೧೭೧.
ಇತ್ತ ಬಾರೈ ಇತ್ತ ಬಾರೈಯೆಂದು
ಭಕ್ತರೆಲ್ಲರು ಕೂರ್ತು ಹತ್ತಿರಕೆ ಕರೆವುತಿರಲು,
ಮತ್ತೆ ಕೆಲಸಕ್ಕೆ ಹೋಗಿ,
ಶರಣೆಂದು ಹಸ್ತಬಾಯನೆ ಮುಚ್ಚಿ, ಕಿರಿದಾಗಿ;
ಭೃತ್ಯಾಚಾರವ ನುಡಿದು
ವಿನಯ ತದ್ಧ್ಯಾನ ಉಳ್ಳವರನೆತ್ತಿಕೊಂಬನಯ್ಯ
ಕೂಡಲಸಂಗಮದೇವ ಪ್ರಮಥರ ಮುಂದೆ.
೧೭೨.
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ?
ತನಗಾದ ಆಗೇನು ? ಅವರಿಗಾದ ಚೇಗೇನು ?
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವ.
೧೭೩.
ಭಕ್ತನು ಕಾಣದ ಠಾವಿನಲ್ಲಿ ಜರಿದನೆಂದರೆ
ಕೇಳಿ ಪರಿಣಾಮಿಸಬೇಕು!
ಅದೇನು ಕಾರಣವೆಂದರೆ--
ಕೊಡದೆ ಕೊಳದೆ ಅವಂಗೆ ಸಂತೋಷವಹುದಾಗಿ!
ಎನ್ನ ಮನದ ತದ್ವೇಷವಳಿದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವ!
೧೭೪.
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ.
ಒರೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯ,
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ
ಸಲಹಯ್ಯ ಕೂಡಲಸಂಗಮದೇವ.
೧೭೫.
ಅವರಿವರೆನ್ನದೆ ಚರಣಕ್ಕೆರಗಲು
ಅಯ್ಯತನವೇರಿ ಬೆಬ್ಬನೆ ಬೆರೆವೆ ನಾನು
ಕೆಚ್ಚು ಬೆಳೆಯಿತಯ್ಯ ಎನ್ನ ಎದೆಯಲ್ಲಿ!
ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು
ಬೆಳುಕನ ಮಾಡಿ
ಬೆಳುಗಾರದಂತೆ ಮಾಡು
ಕೂಡಲಸಂಗಮದೇವ.
೧೭೬.
ಇರಿಸಿಕೊಂಡು ಭಕ್ತರಾದರೆಮ್ಮವರು
ತರಿಸಿಕೊಂಡು ಭಕ್ತರಾದರೆಮ್ಮವರು
ಜರಿಸಿಕೊಂಡು ಭಕ್ತರಾದರೆಮ್ಮವರು
ಕೊರಿಸಿಕೊಂಡು ಭಕ್ತರಾದರೆಮ್ಮವರು
ಕೂಡಲಸಂಗನ ಶರಣರಿಗೆ ಮುಳಿಸ ತಾಳಿ
ಎನ್ನ ಭಕ್ತಿ ಅರೆಯಾಯಿತ್ತು.
೧೭೭.
ಕುದುರನೇಸು ತೊಳೆದರೆಯು ಕೆಸರು ಮಾಬುದೇ ?
ಎನ್ನ ಕಾಯದಲುಳ್ಳ ಅವಗುಣಂಗಳ ಕಳೆದು
ಕೃಪೆಯ ಮಾಡಯ್ಯ ತಂದೆ,
ಕಂಬಳಿಯಲ್ಲಿ ಕಣಿಕವ ನಾದಿದಂತೆ ಎನ್ನ ಮನ!
ಕೂಡಲಸಂಗಮದೇವ ನಿಮಗೆ ಶರಣೆಂದು ಶುದ್ಧ ಕಾಣಯ್ಯ.
೧೭೮.
ಕಾಣದುದನೆಲ್ಲವ ಕಾಣಲಾರೆನಯ್ಯ.
ಕೇಳದುದನೆಲ್ಲವ ಕೇಳಲಾರೆನಯ್ಯ.
ದ್ರೋಹವಿಲ್ಲ - ಎಮ್ಮ ಶಿವಲ್ಲಿ ಸೀಮೆಯಯ್ಯ.
ಒಲೆಯ ಮುಂದಿದ್ದು ಮಾಡದ ಕನಸ ಕಾಬವರನು
ಒಲ್ಲನಯ್ಯ ಕೂಡಲಸಂಗಮದೇವ.
೧೭೯.
ಕಾಣಬಹುದೇ ಪರುಷದ ಗಿರಿಯಂಧಕಂಗೆ ?
ಮೊಗೆಯಬಹುದೇ ರಸದ ಬಾವಿ ನಿರ್ಭಾಗ್ಯಂಗೆ ?
ತೆಗೆಯಬಹುದೇ ಕಡವರವು ದರಿದ್ರಂಗೆ ?
ಕರೆಯಬಹುದೇ ಕಾಮಧೇನುವಶುದ್ಧಂಗೆ ?
ಹೊನ್ನ ಹುಳುವ ಕಂಡು ನರಿ ತನ್ನ ಬಾಲವ
ಹುಣ್ಣುಮಾಡಿಕೊಂಡರೆ ಹೋಲಬಹುದೆ ?
ಎನ್ನೊಡೆಯ ಕೂಡಲಸಂಗನ ಶರಣನ
ಪುಣ್ಯವಿಲ್ಲದೆ ಕಾಣಬಹುದೇ ?
೧೮೦.
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತೆ ನಾನಿದ್ದೆನಯ್ಯ!
ವಿಭೂತಿಯನೆ ಪೂಸಿ, ರುದ್ರಾಕ್ಷಿಯನೆ ಧರಿಸಿ
ಶಿವ, ನಿಮ್ಮ ಒಲವಿಲ್ಲದಂತೆ ನಾನಿದ್ದೆನಯ್ಯ!
ಕೆಟ್ಟು ಬಾಳುವರಿಲ್ಲ ನಮ್ಮವರ ಕುಲದಲ್ಲಿ
ನೀನೊಲಿದಂತೆ ಸಲಹಯ್ಯ ಕೂಡಲಸಂಗಮದೇವ.
Comments
Post a Comment