೧೬೧.
ಆಯತ-ಸ್ವಾಯತ-ಅನುಭಾವವ ನಾನೆತ್ತ ಬಲ್ಲೆನಯ್ಯಾ
ಗುರು-ಲಿಂಗ-ಜಂಗಮಕ್ಕೆ ಅರ್ಥಪ್ರಾಣಾಭಿಮಾನಂಗಳನಿತ್ತ
ನಿನ್ನ ಭಕ್ತರ ಭೃತ್ಯರಿಗಾಳಾಗಿಪ್ಪೆನಯ್ಯಾ
ನಿಮ್ಮ ಶರಣರ ಸಂಗವನಲ್ಲದೆ ಬೇರೊಂದ ಬಯಸೆನಯ್ಯ
ಚೆನ್ನಮಲ್ಲಿಕಾರ್ಜುನ
೧೬೨.
ಅಷ್ಟದಳಕಮಲದ ಆತ್ಮನೊಳಗೆ ಸೃಷ್ಟಿ ಜನಿಸಿ
[ಕೂರುಮ ದಿಗುದಂತಿ] ದಿಗುವಳಯವ ನುಂಗಿ
ನಿಜ ಶೂನ್ಯ ತಾನಾದ ಬಳಿಕ
ತನ್ನ ತಾನರಿದ ನಿಜಪದ ಭಿನ್ನಯೋಗಕ್ಕೆ ಬರಬಹುದೇ?
ಕಂಗಳ ನೋಟದಲ್ಲಿ
ಮನ ಸೊಗಸಿನಲ್ಲಿ
ಅನಂಗನ ಧಾಳಿಯನಗಲಿದೆವಣ್ಣ
ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಗೊಳಗಹುದೇ?
ಎನ್ನ ದೇವ ಚೆನ್ನಮಲ್ಲಿಕಾರ್ಜುನನಲ್ಲದ
ಪರಪುರುಷರು ನಮಗಾಗದಣ್ಣ!
೧೬೩.
ನಮಗೆ ನಮ್ಮ ಲಿಂಗದ ಚಿಂತೆ
ನಮಗೆ ನಮ್ಮ ಭಕ್ತರ ಚಿಂತೆ, ಮನಗೆ ನಮ್ಮ ಆದ್ಯರ ಚಿಂತೆ
ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನನ ಚಿಂತೆಯಲ್ಲದೆ
ಲೋಕದ ಮಾತು ನಮಗೇಕಣ್ಣ?
೧೬೪.
ನಿಮ್ಮ ನಿಲುವಿಂಗೆ ನೀವು ನಾಚಬೇಡವೆ?
ಅನ್ಯರ ಕೈಲಿ ಅಲ್ಲ ಎನಿಸಿಕೊಂಬ ನಡೆ-ನುಡಿಯೇಕೆ?
ಅಲ್ಲ ಎನಿಸಿಕೊಂಬುದರಿಂದ, ಆ ಕ್ಷಣವೇ ಸಾವುದು ಲೇಸು ಕಾಣಾ
ಚೆನ್ನಮಲ್ಲಿಕಾರ್ಜುನ
೧೬೫.
ಶಿವಭಕ್ತರ ರೋಮ ನೊಂದರೆ
ಒಡನೆ ಶಿವನು ನೋವ ನೋಡಾ
ಶಿವಭಕ್ತರು ಪರಿಣಾಮಿಸಿದರೆ, ಒಡನೆ ಶಿವ ಪರಿಣಆಮಿಸುವ ನೋಡಾ !
ಭಕ್ತದೇಹಿಕ ದೇವ ಎಂಬ ಶ್ರುತಿ ಹೊಗಳುವ ಕಾರಣ
ಶಿವಭಕ್ತರ ಲೇಸು ಹೊಲ್ಲೆಹ ಶಿವನ ಮುಟ್ಟುವುದು
ತಾಯಿ ನೊಂದರೆ ಒಡಲ ಶಿಶು ನೋವ ತೆರನಂತೆ
ಚೆನ್ನಮಲ್ಲಿಕಾರ್ಜುನ-ತನ್ನ ಭಕ್ತರು ನೊಂದರೆ
ಒಡನೆ ತಾ ನೋವನು
೧೬೬.
ನೋಡುವ ಕಂಗಳಿಗೆ ರೂಪಿಂಬಾಗಿರಲು
ನೀವು ಮನ ನಾಚದೆ ಬಂದಿರಣ್ಣ!
ಕೇಳಿದ ಶ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣ!
ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣ!
ಮೂತ್ರವು ಬಿಂದು ಒಸರುವ ನಾಳವೆಂದು
ಕಂಗಾಣದೆ ಮುಂದುಗೆಟ್ಟು ಬಂದಿರಣ್ಣ!
ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ
ಹೋಗಲಾಡಿಸಿಕೊಂಡು
ಇದಾವ ಕಾರಣವೆಂದರಿಯದೆ, ನೀವು ನರಹೇತುವೆಂದರಿದೂ
ಮನ ಹೇಸದೆ ಬಂದಿರಣ್ಣ!
ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರರು
ಛೀ ಹೋಗಾ ಮರುಳೇ!
೧೬೭.
ಲೇಸು ಹಾಸು, ನೋಟವಾಭರಣ,
ಆಲಿಂಗನ ವಸ್ತ್ರ, ಚುಂಬನವಾರೋಗಣೆ,
ಲಲ್ಲೆವಾತು ತಾಂಬೂಲ, ಲವಲವಿಕೆಯೇ ಅನುಲೇಪನವೆನಗೆ
ಚೆನ್ನಮಲ್ಲಿಕಾರ್ಜುನನ ಕೂಟ ಪರಮಸುಖವವ್ವ!
೧೬೮.
ಆಡುವುದು, ಪಾಡುವುದು; ಕೇಳುವುದು, ಹೇಳುವುದು
ನಗೆ-ನುಡಿ ಸರಸ ಸಮ್ಮೇಳನವಾಗಿಪ್ಪುದು ಶರಣರೊಡನೆ
ಚೆನ್ನಮಲ್ಲಿಕಾರ್ಜುನ ಕೊಟ್ಟ ಆಯುಷ್ಯ ಉಳ್ಳನ್ನಕ್ಕರ
ಲಿಂಗಸುಖಿಗಳ ಸಂಗದಲ್ಲಿ ದಿನಂಗಳ ಕಳೆವುದು!
೧೬೯.
ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ!
ಜಂಗಮವೆನ್ನ ನಿಧಿನಿಧಾನ!
ಜಂಗಮವೆನ್ನ ಹರುಷದ ಮೇರೆ!
ಚೆನ್ನಮಲ್ಲಿಕಾರ್ಜುನ,
ಜಂಗಮದ ತಿಂಥಿಣಿಯಲ್ಲಿ ಓಲಾಡುವೆ
೧೭೦.
ಅರಿಯದವರೊಡನೆ ಸಂಗವ ಮಾಡಿದರೆ
ಕಲ್ಲು ಹೊಯ್ದು ಕಿಡಿಯ ತೆಗೆದುಕೊಂಬಂತೆ
ಬಲ್ಲವರೊಡನೆ ಸಂಗವ ಮಾಡಿದರೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗ
ಕರ್ಪುರಗಿರಿಯ ಉರಿಯು ಕೊಂಡಂತೆ
ಆಯತ-ಸ್ವಾಯತ-ಅನುಭಾವವ ನಾನೆತ್ತ ಬಲ್ಲೆನಯ್ಯಾ
ಗುರು-ಲಿಂಗ-ಜಂಗಮಕ್ಕೆ ಅರ್ಥಪ್ರಾಣಾಭಿಮಾನಂಗಳನಿತ್ತ
ನಿನ್ನ ಭಕ್ತರ ಭೃತ್ಯರಿಗಾಳಾಗಿಪ್ಪೆನಯ್ಯಾ
ನಿಮ್ಮ ಶರಣರ ಸಂಗವನಲ್ಲದೆ ಬೇರೊಂದ ಬಯಸೆನಯ್ಯ
ಚೆನ್ನಮಲ್ಲಿಕಾರ್ಜುನ
೧೬೨.
ಅಷ್ಟದಳಕಮಲದ ಆತ್ಮನೊಳಗೆ ಸೃಷ್ಟಿ ಜನಿಸಿ
[ಕೂರುಮ ದಿಗುದಂತಿ] ದಿಗುವಳಯವ ನುಂಗಿ
ನಿಜ ಶೂನ್ಯ ತಾನಾದ ಬಳಿಕ
ತನ್ನ ತಾನರಿದ ನಿಜಪದ ಭಿನ್ನಯೋಗಕ್ಕೆ ಬರಬಹುದೇ?
ಕಂಗಳ ನೋಟದಲ್ಲಿ
ಮನ ಸೊಗಸಿನಲ್ಲಿ
ಅನಂಗನ ಧಾಳಿಯನಗಲಿದೆವಣ್ಣ
ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಗೊಳಗಹುದೇ?
ಎನ್ನ ದೇವ ಚೆನ್ನಮಲ್ಲಿಕಾರ್ಜುನನಲ್ಲದ
ಪರಪುರುಷರು ನಮಗಾಗದಣ್ಣ!
೧೬೩.
ನಮಗೆ ನಮ್ಮ ಲಿಂಗದ ಚಿಂತೆ
ನಮಗೆ ನಮ್ಮ ಭಕ್ತರ ಚಿಂತೆ, ಮನಗೆ ನಮ್ಮ ಆದ್ಯರ ಚಿಂತೆ
ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನನ ಚಿಂತೆಯಲ್ಲದೆ
ಲೋಕದ ಮಾತು ನಮಗೇಕಣ್ಣ?
೧೬೪.
ನಿಮ್ಮ ನಿಲುವಿಂಗೆ ನೀವು ನಾಚಬೇಡವೆ?
ಅನ್ಯರ ಕೈಲಿ ಅಲ್ಲ ಎನಿಸಿಕೊಂಬ ನಡೆ-ನುಡಿಯೇಕೆ?
ಅಲ್ಲ ಎನಿಸಿಕೊಂಬುದರಿಂದ, ಆ ಕ್ಷಣವೇ ಸಾವುದು ಲೇಸು ಕಾಣಾ
ಚೆನ್ನಮಲ್ಲಿಕಾರ್ಜುನ
೧೬೫.
ಶಿವಭಕ್ತರ ರೋಮ ನೊಂದರೆ
ಒಡನೆ ಶಿವನು ನೋವ ನೋಡಾ
ಶಿವಭಕ್ತರು ಪರಿಣಾಮಿಸಿದರೆ, ಒಡನೆ ಶಿವ ಪರಿಣಆಮಿಸುವ ನೋಡಾ !
ಭಕ್ತದೇಹಿಕ ದೇವ ಎಂಬ ಶ್ರುತಿ ಹೊಗಳುವ ಕಾರಣ
ಶಿವಭಕ್ತರ ಲೇಸು ಹೊಲ್ಲೆಹ ಶಿವನ ಮುಟ್ಟುವುದು
ತಾಯಿ ನೊಂದರೆ ಒಡಲ ಶಿಶು ನೋವ ತೆರನಂತೆ
ಚೆನ್ನಮಲ್ಲಿಕಾರ್ಜುನ-ತನ್ನ ಭಕ್ತರು ನೊಂದರೆ
ಒಡನೆ ತಾ ನೋವನು
೧೬೬.
ನೋಡುವ ಕಂಗಳಿಗೆ ರೂಪಿಂಬಾಗಿರಲು
ನೀವು ಮನ ನಾಚದೆ ಬಂದಿರಣ್ಣ!
ಕೇಳಿದ ಶ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣ!
ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣ!
ಮೂತ್ರವು ಬಿಂದು ಒಸರುವ ನಾಳವೆಂದು
ಕಂಗಾಣದೆ ಮುಂದುಗೆಟ್ಟು ಬಂದಿರಣ್ಣ!
ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ
ಹೋಗಲಾಡಿಸಿಕೊಂಡು
ಇದಾವ ಕಾರಣವೆಂದರಿಯದೆ, ನೀವು ನರಹೇತುವೆಂದರಿದೂ
ಮನ ಹೇಸದೆ ಬಂದಿರಣ್ಣ!
ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರರು
ಛೀ ಹೋಗಾ ಮರುಳೇ!
೧೬೭.
ಲೇಸು ಹಾಸು, ನೋಟವಾಭರಣ,
ಆಲಿಂಗನ ವಸ್ತ್ರ, ಚುಂಬನವಾರೋಗಣೆ,
ಲಲ್ಲೆವಾತು ತಾಂಬೂಲ, ಲವಲವಿಕೆಯೇ ಅನುಲೇಪನವೆನಗೆ
ಚೆನ್ನಮಲ್ಲಿಕಾರ್ಜುನನ ಕೂಟ ಪರಮಸುಖವವ್ವ!
೧೬೮.
ಆಡುವುದು, ಪಾಡುವುದು; ಕೇಳುವುದು, ಹೇಳುವುದು
ನಗೆ-ನುಡಿ ಸರಸ ಸಮ್ಮೇಳನವಾಗಿಪ್ಪುದು ಶರಣರೊಡನೆ
ಚೆನ್ನಮಲ್ಲಿಕಾರ್ಜುನ ಕೊಟ್ಟ ಆಯುಷ್ಯ ಉಳ್ಳನ್ನಕ್ಕರ
ಲಿಂಗಸುಖಿಗಳ ಸಂಗದಲ್ಲಿ ದಿನಂಗಳ ಕಳೆವುದು!
೧೬೯.
ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ!
ಜಂಗಮವೆನ್ನ ನಿಧಿನಿಧಾನ!
ಜಂಗಮವೆನ್ನ ಹರುಷದ ಮೇರೆ!
ಚೆನ್ನಮಲ್ಲಿಕಾರ್ಜುನ,
ಜಂಗಮದ ತಿಂಥಿಣಿಯಲ್ಲಿ ಓಲಾಡುವೆ
೧೭೦.
ಅರಿಯದವರೊಡನೆ ಸಂಗವ ಮಾಡಿದರೆ
ಕಲ್ಲು ಹೊಯ್ದು ಕಿಡಿಯ ತೆಗೆದುಕೊಂಬಂತೆ
ಬಲ್ಲವರೊಡನೆ ಸಂಗವ ಮಾಡಿದರೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗ
ಕರ್ಪುರಗಿರಿಯ ಉರಿಯು ಕೊಂಡಂತೆ
Comments
Post a Comment