Skip to main content

ಬಸವಣ್ಣನ ವಚನಗಳು - 391 ರಿಂದ 400 ರವರೆಗೆ

Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.

Please follow my post and post your valuable comments.
 
೩೯೧.
ಒಡವೆ-ಭಂಡಾರ-ಕಡವರ-ದ್ರವ್ಯವ
ಬಡ್ಡಿಯ ವ್ಯವಹಾರಕ್ಕೆ ಕೊಟ್ಟು
ಮನೆಯ ಗೊಂಟಿನಲ್ಲಿ ಹೊಯ್ದುಕೊಂಡಿದ್ದೆನಾದರೆ
ಅದು ಎನ್ನರ್ಥವಲ್ಲ! ಅನರ್ಥವೆಂಬೆ!!
ಸಂಗಮ ದೇವ, ನೀ ಜಂಗಮರೂಪಾಗಿ ಬಂದು
ಆ ಧನವನು ನೀ ಬಲ್ಲಂತೆನ್ನ ಮುಂದೆ ಸೂರೆಗೊಳ್ಳುತ್ತಿರಲು
ನಾ ಬೇಕು-ಬೇಡೆಂದು ಮನದಲ್ಲಿ ಮರುಗಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಮನದೊಡೆಯ, ನೀನೆ ಬಲ್ಲೆ!
ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ
ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ-
ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆ ಚೆಲುವೆ
ಆಕೆಯನು, ಸಂಗಮದೇವ, ನೀ ಜಂಗಮರೂಪಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿದ್ದ ಸತಿಯೆಂದು ವಾಯಕ್ಕೆ ಮರುಗಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ ಮನದೊಡೆಯ, ನೀನೆ ಬಲ್ಲೆ!
ಪ್ರತ್ಯಕ್ಷವಾಗಿ ಸಿರಿಯಾಳ-ಚಂಗಳೆಯರ ಮನೆಗೆ ಬಂದು
ಅವರ ಮಗನ ಬೇಡುವಂತಲ್ಲ-
ಸಂಗಮ ದೇವ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಹನು
ನೀ ಜಂಗಮರೂಪಾಗಿ ಬಂದು ಅವನ ಹಿಡಿದು
ಎನ್ನ ಮುಂದೆ ಹೆಡಗುಡಿಯ ಕಟ್ಟಿ ಚಿನಿಖಂಡವ ಮಾಡಿ
ಬಾಣಸವ ಮಾಡುವಾಗಲು
ಎನ್ನುದರದಲ್ಲಿ ಬಂದ ಪುತ್ರನೆಂದು ವಾಯಕ್ಕೆ ಮರುಗಿದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಮನದೊಡೆಯ, ನೀನೆ ಬಲ್ಲೆ!
ಇಂತೀ ತ್ರಿವಿಧವು ಹೊರಗಣವು-
ಎನ್ನ ನೋವಿನೊಳಗಲ್ಲ! ಎನ್ನ ಬೇನೆಯೊಳಗಲ್ಲ!
ಇನ್ನು ನಾನಿದ್ದಿಹೆ-
ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ ನೀ ಜಂಗಮರೂಪಾಗಿ ಬಂದು
ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು!
ಬಸಿವ ಶೂಲಪ್ರಾಪ್ತಿಯ ಮಾಡಿ ನೋಡು!
ಸೂಜಿಯ ಮೊನೆಯಂತಿದ್ದ ಶೂಲದ ಮೇಲಿಕ್ಕಿ ನೋಡು!
ನವಖಂಡವ ಮಾಡಿ ಕಡಿಕಡಿದು ನೋಡು!
ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ
ನೋಡು!
ಎಂತೆನ್ನ ಭಂಗಬಡಿಸಿ ನೋಡಿದರೆಯೂ
ಲಿಂಗಾರ್ಚನೆಯ ಮಾಡುವುದ ಬಿಡೆ,
ಜಂಗಮದಾಸೋಹವ ಮಾಡುವುದು ಬಿಡೆ.
ಪಾದತೀರ್ಥ ಪ್ರಸಾದವ ಕೊಂಬುದ ಬಿಡೆ.
ಇಂತೀ ತ್ರಿವಿಧಕ್ಕೆ ರೋಷವ ಮಾಡಿ ಬಿಟ್ಟೆನಾದರೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಇನಿತರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗ ಕೊಯಿ
ಕೂಡಲಸಂಗಮದೇವ.

೩೯೨.
ಅರ್ಥವನರ್ಥವ ಮಾಡಿ ಕೋಳಾಹಳಂಗೈವುತ್ತಿರಲಿ;
ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿವುತ್ತಿರಲಿ!
ಮುಟ್ಟಿದ ಸ್ತ್ರೀಯ ಕಣ್ಣ ಮುಂದೆ ಅಭಿಮಾನಂಗೊಂಡು
ನೆರೆವುತ್ತಿರಲಿ.
ಇಂತೀ ತ್ರಿವಿಧವು ಹೊರಗಣವು.
ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡವ ಕೊಯ್ಯಲಿ.
ಇಕ್ಕುವ ಶೂಲ ಪ್ರಾಪ್ತಿಸಲಿ
ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ,
ಮತ್ತೆಯೂ ಲಿಂಗಾರಾಧನೆಯ ಮಾಡುವೆ,
ಜಂಗಮಾರಾಧನೆಯ ಮಾಡುವೆ,
ಪ್ರಸಾದಕ್ಕೆ ತಪ್ಪೆ.
ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದರೆ
ನೀನಂದೇ ಮೂಗ ಕೊಯಿ ಕೂಡಲಸಂಗಮದೇವ.

೩೯೩.
ತನುವ ಬೇಡಿದಡೀವೆ, ಮನವ ಬೇಡಿದಡೀವೆ,
ಧನವ ಬೇಡಿದಡೀವೆ; ಬೇಡು ಬೇಡೆಲೆ ಹಂದೆ.
ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ.
ಕೂಡಲ ಸಂಗಮ ದೇವ,
ನಿಮಗಿತ್ತು ಶುದ್ಧನಾಗಿಪ್ಪೆ ನಿಮ್ಮ ಪುರಾತರ ಮನೆಯಲ್ಲಿ.

೩೯೪.
ಓಡದಿರೋಡದಿರು ನಿನ್ನ ಬೇಡುವವ ನಾನಲ್ಲ!
ಶಿವನೇ, ನೋಡುವೆ ಕಣ್ಣ ತುಂಬ! ಆಡಿ-ಪಾಡಿ ನಲಿದಾಡುವೆ!
ಬೇಡೆನ್ನ ಕೂಡೆ ಮಾತನಾಡಲಾಗದೆ ?
ಕೂಡಲಸಂಗಮದೇವ, ನೀನಾಡಿಸುವ ಗೊಂಬೆ ನಾನು!

೩೯೫.
ನಾನು ಆರಂಬವ ಮಾಡುವೆನಯ್ಯ ಗುರುಪೂಜೆಗೆಂದು.
ನಾನು ಬೆವಹಾರವ ಮಾಡುವೆನಯ್ಯ ಲಿಂಗಾರ್ಚನೆಗೆಂದು
ನಾನು ಪರಸೇವೆಯ ಮಾಡುವೆನಯ್ಯ
ಜಂಗಮದಾಸೋಹಕ್ಕೆಂದು.
ನಾನಾವಾವ ಕರ್ಮಂಗಳ ಮಾಡಿದಡೆಯೂ
ಆ ಕರ್ಮಫಲಭೋಗವ ನೀ ಕೊಡುವೆಯೆಂಬುದ
ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯದ ನಿಮಗಲ್ಲದೆ
ಮತ್ತೊಂದು ಕ್ರೀಯ ಮಾಡೆನು.
ನಿಮ್ಮ ಸೊಮ್ಮ ನಿಮಗೆ ಸಲ್ಲಿಸುವೆನು
ನಿಮ್ಮಾಣೆ ಕೂಡಲಸಂಗಮದೇವ.

೩೯೬.
ಹೊತ್ತಾರೆಯೆದ್ದು ಕಣ್ಣ ಹೊಸೆವುತ್ತ
ಎನ್ನ ಒಡಲಿಂಗೆ, ಎನ್ನ ಒಡವೆಗೆ,
ಎನ್ನ ಮಡದಿ ಮಕ್ಕಳಿಗೆಂದು ಕುದಿದೆನಾದರೆ
ಎನ್ನ ಮನಕ್ಕೆ ಮನವೇ ಸಾಕ್ಷಿ!
"ಆಶನೇ ಶಯನೇ ಯಾನೇ
ಸಂಪರ್ಕೇ ಸಹಭೋಜನೇ,
ಸಂಚರಂತಿ ಮಹಾಘೋರೇ
ನರಕೇ ಯಾವದಕ್ಷಯೇ"
ಎಂಬ ಶ್ರುತಿಯ ಬಸವಣ್ಣನೋದುವನು.
ಭವಿಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು
ಓಲೈಸಿಹೆನೆಂದು ನುಡಿವರಯ್ಯ ಪ್ರಮಥರು;
ಕೊಡುವೆನ್ನುತ್ತರವನವರಿಗೆ - ಕೊಡಲಮ್ಮೆ,
ಪ್ರತ್ಯುತ್ತರ ನಾಯಕನರಕವೆಂಬುದುಂಟಾಗಿ,
ಹೊಲೆಹೊಲೆಯರ ಮನೆಯ ಹೊಕ್ಕಾದರೆಯು,
ಸಲೆ ಕೈಕೂಲಿಯ ಮಾಡಿಯಾದರೆಯು,
ನಿಮ್ಮ ನಿಲವಿಂಗೆ ಕುದಿವೆನಲ್ಲದೆ,
ಎನ್ನ ಒಡಲವಸರಕ್ಕೆ ಕುದಿದೆನಾದರೆ
ತಲೆದಂಡ ಕೂಡಲಸಂಗಮದೇವ.

೩೯೭.
ಅಣ್ಣ, ತಮ್ಮ, ಹೆತ್ತಣ್ಣ ಗೋತ್ರವಾದರೇನು
ಲಿಂಗಸಾಹಿತ್ಯವಿಲ್ಲದವರ ಎನ್ನವರೆನ್ನೆನಯ್ಯ.
ನಂಟು-ಭಕ್ತಿ-ನಾಯಕನರಕ ಕೂಡಲಸಂಗಮದೇವ.

೩೯೮.
ಹೊನ್ನು-ಹೆಣ್ಣು-ಮಣ್ಣೆಂಬ
ಕರ್ಮದ ಬಲೆಯಲ್ಲಿ ಸಿಲುಕಿ
ವೃಥಾ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ.
ಹಾರುವೆನಯ್ಯ ಭಕ್ತರ ಬರವ ಗುಡಿಗಟ್ಟಿ!
ಹಾರುವೆನಯ್ಯ ಶರಣರ ಬರವ ಗುಡಿಗಟ್ಟಿ!
ಕೂಡಲಸಂಗಮದೇವನು
ವಿಪ್ರಕರ್ಮವ ಬಿಡಿಸಿ
ಅಶುದ್ಧನ ಶುದ್ಧನ ಮಾಡಿದನಾಗಿ.

೩೯೯.
ವೇದಕ್ಕೆ ಒರೆಯ ಕಟ್ಟುವೆ!
ಶಾಸ್ತ್ರಕ್ಕೆ ನಿಗಳವನಿಕ್ಕುವೆ!
ತರ್ಕದ ಬೆನ್ನ ಬಾರನೆತ್ತುವೆ!
ಆಗಮದ ಮೂಗ ಕೊಯ್ವೆ!
ನೋಡಯ್ಯ, ಮಹಾದಾನಿ ಕೂಡಲಸಂಗಮದೇವ,
ಮಾದರ ಚೆನ್ನಯ್ಯನ ಮನೆಯ ಮಗ ನಾನಯ್ಯ!

೪೦೦.
ಕಳ್ಳ, ಬಂದಿಕಾರ, ಹಾವಾಡಿಗ, ಹಾದರಿಗ,
ಬಂಟನೋಲೆಯಕಾರನೆಂದೆನಾದರೆ,
ನೀ ಮುಂತಾಗಿ ಬಂದ ಭಕ್ತರ ನೀನೆನ್ನದಿದ್ದರೆ,
ಅದೇ ದ್ರೋಹ!
ನಡೆ-ನುಡಿ ಹುಸಿಯುಂಟಾದರೆ
ಕೂಡಲಸಂಗನ ತೋರಿದ ಚೆನ್ನಬಸವಣ್ಣನಾಣೆ.

Comments

Popular posts from this blog

ಬಸವಣ್ಣನ ವಚನಗಳು - 331 ರಿಂದ 340 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೩೧. ವ್ಯಾಸ ಬೋಯಿತಿಯ ಮಗ. ಮಾರ್ಕಂಡೇಯ ಮಾತಂಗಿಯ ಮಗ. ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿ ಭೋ! ಕುಲದಿಂದ ಮುನ್ನೇನಾದಿರಿ ಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ. ದೂರ್ವಾಸ ಮಚ್ಚಿಗ. ಕಶ್ಯಪ ಕಮ್ಮಾರ. ಕೌಂಡಿನ್ಯನೆಂಬ ಋಷಿ ಮೂರುಲೋಕವರಿಯೆ ನಾವಿದ ಕಾಣಿ ಭೋ! ನಮ್ಮ ಕೂಡಲಸಂಗನ ವಚನವಿಂತೆಂದುದು- "ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ! ೩೩೨. ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ. ಜಲಬಿಂದುವಿನ ವ್ಯವಹಾರವೊಂದೇ. ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ. ಏನನೋದಿ ಏನ ಕೇಳಿ ಏನು ಫಲ ?! ಕುಲಜನೆಂಬುದಕ್ಕೆ ಆವುದು ದೃಷ್ಟ ? "ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸ್ಸಮಸ್ತಸ್ಮಾತ್ ವರ್ಣಾನಾಂ ಕಿಂ ಪ್ರಯೋಜನಂ ?" || ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ? ಇದು ಕಾರಣ, ಕೂಡಲಸಂಗಮದೇವ, ಲಿಂಗಸ್ಥಲವನರಿದವನೇ ಕುಲಜನು! ೩೩೩. ಕೊಲುವವನೇ ಮಾದಿಗ! ಹೊಲಸ ತಿಂಬವನೇ ಹೊಲೆಯ! ಕುಲವೇನೋ ? ಆವದಿರ ಕುಲವೇನೋ ? ಸಕಲ ಜೀವಾ

ಅಕ್ಕನ ವಚನಗಳು - 271 ರಿಂದ 280 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೨೭೧. ತನು ಶುದ್ಧ, ಮನ ಶುದ್ಧ, ಭಾವಶುದ್ಧವಾದವರನೆನಗೊಮ್ಮೆ ತೋರಾ! ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ, ನಿತ್ಯಶುದ್ಧರಾದವರನೆನಗೊಮ್ಮೆ ತೋರಾ! ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ ೨೭೨. ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ ೨೭೩. ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಸತ್ಯಶರಣರನುಭಾವವ! ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೇ! ೨೭೪. ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ! ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ! ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ! ಎಡರುವ ಹರಳೆಲ್ಲ ಚಿಂತಾಮಣಿ! ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ ನೋಡುತ ಬಂದು, ಕದಳಿಯ ಬನವ ಕಂಡೆ ನಾನು ೨೭೫. ತನುವೆಲ್ಲ ಜರಿದ

ಬಸವಣ್ಣನ ವಚನಗಳು - 371 ರಿಂದ 380 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೭೧. ಜಂಬೂದ್ವೀಪನವಖಂಡಪೃಥ್ವಿಯೊಳಗೆ ಕೇಳಿರಯ್ಯ ಎರಡಾಳಿನ ಭಾಷೆಯ! ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು. ಸತ್ಯವೆಂಬ ಕೂರಲಗನೆ ಕಳೆದುಕೊಂಡು ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವ. ೩೭೨. ಶಿವಭಕ್ತನಾಗಿ ತನ್ನ ಹಿಡಿದಹೆನೆಂದು ಹೋದರೆ ನುಗ್ಗುಮಾಡುವ, ನುಸಿಯ ಮಾಡುವ! ಮಣ್ಣುಮಾಡುವ, ಮಸಿಯ ಮಾಡುವ! ಕೂಡಲಸಂಗಮದೇವರ ನೆರೆನಂಬಿದನಾದರೆ ಕಡೆಗೆ ತನ್ನಂತೆ ಮಾಡುವ. ೩೭೩. ಅರೆವನಯ್ಯ ಸಣ್ಣವಹನ್ನಕ ಒರೆವನಯ್ಯ ಬಣ್ಣಗಾಬನ್ನಕ ಅರೆದರೆ ಸುಣ್ಣವಾಗಿ, ಒರೆದರೆ ಬಣ್ಣವಾದರೆ ಕೂಡಲಸಂಗಮದೇವನೊಲಿದು ಸಲಹುವನು. ೩೭೪. ಎಡದ ಪಾದದಲೊದ್ದರೆ ಬಲದ ಪಾದವ ಹಿಡಿವೆ! ಬಲದ ಪಾದದಲೊದ್ದರೆ ಎಡದ ಪಾದವ ಹಿಡಿವೆ! ತ್ರಾಹಿ, ತ್ರಾಹಿ! ತಪ್ಪೆನ್ನದು, ಕ್ಷಮೆ ನಿನ್ನದು! ಕೂಡಲಸಂಗಮದೇವ ನಿಮ್ಮ ಕರುಣದ ಕಂದ ನಾನು! ೩೭೫. ಅಂಜಿದರಾಗದು, ಅಳುಕಿದರಾಗದು! ವಜ್ರಪಂಜರದೊಳಗಿದ್ದರಾಗದು! ತಪ್ಪದೆಲವೋ ಲಲಾಟಲಿಖಿತ! ಕಕ್ಕುಲತೆಬಟ್ಟರಾಗದು ನೋಡಾ! ಧೃತಿಗೆಟ್ಟು ಮನ ಧಾತುಗೆಟ್ಟರೆ ಅಪ್ಪುದು ತಪ್ಪದು ಕೂಡಲಸಂಗಮದೇವ. ೩೭೬. ಆಯುಷ್ಯ ತೀರಿದಲ್ಲದೆ ಮರಣವಿಲ್ಲ. ಭಾಷೆ ತೀರಿದಲ