Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.
೩೬೧.
ಕೋಣನ ಹೇರಿಗೆ ಕುನ್ನಿ ಬಸುಗುತ್ತಬಡುವಂತೆ
ತಾವು ನಂಬರು, ನಂಬುವರನು ನಂಬಲೀಯರು!
ತಾವು ಮಾಡರು, ಮಾಡುವರನು ಮಾಡಲೀಯರು!
ಮಾಡುವ ಭಕ್ತರ ಕಂಡು ಸೈರಿಸಲಾರದವರ
ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ ಕೂಡಲಸಂಗಮದೇವ.
೩೬೨.
ಚೇಳಿಂಗೆ ಬಸುರಾಯಿತ್ತೆ ಕಡೆ!
ಬಾಳೆಗೆ ಫಲವಾಯಿತ್ತೆ ಕಡೆ ನೋಡಾ !
ರಣರಂಗದಲ್ಲಿ ಕಾದುವ ಓಲೆಯಕಾರಂಗೆ ಓಸರಿಸಿತ್ತೆ ಕಡೆ!
ಮಾಡುವ ಭಕ್ತಂಗೆ ಮನಹೀನವಾದರೆ
ಅದೇ ಕಡೆ ಕೂಡಲಸಂಗಮದೇವ.
೩೬೩.
ಹುಲಿಯ ಹಾಲು ಹುಲಿಗಲ್ಲದೆ
ಹೊಲದ ಹುಲ್ಲೆಗುಣಬಾರದು
ಕಲಿಯ ಕಾಲ ತೊಡರು ಛಲದಾಳಿಂಗಲ್ಲದೆ ಇಕ್ಕಬಾರದು.
ಅಳಿಮನದಾಸೆಯವರ ಮೂಗ ಹಲುದೋರ ಕೊಯ್ವ
ಕೂಡಲಸಂಗಮದೇವ.
೩೬೪.
ಅಲಗಲಗು ಮೋಹಿದಲ್ಲದೆ
ಕಲಿತನವ ಕಾಣಬಾರದು.
ನುಡಿವ ನುಡಿ ಜಾರಿದರೆ
ಮನಕ್ಕೆ ಮನ ನಾಚಬೇಕು.
ಶಬ್ದಗಟ್ಟಿಯತನದಲ್ಲಿ
ಎಂತಪ್ಪುದಯ್ಯ ಭಕ್ತಿ ?
ಪಾಪಿಯ ಕೂಸನೆತ್ತಿದಂತೆ-
ಕೂಡಲಸಂಗಮದೇವರ ಭಕ್ತಿ
ಅಳಿಮನದವರಿಗೆ ಅಳವಡದಯ್ಯ!
೩೬೫.
ಹರಬೀಜವಾದರೆ ಹಂದೆ ತಾನಪ್ಪನೇ ?
ಒರೆಯ ಬಿಚ್ಚಿ ಇರಿಯದವರ ಲೋಕ ಮೆಚ್ಚುವುದೆ ?
ಚಲ್ಲಣವುಟ್ಟು ಕೈಯ ಪಟ್ಟೆಹವಿಡಿದು
ಗರುಡಿಯ ಕಟ್ಟಿ ಶ್ರಮವ ಮಾಡುವ-
ಅಂತೆ ತನ್ನ ತಪ್ಪಿಸಿಕೊಂಡರೆ ಶಿವ ಮೆಚ್ಚುವನೆ ?
ಅರಿಯದವರಿಗೆ ಒಳ್ಳೆ ಹೆಡೆಯೆತ್ತಿ ಆಡುವಂತೆ
ಬೊಳ್ಳೆಗನ ಭಕ್ತಿ ಕೂಡಲಸಂಗಮದೇವ.
೩೬೬.
ಮೊನೆ ತಪ್ಪಿದ ಬಳಿಕ,
ಅಲಗೇನ ಮಾಡುವುದು ?
ವಿಷ ತಪ್ಪಿದ ಬಳಿಕ,
ಹಾವೇನ ಮಾಡುವುದು ?
ಭಾಷೆ ತಪ್ಪಿದ ಬಳಿಕ
ದೇವನೇ ಬಲ್ಲಿದ;
ಭಕ್ತನೇನ ಮಾಡುವನಯ್ಯ ?
ಭಾಷೆ ತಪ್ಪಿದ ಬಳಿಕ
ಪ್ರಾಣದಾಸೆಯನು ಹಾರಿದರೆ
ಮೀಸಲನು ಸೊಣಗ ಮುಟ್ಟಿದಂತೆ
ಕೂಡಲಸಂಗಮದೇವ.
೩೬೭.
ವೀರ, ವ್ರತಿ, ಭಕ್ತನೆಂದು ಹೊಗಳಿಕೊಂಬಿರಿ!
ಹೇಳಿರಯ್ಯ.
ವೀರನಾದರೆ ವೈರಿಗಳು ಮೆಚ್ಚಬೇಕು!
ವ್ರತಿಯಾದರೆ ಅಂಗನೆಯರು ಮೆಚ್ಚಬೇಕು!
ಭಕ್ತನಾದರೆ ಜಂಗಮ ಮೆಚ್ಚಬೇಕು.
ಈ ನುಡಿಯೊಳಗೆ ತನ್ನ ಬಗೆಯಿರೆ
ಬೇಡಿದ ಪದವಿಯನೀವ ಕೂಡಲಸಂಗಮದೇವ.
೩೬೮.
ಕಟ್ಟಿ ಬಿಡುವನೇ ಶರಣನು ?
ಬಿಟ್ಟು ಹಿಡಿವನೇ ಶರಣನು ?
ನಡೆದು ತಪ್ಪುವನೇ ಶರಣನು ?
ನುಡಿದು ಹುಸಿವನೇ ಶರಣನು ?
ಸಜ್ಜನಿಕೆ ತಪ್ಪಿದರೆ
ಕೂಡಲಸಂಗಯ್ಯ ಮೂಗ ಹಲುದೋರ ಕೊಯ್ವ!
೩೬೯.
ಒಡನೆ ಹುಟ್ಟಿದುದಲ್ಲ;
ಒಡನೆ ಬೆಳೆದುದಲ್ಲ;
ಎಡೆಯಲಾದೊಂದುಡಿಗೆಯನುಟ್ಟು ಸಡಿಲಿದರೆ
ಲಜ್ಜೆ-ನಾಚಿಕೆಯಾಯಿತ್ತೆಂಬ ನುಡಿ ದಿಟವಾಯಿತ್ತು ಲೌಕಿಕದಲ್ಲಿ
ಪಡೆದ ಗುರುಕರುಣದೊಡನೆ ಹುಟ್ಟಿದ
ನೇಮವನು ಬಿಡದಿರೆಲವೋ!
ಬಿಟ್ಟರೆ ಕಷ್ಟ!
ಕೂಡಲಸಂಗಮದೇವನು
ಅಡಸಿ ಕೆಡಹುವ ನಾಯಕನರಕದಲ್ಲಿ.
೩೭೦.
ಛಲಬೇಕು ಶರಣಂಗೆ ಪರಧನವನೊಲ್ಲೆಂಬ!
ಛಲಬೇಕು ಶರಣಂಗೆ ಪರಸತಿಯನೊಲ್ಲೆಂಬ!
ಛಲಬೇಕು ಶರಣಂಗೆ ಪರದೈವವನೊಲ್ಲೆಂಬ
ಛಲಬೇಕು ಶರಣಂಗೆ ಲಿಂಗಜಂಗಮವೊಂದೆಂಬ!
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ!
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.
Comments
Post a Comment