Skip to main content

ಬಸವಣ್ಣನ ವಚನಗಳು - 451 ರಿಂದ 460 ರವರೆಗೆ



Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.

Please follow my post and post your valuable comments.
 
೪೫೧.
ಭೂತ ಒಲಿದು ಆತ್ಮನ ಸೋಂಕಿದ ಬಳಿಕ
ಭೂತದ ಗುಣವಲ್ಲದೆ, ಆತ್ಮನ ಗುಣವುಂಟೆ ?
ಗುರುಕಾರುಣ್ಯವಾಗಿ,
ಹಸ್ತಮಸ್ತಕಸಂಯೋಗವಾದ ಬಳಿಕ
ಗುರುಲಿಂಗಜಂಗಮವೇ ಗತಿಯಾಗಿದ್ದೆ
ಕೂಡಲಸಂಗಮದೇವ.

೪೫೨.
ಮಾಡುವಾತ ನಾನಲ್ಲಯ್ಯ,
ನೀಡುವಾತ ನಾನಲ್ಲಯ್ಯ,
ಬೇಡುವಾತ ನಾನಲ್ಲಯ್ಯ,
ನಿಮ್ಮ ಕಾರುಣ್ಯವಲ್ಲದೆ, ಎಲೆ ದೇವಾ!
ಮನೆಯ ತೊತ್ತಲಸಿದರೆ ಒಡತಿ ಮಾಡಿಕೊಂಬಂತೆ
ನಿನಗೆ ನೀ ಮಾಡಿಕೋ ಕೂಡಲಸಂಗಮದೇವಾ!

೪೫೩.
ಪರಿಯಾಣವೇ ಭಾಜನವೆಂಬರು
ಪರಿಯಾಣ ಭಾಜನವಲ್ಲ ಲಿಂಗಕ್ಕೆ!
ತನ್ನ ಮನವೇ ಭಾಜನ!
ಪ್ರಾಣವನು ಬೀಸರವೋಗದೆ
ಮೀಸಲಾಗರ್ಪಿಸಬಲ್ಲಡೆ,
ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ.

೪೫೪.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ.
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ.
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ.
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ.
ಕೂಡಲಸಂಗನ ಶರಣರನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ.

೪೫೫.
ಆಲಿಕಲ್ಲ ಹರಳಿನಂತೆ,
ಅರಗಿನ ಪುತ್ಥಳಿಯಂತೆ
ತನು ಕರಗಿ ನೆರೆವ ಸುಖವ ನಾನೇನೆಂಬ!
ಕಡೆಗೋಡಿವರಿದವೆನಗಯ್ಯ ನಯನದ ಸುಖಜಲಂಗಳು!
ನಮ್ಮ ಕೂಡಲಸಂಗಮದೇವರ ಮುಟ್ಟಿ
ನೆರೆವ ಸುಖವನಾರಿಗೇನೆಂಬೆ!

೪೫೬.
ನಾಲಗೆ ತಾಗಿದ ರುಚಿಗೆ ಮನವೇ ಸಾಕ್ಷಿ!
ಸಾಲದೇ ಅಯ್ಯ!
ಮಾಲೆಗಾರನ ಕೇಳಿ ನನೆಯರಳುವುದೇ ?
ಆಗಮವನಿದಿರಿಂಗೆ ತೋರುವುದು ಆಚಾರವೇ ಅಯ್ಯ ?
ಕೂಡಲಸಂಗನ ಕೂಡಿದ
ಕೂಟದ ಕರುಳ ಕಲೆಯನು
ಇದಿರಿಂಗೆ ತೋರುವುದು ಆಚಾರವೇ ಅಯ್ಯ ?

೪೫೭.
ಎಲ್ಲ ಗಂಡರ ಪರಿಯಂತಲ್ಲ ನೋಡವ್ವ ನನ್ನ ನಲ್ಲ!
ಸುಳಿಯಲಿಲ್ಲ, ಸುಳಿದು ಸಿಂಗರವ ಮಾಡಲಿಲ್ಲ;
ಕೂಡಲ ಸಂಗಮ ದೇವನು ತನ್ನೊಳಗೆ ಬೈಚಿಟ್ಟನಾಗಿ!

೪೫೮.
ಆಹ್ವಾನಿಸಿ ಕರೆವಲ್ಲಿ ಎಲ್ಲಿದ್ದನೋ
ಈರೇಳು ಭುವನಂಗಳ ಒಳಗೊಂಡಿಪ್ಪ ದಿವ್ಯವಸ್ತು ?
ಮತ್ತೆ, ವಿಸರ್ಜಿಸಿ ಬಿಡುವಾಗ ಎಲ್ಲಿದ್ದನೋ
ಮುಳ್ಳೂರ ತೆರಹಿಲ್ಲದಿಪ್ಪ ಅಖಂಡವಸ್ತು ?
ಬರಿಯ ಮಾತಿನ ಬಳಕೆಯ ತೂತಿನ ಜ್ಞಾನವ ಬಿಟ್ಟು
ನೆಟ್ಟನೆ ತನ್ನ ಕರಸ್ಥಳದೊಳಗಿರುತಿಪ್ಪ
ಇಷ್ಟಲಿಂಗವ ದಿಟ್ಟಿಸಿ ನೋಡಲು
ಅಲ್ಲಿ ತನ್ನ ಮನಕ್ಕೆ ಮನ-ಸಂಧಾನವಾಗಿ ದಿವ್ಯನಿಶ್ಚಯ ಒದಗೆ
ಆ ದಿವ್ಯ ನಿಶ್ಚಯದಿಂದ ಕುಳವಡಗಿ ಅದ್ವೈತವಪ್ಪುದು!
ಇದು ಕಾರಣ, ನಮ್ಮ ಕೂಡಲಸಂಗನ ಶರಣರು
ಆಹ್ವಾನ-ವಿಸರ್ಜನವೆಂಬುಭಯ ಜಡತೆಯ ಬಿಟ್ಟು
ತಮ್ಮ ತಮ್ಮ ಕರಸ್ಥಳದಲ್ಲಿ ನಿಶ್ಚೈಸಿ ಅವರೇ
ಸ್ವಯಲಿಂಗವಾದರು ಕಾಣಿರೋ!

೪೫೯.
ಎನ್ನ ಗಂಡ ಬರಬೇಕೆಂದು
ಎನ್ನ ಅಂತರಂಗವೆಂಬ ಮನೆಯ ತೆರಹುಮಾಡಿ
ಅಷ್ಟದಳಕಮಲವೆಂಬ ಓವರಿಯೊಳಗೆ
ನಿಜನಿವಾಸವೆಂಬ ಹಾಸುಗೆಯ ಹಾಸಿ
ಧ್ಯಾನಮೌನವೆಂಬ ಮೇಲುಕಟ್ಟ ಕಟ್ಟಿ
ಜ್ಞಾನವೆಂಬ ದೀಪವ ಬೆಳಗಿ
ನಿಷ್ಕ್ರೀಗಳೆಂಬುಪಕರಣಂಗಳ ಹರಹಿಕೊಂಡು
ಪಶ್ಚಿಮದ್ವಾರವೆಂಬ ಬಾಗಿಲ ತೆರೆದು
ಕಂಗಳೇ ಪ್ರಾಣವಾಗಿ ಹಾರುತಿರ್ದೆನಯ್ಯ!
"ನಾನು ಬಾರೆನೆಂದು ಉಮ್ಮಳಿಸಿಹ"ನೆಂದು
ತಾನೇ ಬಂದು ಎನ್ನ ಹೃದಯಸಿಂಹಾಸನದ ಮೇಲೆ
ಮೂರ್ತಿಗೊಂಡರೆ
ಎನ್ನ ಮನದ ಬಯಕೆ ಸಯವಾಯಿತ್ತು.
ಹಿಂದೆ ಹನ್ನೆರಡು ವರ್ಷದಿಂದಿದ್ದ ಚಿಂತೆ ನಿಶ್ಚಿಂತೆಯಾಯಿತ್ತು!
ಕೂಡಲಸಂಗಮದೇವ ಕೃಪಾಮೂರ್ತಿಯಾದ ಕಾರಣ,
ಆನು ಬದುಕಿದೆನು.

೪೬೦.
ಕಾಯವೆಂಬ ಘಟಕ್ಕೆ
ಚೈತನ್ಯವೇ ಸಯಿದಾನ,
ಸಮತೆ ಎಂಬ ಜಲ,
ಕರಣಾದಿಗಳೇ ಸ್ರವಣ,
ಜ್ಞಾನವೆಂಬ ಅಗ್ನಿಯನಿಕ್ಕಿ
ಮತಿಯೆಂಬ ಸಟ್ಟುಗದಲ್ಲಿ ಘಟ್ಟಿಸಿ,
ಪಾಕಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ
ಪರಿಣಾಮದೋಗರವ ನೀಡಿದರೆ
ಕೂಡಲಸಂಗಮದೇವಂಗೆ ಆರೋಗಣೆಯಾಯಿತ್ತು.

Comments

Popular posts from this blog

ಸರ್ವಜ್ಞನ ವಚನಗಳು - 91 ರಿಂದ 100

ಸರ್ವಜ್ಞನ ವಚನಗಳು -  91 ರಿಂದ 100 ೯೧. ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು ಹುಟ್ಟಿಸನದೇಕೆ ಸರ್ವಜ್ಞ ೯೨. ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು ಮತ್ತೆ ಪಾಂಡವರಿಗಾಳಾದ ಹರಿಯು ತಾ ನೆತ್ತಣಾ ದೈವ ಸರ್ವಜ್ಞ ೯೩. ನರಸಿಂಹನವತಾರ ಹಿರಿದಾದ ಅದ್ಭುತವು ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ ೯೪. ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ ಪಾಲಿಸದೆ ಹೋದ ಸರ್ವಜ್ಞ ೯೫. ಹರನವನ ಕೊಲುವಂದು, ಎರಳೆಯನು ಎಸೆವಂದು ಮರಳಿ ವರಗಳನು ಕೊಡುವಂದು ಪುರಹರಗೆ ಸರಿಯಾದ ಕಾಣೆ ಸರ್ವಜ್ಞ ೯೬. ಹರಿ ಬೊಮ್ಮನೆಂಬವರು, ಹರನಿಂದಲಾದವರು ಅರಸಿಗೆ ಆಳು ಸರಿಯಹನೆ ಶಿವನಿಂದ ಮೆರೆವರಿನ್ನಾರು ಸರ್ವಜ್ಞ ೯೭. ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ ನೆರೆಹತ್ತು ಜನನವಾಹರಿಗೆ ಇವರುಗಳು ಸರಿಯಹರೆ ಸರ್ವಜ್ಞ ೯೮. ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ ಸರಿಯಾರು ಹೇಳಿ ಸರ್ವಜ್ಞ ೯೯. ಇಂದ್ರನಾನೆಯನೇರಿ ಒಂದನೂ ಕೊಡಲರಿಯ ಚ್ಂದ್ರಶೇಖರನು ಮುದಿಯೆತ್ತನೇರಿ ಬೇಕೆಂದುದನು ಕೊಡುವ ಸರ್ವಜ್ಞ ೧೦೦. ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ ಶಂಭುವಿದ್ದಂತೆ ಮತ್ತೊಂದು ದೈವವನು ನಂಬುವನೆ ಹೆಡ್ಡ ಸರ್ವಜ್ಞ

ಬಸವಣ್ಣನ ವಚನಗಳು - 331 ರಿಂದ 340 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೩೧. ವ್ಯಾಸ ಬೋಯಿತಿಯ ಮಗ. ಮಾರ್ಕಂಡೇಯ ಮಾತಂಗಿಯ ಮಗ. ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿ ಭೋ! ಕುಲದಿಂದ ಮುನ್ನೇನಾದಿರಿ ಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ. ದೂರ್ವಾಸ ಮಚ್ಚಿಗ. ಕಶ್ಯಪ ಕಮ್ಮಾರ. ಕೌಂಡಿನ್ಯನೆಂಬ ಋಷಿ ಮೂರುಲೋಕವರಿಯೆ ನಾವಿದ ಕಾಣಿ ಭೋ! ನಮ್ಮ ಕೂಡಲಸಂಗನ ವಚನವಿಂತೆಂದುದು- "ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ! ೩೩೨. ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ. ಜಲಬಿಂದುವಿನ ವ್ಯವಹಾರವೊಂದೇ. ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ. ಏನನೋದಿ ಏನ ಕೇಳಿ ಏನು ಫಲ ?! ಕುಲಜನೆಂಬುದಕ್ಕೆ ಆವುದು ದೃಷ್ಟ ? "ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸ್ಸಮಸ್ತಸ್ಮಾತ್ ವರ್ಣಾನಾಂ ಕಿಂ ಪ್ರಯೋಜನಂ ?" || ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ? ಇದು ಕಾರಣ, ಕೂಡಲಸಂಗಮದೇವ, ಲಿಂಗಸ್ಥಲವನರಿದವನೇ ಕುಲಜನು! ೩೩೩. ಕೊಲುವವನೇ ಮಾದಿಗ! ಹೊಲಸ ತಿಂಬವನೇ ಹೊಲೆಯ! ಕುಲವೇನೋ ? ಆವದಿರ ಕುಲವೇನೋ ? ಸಕಲ ಜೀವಾ...

ಅಕ್ಕನ ವಚನಗಳು - 271 ರಿಂದ 280 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೨೭೧. ತನು ಶುದ್ಧ, ಮನ ಶುದ್ಧ, ಭಾವಶುದ್ಧವಾದವರನೆನಗೊಮ್ಮೆ ತೋರಾ! ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ, ನಿತ್ಯಶುದ್ಧರಾದವರನೆನಗೊಮ್ಮೆ ತೋರಾ! ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ ೨೭೨. ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ ೨೭೩. ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಸತ್ಯಶರಣರನುಭಾವವ! ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೇ! ೨೭೪. ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ! ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ! ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ! ಎಡರುವ ಹರಳೆಲ್ಲ ಚಿಂತಾಮಣಿ! ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ ನೋಡುತ ಬಂದು, ಕದಳಿಯ ಬನವ ಕಂಡೆ ನಾನು ೨೭೫. ತನುವೆಲ್ಲ ...