

ಅಕ್ಕನ ವಚನಗಳು - 271 ರಿಂದ 280 ರವರೆಗೆ

Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.

Please follow my post and post your valuable comments.
 
೨೭೧.
ತನು ಶುದ್ಧ, ಮನ ಶುದ್ಧ,
ಭಾವಶುದ್ಧವಾದವರನೆನಗೊಮ್ಮೆ ತೋರಾ!
ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ,
ನಿತ್ಯಶುದ್ಧರಾದವರನೆನಗೊಮ್ಮೆ ತೋರಾ!
ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ
ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ

೨೭೨.
ನಡೆ ಶುಚಿ, ನುಡಿ ಶುಚಿ, ತನು ಶುಚಿ,
ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು
ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ
ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ

೨೭೩.
ಪಡೆವುದರಿದು ನರಜನ್ಮವ,
ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ,
ಪಡೆವುದರಿದು ಸತ್ಯಶರಣರನುಭಾವವ!
ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ
ನಲಿನಲಿದಾಡು ಕಂಡೆಯಾ ಎಲೆ ಮನವೇ!

೨೭೪.
ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ!
ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ!
ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ!
ಎಡರುವ ಹರಳೆಲ್ಲ ಚಿಂತಾಮಣಿ!
ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ
ನೋಡುತ ಬಂದು, ಕದಳಿಯ ಬನವ ಕಂಡೆ ನಾನು

೨೭೫.
ತನುವೆಲ್ಲ ಜರಿದು, ಮನವ ನಿಮ್ಮೊಳಗಿರಿಸಿ
ಘನಸುಖದಲೋಲಾಡುವ ಪರಿಯ ತೋರಯ್ಯ ಎನಗೆ
ಭಾವವಿಲ್ಲದ ಬಯಲ ಸುಖವು ಭಾವಿಸಿದಡೆಂತಹುದು
ಬಹುಮುಖರುಗಳಿಗೆ
ಕೇಳಯ್ಯ, ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವ
ನಾನಳಿದು ನೀನುಳಿದ ಪರಿಯ ತೋರಯ್ಯ ಪ್ರಭುವೆ

೨೭೬.
ಲಿಂಗಾಂಗಸಂಗ ಸಮರದ ಸುಖದಲ್ಲಿ
ಮನ ವೇದ್ಯವಾಯಿತು
ನಿಮ್ಮ ಶರಣರ ಅನುಭಾವಸಂಗದಿಂದ
ಎನ್ನ ತನು-ಮನ-ಪ್ರಾಣಪದಾರ್ಥವ
ಗುರು-ಲಿಂಗ-ಜಂಗಮಕಿತ್ತು
ಶುದ್ಧ-ಸಿದ್ಧ-ಪ್ರಸಿದ್ಧ ಪ್ರಸಾದಿಯಾದೆನು
ಆ ಮಹಪ್ರಸಾದದ ರೂಪ-ರುಚಿ-ತೃಪ್ತಿಯ
ಇಷ್ಟ-ಪ್ರಾಣ-ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ
ಮಹಾಘನಪ್ರಸಾದಿಯಾದೆನು
ಇಂತೀ ಸರ್ವಾಚಾರಸಂಪತ್ತು
ಎನ್ನ ತನು-ಮನವೇದ್ಯವಾಯಿತು
ಇನ್ನೆಲ್ಲಿಯಯ್ಯ ಎನಗೆ ನಿಮ್ಮಲ್ಲಿ ನಿರವಯವು?
ಇನ್ನೆಲ್ಲಿಯಯ್ಯ ನಿಮಗೆ ಕೂಡುವುದು?
ಪರಮಸುಖದ ಪರಿಣಾಮ ಮನಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ
ಚೆನ್ನಮಲ್ಲಿಕಾರ್ಜುನ ಪ್ರಭುವೆ

೨೭೭.
ಹೋದೆನೂರಿಗೆ ಇದ್ದೆ ನಾನಿಲ್ಲಿ
ಹೋದರೆ ಮರಳಿ ಇತ್ತ ಬಾರೆನವ್ವ
ಐವರು ಭಾವದಿರು, ಐವರು ನಗೆವೆಣ್ಣು
ಐವರು ಕೂಡಿ ಎನ್ನ ಕಾಡುವರು
ಬೈವರು, ಹೊಯ್ವರು, ಮಿಗೆ ಕೆಡೆನುಡಿವರು
ಅವರೈವರ ಕಾಟಕ್ಕೆ ನಾನಿನ್ನಾರೆ ಕಂಡವ್ವಾ
ಅತ್ತೆ ಮಾವನು ಮೈದುನ ನಗೆವೆಣ್ಣು
ಚಿತ್ತವನೊರೆದು ನೋಡುವ ಗಂಡ
ಕತ್ತಲೆಯಾದರೆ ಕರೆದನ್ನವ ನೀಡಳವ್ವ
ಅತ್ತಿಗೆ ಹತ್ತೆಂಟು ನುಡಿವಳಮ್ಮಯ್ಯ ತಾಯೆ
ಉಪಮಾತೀತರು ರುದ್ರಗಣಂಗಳು
ಅವರೆನ್ನ ಬಂಧುಬಳಗಂಗಳು ಸಯಸಿ (?)
ಶ್ರೀಶೈಲ ಚೆನ್ನಮಲ್ಲಿಕಾರ್ಜುನ ಒಲಿದರೆ
ಮರಳಿ ಬಾರೆನಮ್ಮ ತಾಯೆ

೨೭೮.
ಲಿಂಗವೆನ್ನೆ ಲಿಂಗೈಕ್ಯವೆನ್ನೆ!
ಸಂಗವೆನ್ನೆ ನಿಸ್ಸಂಗವೆನ್ನೆ!
ಆಯಿತ್ತೆನ್ನೆ ಆಗದೆನ್ನೆ!
ನಾನೆನ್ನೆ ನೀನೆನ್ನೆ!
ಚೆನ್ನಮಲ್ಲಿಕಾರ್ಜುನಲಿಂಗದಲ್ಲಿ
ಘನಲಿಂಗೈಕ್ಯವಾದ ಬಳಿಕ ಏನೂ ಎನ್ನೆ!

೨೭೯.
ಕಾಯ ಮುಟ್ಟುವೊಡೆ ಕಾಣಬಾರದ ಘನ
ನಿಮ್ಮನೆಂತು ಕರಸ್ಥಲದಲ್ಲಿ ಧರಿಸುವೆನಯ್ಯ?
ಕ್ರೀಗಳು ಮುಟ್ಟಲರಿಯವು
ನಿಮ್ಮನೆಂತು ಪೂಜಿಸುವೆನಯ್ಯ?
ನಾದಬಿಂದುಗಳು ಮುಟ್ಟಲರಿಯವು
ನಿಮ್ಮನೆಂತು ಪಾಡುವೆನಯ್ಯ?
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ನೋಡಿ ನೋಡಿ ಸೈವೆರಗಾಗುತಿಪ್ಪೆನಯ್ಯ

೨೮೦.
ಕ್ರೀಡೆ ತುಂಬಿಯ ಹಂಬಲದಿಂದ ತುಂಬಿಯಾಗಿ
ತನ್ನ ಬಿಡಲುಂಟೇ ಅಯ್ಯ?
ಆನು ನಿಮ್ಮ ನೆನೆದು, ಎನ್ನ ಕರ ತುಂಬಿ,
ಎನ್ನ ಮನ ತುಂಬಿ, ಎನ್ನ ಭಾವ ತುಂಬಿ
ಮತ್ತಿಲ್ಲದೆ ನಿನ್ನ ಕೂಟದ ಸವಿಗಲೆಯನೆಂತು ಕಾಣುವೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ

Comments

Popular posts from this blog

ಸರ್ವಜ್ಞನ ವಚನಗಳು - 91 ರಿಂದ 100

ಸರ್ವಜ್ಞನ ವಚನಗಳು -  91 ರಿಂದ 100 ೯೧. ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು ಹುಟ್ಟಿಸನದೇಕೆ ಸರ್ವಜ್ಞ ೯೨. ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು ಮತ್ತೆ ಪಾಂಡವರಿಗಾಳಾದ ಹರಿಯು ತಾ ನೆತ್ತಣಾ ದೈವ ಸರ್ವಜ್ಞ ೯೩. ನರಸಿಂಹನವತಾರ ಹಿರಿದಾದ ಅದ್ಭುತವು ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ ೯೪. ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ ಪಾಲಿಸದೆ ಹೋದ ಸರ್ವಜ್ಞ ೯೫. ಹರನವನ ಕೊಲುವಂದು, ಎರಳೆಯನು ಎಸೆವಂದು ಮರಳಿ ವರಗಳನು ಕೊಡುವಂದು ಪುರಹರಗೆ ಸರಿಯಾದ ಕಾಣೆ ಸರ್ವಜ್ಞ ೯೬. ಹರಿ ಬೊಮ್ಮನೆಂಬವರು, ಹರನಿಂದಲಾದವರು ಅರಸಿಗೆ ಆಳು ಸರಿಯಹನೆ ಶಿವನಿಂದ ಮೆರೆವರಿನ್ನಾರು ಸರ್ವಜ್ಞ ೯೭. ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ ನೆರೆಹತ್ತು ಜನನವಾಹರಿಗೆ ಇವರುಗಳು ಸರಿಯಹರೆ ಸರ್ವಜ್ಞ ೯೮. ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ ಸರಿಯಾರು ಹೇಳಿ ಸರ್ವಜ್ಞ ೯೯. ಇಂದ್ರನಾನೆಯನೇರಿ ಒಂದನೂ ಕೊಡಲರಿಯ ಚ್ಂದ್ರಶೇಖರನು ಮುದಿಯೆತ್ತನೇರಿ ಬೇಕೆಂದುದನು ಕೊಡುವ ಸರ್ವಜ್ಞ ೧೦೦. ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ ಶಂಭುವಿದ್ದಂತೆ ಮತ್ತೊಂದು ದೈವವನು ನಂಬುವನೆ ಹೆಡ್ಡ ಸರ್ವಜ್ಞ

ಬಸವಣ್ಣನ ವಚನಗಳು - 331 ರಿಂದ 340 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೩೧. ವ್ಯಾಸ ಬೋಯಿತಿಯ ಮಗ. ಮಾರ್ಕಂಡೇಯ ಮಾತಂಗಿಯ ಮಗ. ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿ ಭೋ! ಕುಲದಿಂದ ಮುನ್ನೇನಾದಿರಿ ಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ. ದೂರ್ವಾಸ ಮಚ್ಚಿಗ. ಕಶ್ಯಪ ಕಮ್ಮಾರ. ಕೌಂಡಿನ್ಯನೆಂಬ ಋಷಿ ಮೂರುಲೋಕವರಿಯೆ ನಾವಿದ ಕಾಣಿ ಭೋ! ನಮ್ಮ ಕೂಡಲಸಂಗನ ವಚನವಿಂತೆಂದುದು- "ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ! ೩೩೨. ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ. ಜಲಬಿಂದುವಿನ ವ್ಯವಹಾರವೊಂದೇ. ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ. ಏನನೋದಿ ಏನ ಕೇಳಿ ಏನು ಫಲ ?! ಕುಲಜನೆಂಬುದಕ್ಕೆ ಆವುದು ದೃಷ್ಟ ? "ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸ್ಸಮಸ್ತಸ್ಮಾತ್ ವರ್ಣಾನಾಂ ಕಿಂ ಪ್ರಯೋಜನಂ ?" || ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ? ಇದು ಕಾರಣ, ಕೂಡಲಸಂಗಮದೇವ, ಲಿಂಗಸ್ಥಲವನರಿದವನೇ ಕುಲಜನು! ೩೩೩. ಕೊಲುವವನೇ ಮಾದಿಗ! ಹೊಲಸ ತಿಂಬವನೇ ಹೊಲೆಯ! ಕುಲವೇನೋ ? ಆವದಿರ ಕುಲವೇನೋ ? ಸಕಲ ಜೀವಾ...