Skip to main content

ಅಕ್ಕನ ವಚನಗಳು - 1 ರಿಂದ 10 ರವರೆಗೆ

೧.
ಅಘಟಿತ-ಘಟಿತನ ಒಲವಿನ ಶಿಶು
ಕಟ್ಟಿದೆನು ಜಗಕ್ಕೆ ಬಿರುದನು
ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಂಗಳಿಗೆ
ಇಕ್ಕಿದೆನು ಕಾಲಲ್ಲಿ ತೊಡರನು
ಗುರುಕೃಪೆಯೆಂಬ ತಿಗುರನಿಕ್ಕಿ
ಮಹಾಶರಣೆಂಬ ತಿಲಕವನಿಕ್ಕಿ
ಶಿವಶರಣೆಂಬ ಅಲಗ ಕೊಂಡು
ನಿನ್ನ ಕೊಲುವೆ ಗೆಲುವೆ!
ಬಿಡು ಬಿಡು ಕರ್ಮವೇ, ನಿನ್ನ ಕೊಲ್ಲದೇ ಮಾಣೆನು!!
ಕಡೆಹಿಸಿಕೊಳ್ಪದೆನ್ನ ನುಡಿಯ ಕೇಳಾ-
ಕೆಡದ ಶಿವಶರಣೆಂಬ ಅಲಗನೆ ಕೊಂಡು
ನಿನ್ನ ಕೊಲುವೆ ಗೆಲುವೆ ನಾನು!
ಬ್ರಹ್ಮಪಾಶವೆಂಬ ಕಳನನೆ ಸವರಿ
ವಿಷ್ಣುಮಾಯೆಯೆಂಬ ಎಡಗೋಲ ನೂಕಿ
ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿಕಾಡುವೆ ನಾನು.
೨.
ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜಿದಂತೆ
ಭಾವದ ಮರೆಯ ಬ್ರಹ್ಮನಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯಬಾರದು!
೩.
ಈಳೆ-ನಿಂಬೆ-ಮಾವು-ಮಾದಲಕ್ಕೆ
ಹುಳಿನೀರೆರೆದವರಾರಯ್ಯ?
ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ?
ಕಳವೆ-ಶಾಲಿಗೆ ಓಗರದ ಉದಕವನೆರೆದವರಾರಯ್ಯ?
ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ!
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ!
೪.
ತನ್ನ ವಿನೋದಕ್ಕೆ ತಾನೇ ಸೃಜಿಸಿದ ಜಗತ್ತ!
ತನ್ನ ವಿನೋದಕ್ಕೆ ತಾನೇ ಸುತ್ತಿದನದಕ್ಕೆ ಸಕಲ ಪ್ರಪಂಚ!!
ತನ್ನ ವಿನೋದಕ್ಕೆ ತಾನೇ ತಿರಿಗಿಸಿದನನಂತ ಭವದುಃಖಂಗಳಲ್ಲಿ
ಇಂತೆನ್ನ ಚೆನ್ನಮಲ್ಲಿಕಾರ್ಜುನದೇವನೆಂಬ ಪರಶಿವನು
ತನ್ನ ಜಗದ್ವಿಲಾಸ ಸಾಕಾದ ಮತ್ತೆ
ತಾನೇ ಪರಿವನಾ ಮಾಯಾಪಾಶವನು!
೫.
ಶಿವಂಗೆ ತಪ್ಪಿದ ಕಾಲ ಭಸ್ಮವಾದುದನರಿಯಾ?
ಶಿವಂಗೆ ತಪ್ಪಿದ ಕಾಮನುರಿದುದನರಿಯಾ?
ಶಿವಂಗೆ ತಪ್ಪಿದ ಬ್ರಹ್ಮನ ಶಿರ ಹೋದುದನರಿಯಾ?
ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ತಪ್ಪಿದೆಡೆ
ಭವಘೋರನರಕವೆಂದರಿಯಾ ಮರುಳೇ.




೬.
ಕಾಮ ಬಲ್ಲಿದನೆಂದರೆ
ಉರುಹಿ ಭಸ್ಮವ ಮಾಡಿದ!
ಕಾಲ ಬಲ್ಲಿದನೆಂದರೆ ಕೆಡಹಿ ತುಳಿದ!
ಬ್ರಹ್ಮ ಬಲ್ಲಿದನೆಂದರೆ
ಶಿರವ ಚಿವುಟಿಯಾಡಿದ!
ಎಲೆ ಅವ್ವ, ನೀನು ಕೇಳಾ ತಾಯೆ,
ವಿಷ್ಣು ಬಲ್ಲಿದನೆಂದರೆ
ಮುರಿದು ಕಂಕಾಳವ ಪಿಡಿದ!
ತ್ರಿಪುರದ ಕೋಟೆ ಬಲ್ಲಿತ್ತೆಂದರೆ
ನೊಸಲ ಕಣ್ಣಿಂದುರುಹಿದನವ್ವ!
ಇದು ಕಾರಣ
ಚೆನ್ನಮಲ್ಲಿಕಾರ್ಜುನ ಗಂಡನೆನಗೆ!
ಜನನಮರಣಕ್ಕೊಳಗಾಗದವನ
ಬಲುಹನೇನ ಬಣ್ಣಿಪೆನವ್ವ!?
೭.
ಅಯ್ಯ, ಪಾತಾಳವಿತ್ತಿತ್ತ, ಶ್ರೀಪಾದವತ್ತತ್ತ
ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ
ಅಯ್ಯ, ದಶದಿಕ್ಕುಇತ್ತಿತ್ತ, ದಶಭುಜಗಳತ್ತತ್ತ
ಚೆನ್ನಮಲ್ಲಿಕಾರ್ಜುನಯ್ಯ,
ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ!
೮.
ದೇವ, ಎನ್ನ ಹೃದಯಕಮಲದೊಳಗೆ ಪ್ರಜ್ವಳಿಪ್ಪ ಬೆಳಗೆ
ದೇವ, ಎನ್ನ ಮನದ ಮೊನೆಯೊಳೊಪ್ಪುತಿರ್ಪ ಬೆಳಗಿನೊಳಗೆ
ಗುರುವೆ ಬಾರ, ಪರವೆ ಬಾರ, ವರವೆ ಬಾರ, ದೇವದೇವ
ಹರನೆ ಬಾರ, ಸುಕೃತಸಾರ ಸರ್ಪಹಾರ ಬಾರ ದೇವ
ವೀರಭದ್ರ, ರುದ್ರ, ದುರಿತದೂರ, ವಿಶ್ವರೂಪ ಬಾರ
ಮಾರಮಥನ, ಪುಣ್ಯಕಥನ, ಸಹಜಮಿಥುನರೂಪ ಬಾರ
ತರಗಿರಿಯ ಪಿರಿಯ ಸಿರಿಯ ಸತ್ಯಶರಣ ಭರಣ ಬಾರ
ಬಾರ ಫಲವೆ, ಫಲದ ರಸವೆ, ರಸದ ಸವಿಯ ಸುಖವೆ ಬಾರ
ಬಾರ ಗುರುವೆ, ಬಾರ ಪರವೆ, ಬಾರ ವರವೆ ಮಲ್ಲಿನಾಥ
ಬಾರ ಧನವೆ, ಬಾರ ಸುಕೃತಸಾರ ಬಾರ ಮಲ್ಲಿನಾಥ
ಬರ ಸಿದ್ಧ, ಭವವಿರುದ್ಧ ಸುಪ್ರಸಿದ್ಧ ಮಲ್ಲಿನಾಥ
ಬಾರ ಮುಡುಹು ಮುಂದಲೆಗಳ ಕುರುಳನೀವೆ ಮಲ್ಲಿನಾಥ ಬಾರ
೯.
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತಯನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯ.
೧೦.
ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯ?
ನೀನು ಬಹಿರಂಗವ್ಯವಹಾರದೂರಸ್ಥನು!
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯ?
ನೀನು ವಾಙ್ಮನಕ್ಕತೀತನು
ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯ?
ನೀನು ನಾದಾತೀತನು
ಭಾವಜ್ಞಾನದಿಂದೊಲಿಸುವೆನೆ ಅಯ್ಯ?
ನೀನು ಮತಿಗತೀತನು
ಹೃದಯಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೇ ಅಯ್ಯ?
ನೀನು ಸರ್ವಾಂಗಪರಿಪೂರ್ಣನು
ಅಯ್ಯ ನಿನ್ನ ಒಲಿಸಲೆನ್ನಳವಲ್ಲ
ನೀ ಒಲಿವುದೆ ಸುಖವಯ್ಯ ಚೆನ್ನಮಲ್ಲಿಕಾರ್ಜುನಯ್ಯ!

Comments

Popular posts from this blog

ಸರ್ವಜ್ಞನ ವಚನಗಳು - 91 ರಿಂದ 100

ಸರ್ವಜ್ಞನ ವಚನಗಳು -  91 ರಿಂದ 100 ೯೧. ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು ಹುಟ್ಟಿಸನದೇಕೆ ಸರ್ವಜ್ಞ ೯೨. ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು ಮತ್ತೆ ಪಾಂಡವರಿಗಾಳಾದ ಹರಿಯು ತಾ ನೆತ್ತಣಾ ದೈವ ಸರ್ವಜ್ಞ ೯೩. ನರಸಿಂಹನವತಾರ ಹಿರಿದಾದ ಅದ್ಭುತವು ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ ೯೪. ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ ಪಾಲಿಸದೆ ಹೋದ ಸರ್ವಜ್ಞ ೯೫. ಹರನವನ ಕೊಲುವಂದು, ಎರಳೆಯನು ಎಸೆವಂದು ಮರಳಿ ವರಗಳನು ಕೊಡುವಂದು ಪುರಹರಗೆ ಸರಿಯಾದ ಕಾಣೆ ಸರ್ವಜ್ಞ ೯೬. ಹರಿ ಬೊಮ್ಮನೆಂಬವರು, ಹರನಿಂದಲಾದವರು ಅರಸಿಗೆ ಆಳು ಸರಿಯಹನೆ ಶಿವನಿಂದ ಮೆರೆವರಿನ್ನಾರು ಸರ್ವಜ್ಞ ೯೭. ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ ನೆರೆಹತ್ತು ಜನನವಾಹರಿಗೆ ಇವರುಗಳು ಸರಿಯಹರೆ ಸರ್ವಜ್ಞ ೯೮. ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ ಸರಿಯಾರು ಹೇಳಿ ಸರ್ವಜ್ಞ ೯೯. ಇಂದ್ರನಾನೆಯನೇರಿ ಒಂದನೂ ಕೊಡಲರಿಯ ಚ್ಂದ್ರಶೇಖರನು ಮುದಿಯೆತ್ತನೇರಿ ಬೇಕೆಂದುದನು ಕೊಡುವ ಸರ್ವಜ್ಞ ೧೦೦. ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ ಶಂಭುವಿದ್ದಂತೆ ಮತ್ತೊಂದು ದೈವವನು ನಂಬುವನೆ ಹೆಡ್ಡ ಸರ್ವಜ್ಞ

ಬಸವಣ್ಣನ ವಚನಗಳು - 331 ರಿಂದ 340 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೩೧. ವ್ಯಾಸ ಬೋಯಿತಿಯ ಮಗ. ಮಾರ್ಕಂಡೇಯ ಮಾತಂಗಿಯ ಮಗ. ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿ ಭೋ! ಕುಲದಿಂದ ಮುನ್ನೇನಾದಿರಿ ಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ. ದೂರ್ವಾಸ ಮಚ್ಚಿಗ. ಕಶ್ಯಪ ಕಮ್ಮಾರ. ಕೌಂಡಿನ್ಯನೆಂಬ ಋಷಿ ಮೂರುಲೋಕವರಿಯೆ ನಾವಿದ ಕಾಣಿ ಭೋ! ನಮ್ಮ ಕೂಡಲಸಂಗನ ವಚನವಿಂತೆಂದುದು- "ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ! ೩೩೨. ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ. ಜಲಬಿಂದುವಿನ ವ್ಯವಹಾರವೊಂದೇ. ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ. ಏನನೋದಿ ಏನ ಕೇಳಿ ಏನು ಫಲ ?! ಕುಲಜನೆಂಬುದಕ್ಕೆ ಆವುದು ದೃಷ್ಟ ? "ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸ್ಸಮಸ್ತಸ್ಮಾತ್ ವರ್ಣಾನಾಂ ಕಿಂ ಪ್ರಯೋಜನಂ ?" || ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ? ಇದು ಕಾರಣ, ಕೂಡಲಸಂಗಮದೇವ, ಲಿಂಗಸ್ಥಲವನರಿದವನೇ ಕುಲಜನು! ೩೩೩. ಕೊಲುವವನೇ ಮಾದಿಗ! ಹೊಲಸ ತಿಂಬವನೇ ಹೊಲೆಯ! ಕುಲವೇನೋ ? ಆವದಿರ ಕುಲವೇನೋ ? ಸಕಲ ಜೀವಾ...

ಅಕ್ಕನ ವಚನಗಳು - 271 ರಿಂದ 280 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೨೭೧. ತನು ಶುದ್ಧ, ಮನ ಶುದ್ಧ, ಭಾವಶುದ್ಧವಾದವರನೆನಗೊಮ್ಮೆ ತೋರಾ! ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ, ನಿತ್ಯಶುದ್ಧರಾದವರನೆನಗೊಮ್ಮೆ ತೋರಾ! ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ ೨೭೨. ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ ೨೭೩. ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಸತ್ಯಶರಣರನುಭಾವವ! ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೇ! ೨೭೪. ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ! ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ! ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ! ಎಡರುವ ಹರಳೆಲ್ಲ ಚಿಂತಾಮಣಿ! ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ ನೋಡುತ ಬಂದು, ಕದಳಿಯ ಬನವ ಕಂಡೆ ನಾನು ೨೭೫. ತನುವೆಲ್ಲ ...