Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.
೪೪೧.
ಅರಿದರಿದು ಸಮಗಾಣಿಸಬಾರದು ?
ತ್ರಾಸಿನ ಕಟ್ಟಳೆಯಂತಿನಿತು ವೆಗ್ಗಳವಾದರೆ
ಈಶ್ವರನು ಒಡೆಯಿಕ್ಕದೆ ಮಾಣುವನೆ ?
ಪಾತ್ರಾಪಾತ್ರವೆಂದು ಕಂಡರೆ
ಶಿವನೆಂತು ಮೆಚ್ಚುವನೊ ?
ಜೀವಜೀವಾತ್ಮವ ಸರಿಯೆಂದು ಕಂಡರೆ
ಸಮವೇದಿಸದಿಪ್ಪನೇ ಶಿವನು ?
ತನ್ನ ಮನದಲ್ಲಿ
"ಯತ್ರ ಜೀವಸ್ತತ್ರ ಶಿವ"ನೆಂದು
ಸರ್ವಜೀವದಯಾಪಾರಿಯಾದರೆ
ಕೂಡಲಸಂಗಮದೇವನು
ಕೈಲಾಸದಿಂದ ಬಂದು ಎತ್ತಿಕೊಳ್ಳದಿಪ್ಪನೆ ?
೪೪೨.
ಮುತ್ತು ಉದಕದಲಾಗದು,
ಉದಕ ಮುತ್ತಿನೊಲಾಗದು,
ತತ್ತ್ವಘಟಿಸಿದ ಸುಮುಹೂರ್ತದಲಲ್ಲದೆ!
ಚಿತ್ತವೇದ್ಯವಾಗದು ಸದ್ಗುರುವಿನ ಕರುಣಕಲ್ಲದೆ,
ಕರ್ತೃ ಕೂಡಲಸಂಗಮದೇವರ
ಒಲವಿನ ದಯದ ಚಿತ್ತವಿಡಿದಂಗಲ್ಲದೆ
ಶಿವತತ್ತ್ವ ಸಾಹಿತ್ಯವಾಗದು.
೪೪೩.
ಚಂದ್ರಕಾಂತದ ಶಿಲೆಯಲ್ಲಿ ಜಲವಿಲ್ಲದನ್ನಕ
ಶೈತ್ಯವ ತೋರುವ ಪರಿಯೆಂತೋ ?
ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿಯಿಲ್ಲದನ್ನಕ
ಉಷ್ಣವ ತೋರುವ ಪರಿಯೆಂತೋ ?
ಶರಣಂಗೆ ಭಕ್ತಿಕಾಯವಿಲ್ಲದನ್ನಕ
ಕೂಡಲಸಂಗನನರಿವ ಪರಿಯೆಂತೋ ?
೪೪೪.
ಮುನ್ನೂರರುವತ್ತು ನಕ್ಷತ್ರಕ್ಕೆ
ಬಾಯ ಬಿಟ್ಟುಕೊಂಡಿಪ್ಪುದೇ ಸಿಂಪು ?
ಅದು ಸ್ವಾತಿಗಲ್ಲದೆ ಬಾಯ್ದೆರೆಯದು ಕೇಳಾ ಕೇಳು ತಂದೆ!
ಎಲ್ಲವಕ್ಕೆ ಬಾಯ ಬಿಟ್ಟರೆ
ತಾನೆಲ್ಲಿಯ ಮುತ್ತಪ್ಪುದು ?
ಪರಮಂಗಲ್ಲದೆ ಹರುಷವಿಲ್ಲೆಂದು
ಕರಣಾದಿ ಗುಣಂಗಳ ಮರೆದರು;
ಇದು ಕಾರಣ ಕೂಡಲಸಂಗನ ಶರಣರು
ಸಪ್ತವ್ಯಸನಿಗಳಲ್ಲಾಗಿ.
೪೪೫.
ಮೈಗೆ ಕಾಹ ಹೇಳುವರಲ್ಲದೆ,
ಮನಕ್ಕೆ ಕಾಹ ಹೇಳುವರೆ ?
ಅಣಕದ ಗಂಡನ ಹೊಸ ಪರಿಯ ನೋಡಾ!
ಕೂಡಲಸಂಗಮದೇವನೆನ್ನ ಮನವ ನಂಬದೆ
ತನ್ನಲ್ಲಿದ್ದ ಲೇಸ ಕಾಹ ಹೇಳಿದನು.
೪೪೬.
ಬೆಳಗಿನೊಳಗಣ ಮಹಾಬೆಳಗು! ಶಿವಶಿವಾ!!
ಪರಮಾಶ್ರಯವೆ ತಾನಾಗಿ,
ಶತಪತ್ರಕಮಳಕರ್ಣಿಕಾಮಧ್ಯದಲ್ಲಿ
ಸ್ವತಸ್ಸಿದ್ಧನಾಗಿಪ್ಪ ನಮ್ಮ ಕೂಡಲಸಂಗಮದೇವ.
೪೪೭.
ತಮತಮಗೆಲ್ಲ ನೊಸಲ ಕಣ್ಣವರು!
ತಮತಮಗೆಲ್ಲ ನಂದಿವಾಹನರು!
ತಮತಮಗೆಲ್ಲ ಖಟ್ವಾಂಗಕಪಾಲ ತ್ರಿಶೂಲಧರರು!
ದೇವರಾರು ಭಕ್ತರಾರು ಹೇಳಿರಯ್ಯ ?
ಕೂಡಲಸಂಗಮದೇವ,
ನಿಮ್ಮ ಶರಣರು ಸ್ವತಂತ್ರರು!
ಎನ್ನ ಬಚ್ಚಬರಿಯ ಬಸವನೆನಿಸಯ್ಯ!
೪೪೮.
ಉಳ್ಳವರು ಶಿವಾಲಯವ ಮಾಡಿಹರು!
ನಾನೇನ ಮಾಡುವೆ ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!
೪೪೯.
ಗುರು ಮುನಿದರೆ ಒಂದು ದಿನ ತಾಳುವೆ,
ಲಿಂಗ ಮುನಿದರೆ ದಿನವರೆ ತಾಳುವೆ.
ಜಂಗಮ ಮುನಿದರೆ
ಕ್ಷಣಮಾತ್ರವ ತಾಳಿದೆನಾದರೆ
ಎನ್ನ ಪ್ರಾಣದ ಹೋಕು ಕೂಡಲಸಂಗಮದೇವ.
೪೫೦.
ರಚ್ಚೆಯ ನೆರವಿಗೆ ನಾಡನುಡಿ ಇಲ್ಲದಿಹುದೆ ?
ಅದರಂತೆನಬಹುದೇ ಸಜ್ಜನ ಸ್ತ್ರೀಯ ?
ಅದರಂತೆನಬಹುದೇ ಭಕ್ತಿರತಿಯ ?
ಕರುಳ ಕಲೆ-ಪ್ರಕಟಿತ ಉಂಟೆ ಕೂಡಲಸಂಗಮದೇವ ?
Comments
Post a Comment