Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.
೪೨೧.
ಸೂಳೆಗೆ ಮೆಚ್ಚಿ
ಸೂಳೆಯ ಬಂಟರೆಂಜಲ ತಿಂಬುದೀ ಲೋಕವೆಲ್ಲ!
ಅಡಗ ವೆಚ್ಚಿ
ಸೊಣಗನೆಂಜಲ ತಿಂಬುದೀ ಲೋಕವೆಲ್ಲ!
ಲಿಂಗವ ಮೆಚ್ಚಿ
ಜಂಗಮಪ್ರಸಾದವ ಕೊಂಬರ ನೋಡಿ ನಗುವವರ
ಕುಂಭೀಪಾಕ ನಾಯಕನರಕದಲಿಕ್ಕುವ
ಕೂಡಲಸಂಗಮದೇವ.
೪೨೨.
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ ?
ಕುಲವುಂಟೇ ಜಂಗಮವಿದ್ದೆಡೆಯಲ್ಲಿ ?
ಎಂಜಲುಂಟೇ ಪ್ರಸಾದವಿದ್ದೆಡೆಯಲ್ಲಿ ?
ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
ನಿಷ್ಕಳಂಕ, ನಿಜೈಕ್ಯ, ತ್ರಿವಿಧನಿರ್ಣಯ
ಕೂಡಲಸಂಗಮದೇವ, ನಿಮ್ಮ ಶರಣರಿಗಲ್ಲದಿಲ್ಲ.
೪೨೩.
ಹುತ್ತದ ಮೇಲಣ ರಜ್ಜು ಮುಟ್ಟಿದರೆ
ಸಾವರು ಶಂಕಿತರಾದವರು!
ಸರ್ಪದಷ್ಟವಾದರೆಯೂ
ಸಾಯರು ನಿಶ್ಶಂಕಿತರಾದವರು!
ಕೂಡಲಸಂಗಮದೇವಯ್ಯ,
ಶಂಕಿತಂಗೆ ಪ್ರಸಾದ ಕಾಳಕೂಟವಿಷವು!
೪೨೪.
ನಂಬಿದರೆ ಪ್ರಸಾದ
ನಂಬದಿದ್ದರೆ ವಿಷವು!
ತುಡುಕಬಾರದು ನೋಡಾ ಲಿಂಗನ ಪ್ರಸಾದ!
ಸಂಗನ ಪ್ರಸಾದ!
ಕೂಡಲಸಂಗನ ಪ್ರಸಾದ ಸಿಂಗಿ-ಕಾಳಕೂಟ ವಿಷವು.
೪೨೫.
ಪಂಡಿತನಾಗಲಿ ಮೂರ್ಖನಾಗಲಿ
ಸಂಚಿತಕರ್ಮ ಉಂಡಲ್ಲದೆ ಬಿಡದು.
ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದು-
ಎಂದು ಶ್ರುತಿ ಸಾರುತ್ತೈದಾವೆ-
ನೋಡಾ, ತಾನಾವ ಲೋಕದೊಳಗಿದ್ದರೆಯು ಬಿಡದು.
ಕರ್ಮಫಲಗೂಡಿ ಕೂಡಲಸಂಗಮದೇವಂಗೆ
ಆತ್ಮನೈವೇದ್ಯವ ಮಾಡಿದವನೇ ಧನ್ಯನು!
೪೨೬.
ಒಲ್ಲೆನೆಂಬುದು ವೈರಾಗ್ಯ,
ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದರೇನು
ತಾನಿದ್ದೆಡೆಗೆ ಬಂದುದು ಲಿಂಗಾರ್ಪಿತವ ಮಾಡಿ
ಭೋಗಿಸುವುದೇ ಆಚಾರ!
ಕೂಡಲಸಂಗಮದೇವನ
ಒಲಿಸ ಬಂದ ಪ್ರಸಾದಕಾಯವ ಕೆಡಿಸಲಾಗದು.
೪೨೭.
ಒಪ್ಪವ ನುಡಿವಿರಯ್ಯ ತುಪ್ಪವ ತೊಡೆದಂತೆ!
ಶರಣ ತನ್ನ ಮೆರೆವನೇ ಬಿನ್ನಾಣಿಯಂತೆ ?
ಕೂಡಲಸಂಗನ ಪ್ರಸಾದದಿಂದ ಬದುಕುವನಲ್ಲದೆ
ತನ್ನ ಮೆರೆವನೇ ?
೪೨೮.
ದಾಸೋಹವೆಂಬ ಸೋಹೆಗೊಂಡು ಹೋಗಿ
ಗುರುವ ಕಂಡೆ, ಲಿಂಗವ ಕಂಡೆ,
ಜಂಗಮವ ಕಂಡೆ, ಪ್ರಸಾದವ ಕಂಡೆ
ಇಂತೀ ಚತುರ್ವಿಧ ಸಂಪನ್ನನಾದೆ ಕಾಣಾ
ಕೂಡಲಸಂಗಮದೇವ.
೪೨೯.
ಕಿವಿಯ ಸೂತಕ ಹೋಯಿತ್ತು
ಸದ್ಗುರುವಿನ ವಚನದಿಂದ!
ಕಂಗಳ ಸೂತಕ ಹೋಯಿತ್ತು
ಸದ್ಭಕ್ತರ ಕಂಡೆನಾಗಿ!
ಕಾಯದ ಸೂತಕ ಹೋಯಿತ್ತು
ನಿಮ್ಮ ಚರಣವ ಮುಟ್ಟಿದೆನಾಗಿ!
ಬಾಯ ಸೂತಕ ಹೋಯಿತ್ತು
ನಿಮ್ಮ ಒಕ್ಕುದ ಕೊಂಡೆನಾಗಿ!
ನಾನಾ ಸೂತಕ ಹೋಯಿತ್ತು
ನಿಮ್ಮ ಶರಣರನುಭಾವಿಯಾಗಿ!
ಕೂಡಲಸಂಗಮದೇವ ಕೇಳಯ್ಯ
ಎನ್ನ ಮನದ ಸೂತಕ ಹೋಯಿತ್ತು
ನೀವಲ್ಲದಿಲ್ಲೆಂದರಿದೆನಾಗಿ!
೪೩೦.
ಮೋನದಲುಂಬುದು ಆಚಾರವಲ್ಲ,
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು.
ಕರಣವೃತ್ತಿಗಳಡಗುವವು,
ಕೂಡಲಸಂಗನ ನೆನೆವುತ್ತ ಉಂಡರೆ.
Comments
Post a Comment