Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.
೨೦೧.
ಭಕ್ತೆ ಏನಪ್ಪೆನಯ್ಯ ಕರ್ತೃ-ಭೃತ್ಯತ್ವವ ನಾನರಿಯೆ
ಮಾಹೇಶ್ವರಿ ಏನಪ್ಪೆನಯ್ಯ? ವ್ರತ-ನೇಮ-ಛಲವ ನಾನರಿಯೆ
ಪ್ರಸಾದಿ ಏನಪ್ಪೆನಯ್ಯ?
ಅರ್ಪಿತಾನರ್ಪಿತವೆಂಬ ಭೇದವ ನಾನರಿಯೆ
ಪ್ರಾಣಲಿಂಗಿ ಏನಪ್ಪೆನಯ್ಯ?
ಅನುಭಾವದ ಗಮನವ ನಾನರಿಯೆ
ಶರಣೆ ಏನೆಪ್ಪೆನಯ್ಯ?
ಶರಣಸತಿ-ಲಿಂಗಪತಿಯೆಂಬ ಭಾವವ ನಾನರಿಯೆ
ಐಕ್ಯೆ ಏನೆಪ್ಪೆನಯ್ಯ?
ಬೆರಸಿದ ಭೇದವ ನಾನರಿಯೆ
ಚೆನ್ನಮಲ್ಲಿಕಾರ್ಜುನಯ್ಯ,
ಷಟ್ಸ್ಥಲದಲ್ಲಿ ನಿಸ್ಥಲವಾಗಿಪ್ಪೆನು
೨೦೨.
ಬಸವಣ್ಣ, ಎನ್ನ ಭಕ್ತಿ ನಿಮ್ಮ ಧರ್ಮ
ಎನ್ನ ಜ್ಞಾನ ಪ್ರಭುದೇವರ ಧರ್ಮ
ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ
ಇಂತೀ ಮೂವರೂ ಒಂದೊಂದ ಕೊಟ್ಟ ಕಾರಣ
ಎನಗೆ ಮೂರು ಭಾವವಾಯಿತ್ತು
ಆ ಮೂರು ಭಾವವ ನಿಮ್ಮಲ್ಲಿ ಸಮರ್ಪಿಸಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯನ ನೆನಹಾದಲ್ಲಿ
ನಿಮ್ಮ ಕರುಣದ ಕಂದನು ಕಾಣಾ ಚೆನ್ನಬಸವಣ್ಣ
೨೦೩.
ಸಂಗನ ಬಸವಣ್ಣನ ಪಾದವ ಕಂಡೆನಾಗಿ
ಎನ್ನಂಗ ನಾಸ್ತಿಯಾಯಿತ್ತು
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ನಾಸ್ತಿಯಾಯಿತ್ತು
ಪ್ರಭುವೇ ! ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನಗೆ ಅರಿವು ಸ್ವಯವಾಯಿತ್ತು
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಕರುಣವ ಪಡೆದೆನಾಗಿ
ಎನಗಾವ ಜಂಜಡವಿಲ್ಲವಯ್ಯ ಪ್ರಭುವೇ
೨೦೪.
ಬಸವಣ್ಣನೇ ಗುರು, ಪ್ರಭುದೇವರೇ ಲಿಂಗ
ಸಿದ್ಧರಾಮಯ್ಯನೇ ಜಂಗಮ
ಮಡಿವಾಳಯ್ಯನೇ ತಂದೆ, ಚೆನ್ನಬಸವಣ್ಣನೇ ಎನ್ನ ಪರಮಾರಾಧ್ಯರು
ಇನ್ನು ಶುದ್ಧವಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯ
೨೦೫.
ಬಸವಣ್ಣ ನಿಮ್ಮಂಗದಾಚಾರವ ಕಂಡು ಎನಗೆ
ಲಿಂಗಸ್ವಾಯತವಾಯಿತಯ್ಯ
ಬಸವಣ್ಣ ನಿಮ್ಮ ಮನದ ಸುಜ್ಞಾನವ ಕಂಡು ಎನಗೆ
ಜಂಗಮಸಂಬಂಧವಾಯಿತ್ತಯ್ಯ
ಬಸವಣ್ಣ ನಿಮ್ಮ ಸದ್ಭಕ್ತಿಯ ತಿಳಿದೆನಗೆ
ನಿಜವು ಸಾಧ್ಯವಾಯಿತ್ತಯ್ಯ
ಚೆನ್ನಮಲ್ಲಿಕಾರ್ಜುನಯ್ಯ ಹೆಸರಿಟ್ಟ ಗುರು ನೀವಾದ ಕಾರಣ
ನಿಮ್ಮ ಶ್ರೀಪಾದಕ್ಕೆ
ನಮೋ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣ
೨೦೬.
ದೇವಲೋಕದವರಿಗೂ ಬಸವಣ್ಣನೇ ದೇವರು
ನಾಗಲೋಕದವರಿಗೂ ಬಸವಣ್ಣನೇ ದೇವರು
ಮರ್ತ್ಯಲೋಕದವರಿಗೂ ಬಸವಣ್ಣನೇ ದೇವರು
ಮೇರುಗಿರಿ-ಮಂದರಗಿರಿ ಮೊದಲಾದವೆಲ್ಲಕ್ಕು ಬಸವಣ್ಣನೇ ದೇವರು
ಚೆನ್ನಮಲ್ಲಿಕಾರ್ಜುನಯ್ಯ, ನಿಮಗೂ ಎನಗೂ ಎಮ್ಮ ಶರಣರಿಗೂ
ಬಸವಣ್ಣನೇ ದೇವರು
೨೦೭.
ಆದಿ-ಅನಾದಿಗಳಿಂದತ್ತಲಯ್ಯ ಬಸವಣ್ಣ
ಮೂಲದೇವರ ಮೂಲಸ್ಥಾನವಯ್ಯ ಬಸವಣ್ಣ
ನಾದ-ಬಿಂದು-ಕಳಾತೀತ ಆದಿನಿರಂಜನನಯ್ಯ ಬಸವಣ್ಣ
ಅನಾದಿಸ್ವರೂಪವೇ ಬಸವಣ್ಣನಾದ ಕಾರಣ
ಆ ಬಸವನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯ
೨೦೮.
ಶಿವಶಿವಾ ಆದಿಅನಾದಿಯೆಂಬೆರಡೂ ಇಲ್ಲದೆ
ನಿರವಯವಾಗಿಪ್ಪ ಶಿವನೇ, ನಿಮ್ಮ ನಿಜವನಾರು ಬಲ್ಲರಯ್ಯ?
ವೇದಂಗಳಿಗಭೇದ್ಯನು, ಶಾಸ್ತ್ರಂಗಳಿಗಸಾಧ್ಯನು,
ಪುರಾಣಕ್ಕಗಮ್ಯನು, ಆಗಮಕ್ಕಗೋಚರನು, ತರ್ಕಕ್ಕತರ್ಕ್ಯನು
ವಾಙ್ಮನಕ್ಕತೀತವೆನಿಪ ಪರಶಿವಲಿಂಗನು
ಕೆಲಬರು ಸಕಲನೆಂಬರು, ಕೆಲಬರು ನಿಷ್ಕಲನೆಂಬರು
ಕೆಲವರು ಸೂಕ್ಷ್ಮನೆಂಬರು, ಕೆಲವರು ಸ್ಥೂಲನೆಂಬರು
ಈ ಬಗೆಯ ಭಾವದಿಂ ಹರಿ-ಬ್ರಹ್ಮ-ಇಂದ್ರ-ಚಂದ್ರ
ರವಿ-ಕಾಲ-ಕಾಮ-ದಕ್ಷ-ದೇವ-ದಾನವ-ಮಾನವರೊಳಗಾದವರೆಲ್ಲರೂ
ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾಗಿ ಹೋದರು
ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು
ನಮ್ಮ ಬಸವಣ್ಣನು ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಬಂದು
ವೀರಶೈವಮಾರ್ಗವರಿಪುವುದಕ್ಕೆ
ಬಾವನ್ನ ವಿವರವನೊಳಕೊಂಡು ಚರಿಸಿದನು ಅದೆಂತೆಂದಡೆ
ಗುರುಕಾರುಣ್ಯವೇದ್ಯನು, ವಿಭೂತಿರುದ್ರಾಕ್ಷಿಧಾರಕನು
ಪಂಚಾಕ್ಷರಿಭಾಷಾಸಮೇತನು, ಲಿಂಗಾಂಗಸಂಬಂಧಿ,
ನಿತ್ಯಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ,
ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು,
ಏಕಲಿಂಗನಿಷ್ಠಾಪರನು, ಚರಲಿಂಗಲೋಲುಪ್ತನು,
ಶರಣ ಸಂಗಮೇಶ್ವರನು, ತ್ರಿವಿಧದಲ್ಲಿ ಆಯತನು,
ತ್ರಿಕರಣಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ,
ಅನ್ಯದೈವಸ್ಮರಣೆಯ ಹೊದ್ದ
ಭವಿಸಂಗವ ಮಾಡ, ಭವಪಾಶವ ಕೊಳ್ಳ,
ಪರಸತಿಯ ಬೆರೆಸ, ಪರಧನವನೊಲ್ಲ,
ಪರನಿಂದೆಯನಾಡ, ಅನೃತವ ನುಡಿಯ, ಹಿಂಸೆಯ ಮಾಡ,
ತಾಮಸಭಕ್ತಸಂಗವ ಮಾಡ,
ಅರ್ಥ-ಪ್ರಾಣಾಭಿಮಾನ ಮುಂತಾಗಿ ಗುರುಲಿಂಗಜಂಗಮಕ್ಕೆ ಅರ್ಪಿಸಿ
ಪ್ರಸಾದ ಮುಂತಾಗಿ ಭೋಗಿಸುವ,
ಜಂಗಮನಿಂದೆಯ ಸೈರಿಸ, ಪ್ರಸಾದನಿಂದೆಯ ಕೇಳ,
ಅನ್ಯರನಾಶೆಗೈಯ್ಯ ಪಾತ್ರಾಪಾತ್ರವನರಿದೀವ
ಚತುರ್ವಿಧ ಪದವಿಯ ಹಾರ, ಅರಿಷಡ್ವರ್ಗಕ್ಕಳುಕ
ಕುಲಾದಿ ಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ
ಸಂಕಲ್ಪ ವಿಕಲ್ಪವ ಮಾದುವನಲ್ಲ, ಕಾಲೋಚಿತವ ಬಲ್ಲ,
ಕ್ರಮಯುಕ್ತವಾಗಿ ಷಟ್ಝಲಭರಿತ,
ಸರ್ವಾಂಗಲಿಂಗಿ, ದಾಸೋಹಸಂಪನ್ನ-
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ ಮೆರೆವ ನಮ್ಮ ಬಸವಣ್ಣನು
ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ
ನಮೋ ನಮೋ ಎಂದು ಬದುಕಿದೆನು ಕಾಣಾ ಚೆನ್ನಮಲ್ಲಿಕಾರ್ಜುನ
೨೦೯.
ಅಂಗದಲ್ಲಿ ಆಚಾರವ ತೋರಿದ
ಆ ಆಚಾರವೇ ಲಿಂಗವೆಂದರುಹಿದ
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ
ಆ ಅರಿವೆ ಲಿಂಗಜಂಗಮವೆಂದು ತೋರಿದ
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ
೨೧೦.
ಅಂಗ ಕ್ರಿಯಾಲಿಂಗವ ವೇದಿಸಿ
ಅಂಗ ಲಿಂಗದೊಳಗಾಯಿತು
ಮನ ಅರಿವ ಬೆರೆಸಿ, ಜಂಗಮಸೇವೆಯ ಮಾಡಿ
ಮನ ಜಂಗಮಲಿಂಗದೊಳಗಾಯಿತು
ಭಾವ ಗುರುಲಿಂಗದೊಳಗೆ ಬೆರೆಸಿ, ಮಹಾಪ್ರಸಾದವ ಭೋಗಿಸಿ
ಭಾವ ಗುರುಲಿಂಗದೊಳಗಾಯಿತು
ಚೆನ್ನಮಲ್ಲಿಕಾರ್ಜುನ ನಿಮ್ಮ ಒಲುಮೆಯಿಂದ
ಸಂದಳಿದು ಸ್ವಯಲಿಂಗವಾದೆನಯ್ಯ ಪ್ರಭುವೆ
Comments
Post a Comment