Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.
೪೫೧.
ಭೂತ ಒಲಿದು ಆತ್ಮನ ಸೋಂಕಿದ ಬಳಿಕ
ಭೂತದ ಗುಣವಲ್ಲದೆ, ಆತ್ಮನ ಗುಣವುಂಟೆ ?
ಗುರುಕಾರುಣ್ಯವಾಗಿ,
ಹಸ್ತಮಸ್ತಕಸಂಯೋಗವಾದ ಬಳಿಕ
ಗುರುಲಿಂಗಜಂಗಮವೇ ಗತಿಯಾಗಿದ್ದೆ
ಕೂಡಲಸಂಗಮದೇವ.
೪೫೨.
ಮಾಡುವಾತ ನಾನಲ್ಲಯ್ಯ,
ನೀಡುವಾತ ನಾನಲ್ಲಯ್ಯ,
ಬೇಡುವಾತ ನಾನಲ್ಲಯ್ಯ,
ನಿಮ್ಮ ಕಾರುಣ್ಯವಲ್ಲದೆ, ಎಲೆ ದೇವಾ!
ಮನೆಯ ತೊತ್ತಲಸಿದರೆ ಒಡತಿ ಮಾಡಿಕೊಂಬಂತೆ
ನಿನಗೆ ನೀ ಮಾಡಿಕೋ ಕೂಡಲಸಂಗಮದೇವಾ!
೪೫೩.
ಪರಿಯಾಣವೇ ಭಾಜನವೆಂಬರು
ಪರಿಯಾಣ ಭಾಜನವಲ್ಲ ಲಿಂಗಕ್ಕೆ!
ತನ್ನ ಮನವೇ ಭಾಜನ!
ಪ್ರಾಣವನು ಬೀಸರವೋಗದೆ
ಮೀಸಲಾಗರ್ಪಿಸಬಲ್ಲಡೆ,
ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ.
೪೫೪.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ.
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ.
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ.
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ.
ಕೂಡಲಸಂಗನ ಶರಣರನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ.
೪೫೫.
ಆಲಿಕಲ್ಲ ಹರಳಿನಂತೆ,
ಅರಗಿನ ಪುತ್ಥಳಿಯಂತೆ
ತನು ಕರಗಿ ನೆರೆವ ಸುಖವ ನಾನೇನೆಂಬ!
ಕಡೆಗೋಡಿವರಿದವೆನಗಯ್ಯ ನಯನದ ಸುಖಜಲಂಗಳು!
ನಮ್ಮ ಕೂಡಲಸಂಗಮದೇವರ ಮುಟ್ಟಿ
ನೆರೆವ ಸುಖವನಾರಿಗೇನೆಂಬೆ!
೪೫೬.
ನಾಲಗೆ ತಾಗಿದ ರುಚಿಗೆ ಮನವೇ ಸಾಕ್ಷಿ!
ಸಾಲದೇ ಅಯ್ಯ!
ಮಾಲೆಗಾರನ ಕೇಳಿ ನನೆಯರಳುವುದೇ ?
ಆಗಮವನಿದಿರಿಂಗೆ ತೋರುವುದು ಆಚಾರವೇ ಅಯ್ಯ ?
ಕೂಡಲಸಂಗನ ಕೂಡಿದ
ಕೂಟದ ಕರುಳ ಕಲೆಯನು
ಇದಿರಿಂಗೆ ತೋರುವುದು ಆಚಾರವೇ ಅಯ್ಯ ?
೪೫೭.
ಎಲ್ಲ ಗಂಡರ ಪರಿಯಂತಲ್ಲ ನೋಡವ್ವ ನನ್ನ ನಲ್ಲ!
ಸುಳಿಯಲಿಲ್ಲ, ಸುಳಿದು ಸಿಂಗರವ ಮಾಡಲಿಲ್ಲ;
ಕೂಡಲ ಸಂಗಮ ದೇವನು ತನ್ನೊಳಗೆ ಬೈಚಿಟ್ಟನಾಗಿ!
೪೫೮.
ಆಹ್ವಾನಿಸಿ ಕರೆವಲ್ಲಿ ಎಲ್ಲಿದ್ದನೋ
ಈರೇಳು ಭುವನಂಗಳ ಒಳಗೊಂಡಿಪ್ಪ ದಿವ್ಯವಸ್ತು ?
ಮತ್ತೆ, ವಿಸರ್ಜಿಸಿ ಬಿಡುವಾಗ ಎಲ್ಲಿದ್ದನೋ
ಮುಳ್ಳೂರ ತೆರಹಿಲ್ಲದಿಪ್ಪ ಅಖಂಡವಸ್ತು ?
ಬರಿಯ ಮಾತಿನ ಬಳಕೆಯ ತೂತಿನ ಜ್ಞಾನವ ಬಿಟ್ಟು
ನೆಟ್ಟನೆ ತನ್ನ ಕರಸ್ಥಳದೊಳಗಿರುತಿಪ್ಪ
ಇಷ್ಟಲಿಂಗವ ದಿಟ್ಟಿಸಿ ನೋಡಲು
ಅಲ್ಲಿ ತನ್ನ ಮನಕ್ಕೆ ಮನ-ಸಂಧಾನವಾಗಿ ದಿವ್ಯನಿಶ್ಚಯ ಒದಗೆ
ಆ ದಿವ್ಯ ನಿಶ್ಚಯದಿಂದ ಕುಳವಡಗಿ ಅದ್ವೈತವಪ್ಪುದು!
ಇದು ಕಾರಣ, ನಮ್ಮ ಕೂಡಲಸಂಗನ ಶರಣರು
ಆಹ್ವಾನ-ವಿಸರ್ಜನವೆಂಬುಭಯ ಜಡತೆಯ ಬಿಟ್ಟು
ತಮ್ಮ ತಮ್ಮ ಕರಸ್ಥಳದಲ್ಲಿ ನಿಶ್ಚೈಸಿ ಅವರೇ
ಸ್ವಯಲಿಂಗವಾದರು ಕಾಣಿರೋ!
೪೫೯.
ಎನ್ನ ಗಂಡ ಬರಬೇಕೆಂದು
ಎನ್ನ ಅಂತರಂಗವೆಂಬ ಮನೆಯ ತೆರಹುಮಾಡಿ
ಅಷ್ಟದಳಕಮಲವೆಂಬ ಓವರಿಯೊಳಗೆ
ನಿಜನಿವಾಸವೆಂಬ ಹಾಸುಗೆಯ ಹಾಸಿ
ಧ್ಯಾನಮೌನವೆಂಬ ಮೇಲುಕಟ್ಟ ಕಟ್ಟಿ
ಜ್ಞಾನವೆಂಬ ದೀಪವ ಬೆಳಗಿ
ನಿಷ್ಕ್ರೀಗಳೆಂಬುಪಕರಣಂಗಳ ಹರಹಿಕೊಂಡು
ಪಶ್ಚಿಮದ್ವಾರವೆಂಬ ಬಾಗಿಲ ತೆರೆದು
ಕಂಗಳೇ ಪ್ರಾಣವಾಗಿ ಹಾರುತಿರ್ದೆನಯ್ಯ!
"ನಾನು ಬಾರೆನೆಂದು ಉಮ್ಮಳಿಸಿಹ"ನೆಂದು
ತಾನೇ ಬಂದು ಎನ್ನ ಹೃದಯಸಿಂಹಾಸನದ ಮೇಲೆ
ಮೂರ್ತಿಗೊಂಡರೆ
ಎನ್ನ ಮನದ ಬಯಕೆ ಸಯವಾಯಿತ್ತು.
ಹಿಂದೆ ಹನ್ನೆರಡು ವರ್ಷದಿಂದಿದ್ದ ಚಿಂತೆ ನಿಶ್ಚಿಂತೆಯಾಯಿತ್ತು!
ಕೂಡಲಸಂಗಮದೇವ ಕೃಪಾಮೂರ್ತಿಯಾದ ಕಾರಣ,
ಆನು ಬದುಕಿದೆನು.
೪೬೦.
ಕಾಯವೆಂಬ ಘಟಕ್ಕೆ
ಚೈತನ್ಯವೇ ಸಯಿದಾನ,
ಸಮತೆ ಎಂಬ ಜಲ,
ಕರಣಾದಿಗಳೇ ಸ್ರವಣ,
ಜ್ಞಾನವೆಂಬ ಅಗ್ನಿಯನಿಕ್ಕಿ
ಮತಿಯೆಂಬ ಸಟ್ಟುಗದಲ್ಲಿ ಘಟ್ಟಿಸಿ,
ಪಾಕಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ
ಪರಿಣಾಮದೋಗರವ ನೀಡಿದರೆ
ಕೂಡಲಸಂಗಮದೇವಂಗೆ ಆರೋಗಣೆಯಾಯಿತ್ತು.
Comments
Post a Comment