Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.
೩೭೧.
ಜಂಬೂದ್ವೀಪನವಖಂಡಪೃಥ್ವಿಯೊಳಗೆ
ಕೇಳಿರಯ್ಯ ಎರಡಾಳಿನ ಭಾಷೆಯ!
ಕೊಲುವೆನೆಂಬ ಭಾಷೆ ದೇವನದು,
ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಕಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವ.
೩೭೨.
ಶಿವಭಕ್ತನಾಗಿ ತನ್ನ ಹಿಡಿದಹೆನೆಂದು ಹೋದರೆ
ನುಗ್ಗುಮಾಡುವ, ನುಸಿಯ ಮಾಡುವ!
ಮಣ್ಣುಮಾಡುವ, ಮಸಿಯ ಮಾಡುವ!
ಕೂಡಲಸಂಗಮದೇವರ ನೆರೆನಂಬಿದನಾದರೆ
ಕಡೆಗೆ ತನ್ನಂತೆ ಮಾಡುವ.
೩೭೩.
ಅರೆವನಯ್ಯ ಸಣ್ಣವಹನ್ನಕ
ಒರೆವನಯ್ಯ ಬಣ್ಣಗಾಬನ್ನಕ
ಅರೆದರೆ ಸುಣ್ಣವಾಗಿ,
ಒರೆದರೆ ಬಣ್ಣವಾದರೆ
ಕೂಡಲಸಂಗಮದೇವನೊಲಿದು ಸಲಹುವನು.
೩೭೪.
ಎಡದ ಪಾದದಲೊದ್ದರೆ ಬಲದ ಪಾದವ ಹಿಡಿವೆ!
ಬಲದ ಪಾದದಲೊದ್ದರೆ ಎಡದ ಪಾದವ ಹಿಡಿವೆ!
ತ್ರಾಹಿ, ತ್ರಾಹಿ! ತಪ್ಪೆನ್ನದು, ಕ್ಷಮೆ ನಿನ್ನದು!
ಕೂಡಲಸಂಗಮದೇವ ನಿಮ್ಮ ಕರುಣದ ಕಂದ ನಾನು!
೩೭೫.
ಅಂಜಿದರಾಗದು, ಅಳುಕಿದರಾಗದು!
ವಜ್ರಪಂಜರದೊಳಗಿದ್ದರಾಗದು!
ತಪ್ಪದೆಲವೋ ಲಲಾಟಲಿಖಿತ!
ಕಕ್ಕುಲತೆಬಟ್ಟರಾಗದು ನೋಡಾ!
ಧೃತಿಗೆಟ್ಟು ಮನ ಧಾತುಗೆಟ್ಟರೆ
ಅಪ್ಪುದು ತಪ್ಪದು ಕೂಡಲಸಂಗಮದೇವ.
೩೭೬.
ಆಯುಷ್ಯ ತೀರಿದಲ್ಲದೆ ಮರಣವಿಲ್ಲ.
ಭಾಷೆ ತೀರಿದಲ್ಲದೆ ದಾರಿದ್ರ್ಯವಿಲ್ಲ.
ಅಂಜಲದೇಕೋ ಲೋಕವಿಗರ್ಹಣೆಗೆ ?
ಅಂಜಲದೇಕೋ ಕೂಡಲಸಂಗಮದೇವ ನಿಮ್ಮಾಳಾಗಿ ?
೩೭೭.
ಮನಕ್ಕೆ ಮನ ಒಂದಾಗಿ, ಧನಕ್ಕೆ ಧನ ಒಂದಾಗಿ;
ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು.
ಪ್ರಾಣಕ್ಕೆ ಪ್ರಾಣ ಒಂದಾಗಿ, ಶುಭಸೂಚನೆ ಒಂದಾಗಿರದ
ನಚ್ಚು ಮಚ್ಚು ಪಾರವೈದುವುದೆ ?
ಶಿರ ಹರಿದರೇನು ? ಕರುಳು ಕುಪ್ಪಳಿಸಿದರೇನು ?
ಇಂತಪ್ಪ ಸಮಸ್ತ ವಸ್ತುವೆಲ್ಲ ಹೋದರೇನು ?
ಚಿತ್ತ-ಮನ-ಬುದ್ಧಿಯೊಂದಾದ ಮಚ್ಚು
ಬಿಚ್ಚಿ ಬೇರಾಗದಿದ್ದರೆ
ಮೆಚ್ಚುವ ನಮ್ಮ ಕೂಡಲಸಂಗಮದೇವ.
೩೭೮.
ಎನಿಸೆನಿಸೆಂದಡೆಯೂ ನಾ ಧೃತಿಗೆಡೆನಯ್ಯ ?
ಎಲುದೋರಿದಡೆಯೂ, ನರ ಹರಿದಡೆಯೂ,
ಕರಳು ಕುಪ್ಪಳಿಸಿದಡೆಯೂ ನಾ ಧೃತಿಗೆಡೆನಯ್ಯ ?
ಸಿರ ಹರಿದು ಅಟ್ಟೆ ನೆಲಕ್ಕೆ ಬಿದ್ದಡೆಯೂ
ನಾಲಗೆ ಕೂಡಲಸಂಗ ಶರಣೆನುತಿಪ್ಪುದಯ್ಯ ?
೩೭೯.
ಒಣಗಿಸಿಯೆನ್ನ ಘಣಘಣಲನೆ ಮಾಡಿದಡೆಯೂ
ಹರಣವುಳ್ಳನ್ನಕ ನಿಮ್ಮ ಚರಣವ ನೆನೆವುದ ಮಾಣೆ, ಮಾಣೆ!
ಶರಣೆಂಬುದ ಮಾಣೆ, ಮಾಣೆ!
ಕೂಡಲಸಂಗಮದೇವಯ್ಯ
ಎನ್ನ ಹೆಣನ ಮೇಲೆ ಕಂಚಿಟ್ಟುಂಡೊಡೆಯು ಮಾಣೆ, ಮಾಣೆ!
೩೮೦.
ಜಾಗ್ರತ್-ಸ್ವಪ್ನ-ಸುಷುಪ್ತಿಯಲ್ಲಿ
ಮತ್ತೊಂದ ನೆನೆದಡೆ ತಲೆದಂಡ, ತಲೆದಂಡ!
ಹುಸಿಯಾದಡ ದೇವಾ, ತಲೆದಂಡ! ತಲೆದಂಡ!
ಕೂಡಲಸಂಗಮದೇವ ನೀವಲ್ಲದೆ ಅನ್ಯವ ನೆನೆದಡೆ
ತಲೆದಂಡ, ತಲೆದಂಡ!
Comments
Post a Comment