Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.
೨೧೧.
ಅಂಗಸಂಗಿಯಾಗಿ ಸಂಬಂಧಿಯಲ್ಲ
ಲಿಂಗದೊಳಗಾಪ್ಯಾಯಿನಿಯಾಗಿ ಇತರ ಸು-
ಖಂಗಳ ಬಿಟ್ಟು ಕಳೆದು ಸಮನ ಸಾರಾಯನಾದ ಶರಣನು ||ಪಲ್ಲವ||
ಗುರುಕರುಣಸಂಗದಿಂದ ಶಿಷ್ಯನಿಂತು ಕರದಲ್ಲಿ ಹುಟ್ಟಿದನು
ಕರಣಸಹಿತ ಅವಗ್ರಾಹಿಯಾಗಿ ಘಾಳಿ ಸುಳುಹಡಗಿದ ಶರಣನು ||೧||
ಆಸೆಯೆಂಬ ಹದನುಳುಹಾಗಿ ಹಿಡಿದ ಛಲ ಬಿಡದೆಂಬ ಬೇರೂರಿ
ಸಂಕಲ್ಪವಿಕಲ್ಪಗಳೆರಡೂ ಇಲ್ಲದೆ ನಿಃಕಳಂಕನಾದನು ಶರಣನು ||೨||
ಮಾಡುವವರ ಕಂಡು ಮಾಡುವವನಲ್ಲ
ಮಾಡದವರ ಕಂಡು ಮಾಡದವನಲ್ಲ
ತಾ ಮಾಡುವ ಮಾಟಕೆ ತವಕಿಗನಾಗಿಪ್ಪ
ಹಿಂದುಮುಂದರಿಯದ ಶರಣನು ||೩||
ಎಲ್ಲವು ತಾನೆಂಬ ಕರುಣಾಕರನಲ್ಲ
ನಿಃಕರುಣಿಯಾಗಿ ಜಡದೇಹಿಯಲ್ಲ
ಭೋಗಿಪ ಭೋಗಂಗಳಾಮಿಷ
ತಾಮಸ ವಿಷಯವಿರಹಿತನು ಶರಣನು ||೪||
ಘನವನಿಂಬುಗೊಂಡ ಮನದ ಬೆಂಬಳಿವಿಡಿದುಳೆದಲ್ಲಿ
ನಿಜವಾಗಿ ನಿಂದನು ತಾನೆಂಬುದಿಲ್ಲ
ನಿರಂತರ ಸದ್ಗುರು ಚೆನ್ನಮಲ್ಲಿಕಾರ್ಜುನ
ನಿಮ್ಮ ಶರಣ ಬಸವಣ್ಣನು ||೫||
೨೧೨.
ಅಂಗದಲ್ಲಿ ಲಿಂಗಸಂಗ
ಲಿಂಗದಲ್ಲಿ ಅಂಗಸಂಗ ಮಾಡಿದನೆಂದರೆ
ಎನ್ನಗಾವ ಜಂಜಡವಿಲ್ಲ
ಚೆನ್ನಮಲ್ಲಿಕಾರ್ಜುನನ ಸ್ನೇಹದಲ್ಲಿ
ನಿನ್ನ ಕರುಣದ ಶಿಶು ನಾನು ಕಾಣ
ಸಂಗನಬಸವಣ್ಣ
೨೧೩.
ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ
ಇಂಗಿತವೇನೆಂದು ಬೆಸಗೊಂಬಿರಯ್ಯ?
ಅವರ ನಡೆಯೇ ಆಗಮ, ಅವರ ನುಡಿಯೇ ವೇದ
ಅವರ ಲೋಕದ ಮಾನವರೆನ್ನಬಹುದೇ?
ಆದೆಂತೆಂದೊಡೆ
"ಬೀಜಾದ್ಭವತಿ ವೃಕ್ಷಂ ತು
ಬೀಜೇ ತು ಲೀಯತೇ ಪುನಃ
ರುದ್ರಲೋಕಂ ಪರಿತ್ಯಕ್ತ್ವಾ
ಶಿವಲೋಕೇ ಭವಿಷ್ಯತಿ"
ಎಂಬುದಾಗಿ ಅಂಕೋಲೆಯ ಬೀಜದಿಂದಾಯಿತ್ತು ವೃಕ್ಷವು
ಆ ವೃಕ್ಷವು ಮರಳಿ ಆ ಬೀಜದೊಳಡಗಿತ್ತು
ಆ ಪ್ರಾಕಾರದಿಂ
ಆ ಲಿಂಗದೊಳಗಿದ್ದ ಪುರಾತನರು
ಆ ಲಿಂಗದೊಳಗೆ ಬೆರೆಸಿದರು ನೋಡಿರಯ್ಯ
ಇಂತಪ್ಪ ಪುರಾತನರಿಗೆ ನಾನು ಶರಣೆಂದು
ಹುಟ್ಟುಗೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನ
೨೧೪.
ಲಿಂಗಕ್ಕೆ ರೂಪ ಸಲಿಸುವೆ
ಜಂಗಮಕ್ಕೆ ರುಚಿಯ ಸಲಿಸುವೆ
ಕಾಯಕ್ಕೆ ಶುದ್ಧಪ್ರಸಾದವ ಕೊಂಬೆ
ಪ್ರಾಣಕ್ಕೆ ಸಿದ್ಧಪ್ರಸಾದವ ಕೊಂಬೆ
ನಿಮ್ಮ ಪ್ರಸಾದದಿಂದ ಧನ್ಯಳಾದೆನು ಚೆನ್ನಮಲ್ಲಿಕಾರ್ಜುನಯ್ಯ
೨೧೫.
ನಾನು ಮಜ್ಜನವ ಮಾಡುವುದಕ್ಕೆ ಮುನ್ನವೇ
ಜಂಗಮಕ್ಕೆ ಮಜ್ಜನ ಮಾಡಿಸುವೆ
ನಾನು ಸೀರೆಯನುಡುವುದಕ್ಕೆ ಮುನ್ನವೇ
ಜಂಗಮಕ್ಕೆ ದೇವಾಂಗವನುಡಿಸುವೆ
ನಾನು ಪರಿಮಳವ ಲೇಪಿಸುವುದಕ್ಕೆ ಮುನ್ನವೇ
ಜಂಗಮಕ್ಕೆ ಸುಗಂಧದ್ರವ್ಯಗಳ ಲೇಪಿಸುವೆ
ನಾನು ಅಕ್ಷತೆಯನಿಡುವುದಕ್ಕೆ ಮುನ್ನವೇ
ಜಂಗಮಕ್ಕೆ ಅಕ್ಷತೆಯನಿಡುವೆ
ನಾನು ಧೂಪವಾಸನೆಯ ಕೊಳುವುದಕ್ಕೆ ಮುನ್ನವೇ
ಜಂಗಮಕ್ಕೆ ಧೂಪವಾಸನೆಯ ಕೊಡುವೆ
ನಾನು ಧೂಪಾರತಿಯ ನೋಡುವುದಕ್ಕೆ ಮುನ್ನವೇ
ಜಂಗಮಕ್ಕೆ ಆರತಿಯ ನೋಡಿಸುವೆ
ನಾನು ಸಕಲ ಪದಾರ್ಥವ ಸ್ವೀಕರಿಸುವುದಕ್ಕೆ ಮುನ್ನವೇ
ಜಂಗಮಕ್ಕೆ ಮಿಷ್ಟಾನ್ನವ ನೀಡುವೆ
ನಾನು ಪಾನಂಗಳ ಕೊಳುವುದಕ್ಕೆ ಮುನ್ನವೇ
ಜಂಗಮಕ್ಕೆ ಅಮೃತಪಾನಂಗಳ ಕೊಡುವೆ
ನಾನು ಕೈಯ ತೊಳೆವುದಕ್ಕೆ ಮುನ್ನವೇ
ಜಂಗಮಕ್ಕೆ ಹಸ್ತಪ್ರಕ್ಷಾಲನವ ಮಾಡಿಸುವೆ
ನಾನು ವೀಳೆಯಂ ಮಡಿವುದಕ್ಕೆ ಮುನ್ನವೇ
ಜಂಗಮಕ್ಕೆ ತಾಂಬೂಲವ ಕೊಡುವೆ
ನಾನು ಗದ್ದಿಗೆಯ ಮೇಲೆ ಕುಳ್ಳಿರುವುದಕ್ಕೆ ಮುನ್ನವೇ
ಜಂಗಮಕ್ಕೆ ಉನ್ನತಾಸನವನಿಕ್ಕುವೆ
ನಾನು ಸುನಾದಗಳ ಕೇಳುವ ಮುನ್ನವೇ
ಜಂಗಮಕ್ಕೆ ಸಂಗೀತವಾದ್ಯಂಗಳ ಕೇಳಿಸುವೆ
ನಾನು ಭೂಷಣಂಗಳ ತೊಡುವುದಕ್ಕೆ ಮುನ್ನವೇ
ಜಂಗಮಕ್ಕೆ ಆಭರಣಂಗಳ ತೊಡಿಸುವೆ
ನಾನು ವಾಹನಂಗಳನೇರುವುದಕ್ಕೆ ಮುನ್ನವೇ
ಜಂಗಮಕ್ಕೆ ವಾಹನವನೇರಿಸುವೆ
ನಾನು ಮನೆಯೊಳಗಿರುವುದಕ್ಕೆ ಮುನ್ನವೇ
ಜಂಗಮಕ್ಕೆ ಗೃಹವ ಕೊಡುವೆ
ಇಂತೀ ಹದಿನಾರು ತೆರನ ಭಕ್ತಿಯ ಚರಲಿಂಗಕ್ಕೆ ಕೊಟ್ಟು
ಆ ಚಿರಲಿಂಗಮೂರ್ತಿ ಭೋಗಿಸಿದ ಬಳಿಕ
ನಾನು ಪ್ರಸಾದವ ಮುಂತಾಗಿ ಭೋಗಿಸುವೆನಲ್ಲದೆ
ಜಂಗಮನಿಲ್ಲದೆ ಇನಿತರೊಳಗೊಂದು
ಭೋಗವನಾದರೂ ನಾನು ಭೋಗಿಸಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಇಂತೀ ಕ್ರಮವಲ್ಲಿ ನಡೆದಾತಂಗೆ
ಗುರುವುಂಟು, ಲಿಂಗವುಂಟು, ಜಂಗಮವುಂಟು,
ಪಾದೋದಕವುಂಟು, ಪ್ರಸಾದವುಂಟು,
ಆಚಾರವುಂಟು, ಭಕ್ತಿಯುಂಟು
ಈ ಕ್ರಮದಲ್ಲಿ ನಡೆಯದಾತಂಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕವಿಲ್ಲ, ಪ್ರಸಾದವಿಲ್ಲ,
ಆಚಾರವಿಲ್ಲ, ಸದ್ಭಕ್ತಿಯಿಲ್ಲ
ಅವನ ಬಾಳುವೆ ಹಂದಿಯ ಬಾಳುವೆ
ಅವನ ಬಾಳುವೆ ಕತ್ತೆಯ ಬಾಳುವೆ
ಅವನು ಸುರೆ-ಮಾಂಸ ಭುಂಜಕನು
ಅವನು ಸರ್ವಚಂಡಾಲನಯ್ಯ ಚೆನ್ನಮಲ್ಲಿಕಾರ್ಜುನ
೨೧೬.
ಅಯ್ಯ ಸದಾಚಾರ-ಸದ್ಭಕ್ತಿ-ಸತ್ಕ್ರಿಯೆ-ಸಮ್ಯಜ್ಞಾನ
ಸದ್ವರ್ತನೆ-ಸಗುಣ-ನಿರ್ಗುಣ-ನಿಜಗುಣ-ಸಚ್ಚರಿತ-ಸದ್ಭಾವ
ಅಕ್ರೋಧ-ಸತ್ಯವಚನ-ಕ್ಷಮೆ-ದಯೆ-ಭವಿಭಕ್ತಭೇದ
ಸತ್ಪಾತ್ರದ್ರವ್ಯಾರ್ಪಣ-ಗೌರವಬುದ್ಧಿ-ಲಿಂಗಲೀಯ
ಜಂಗಮಾನುಭಾವ-ದಶವಿಧ ಪಾದೋದಕ-ಏಕಾದಶಪ್ರಸಾದ
ಷೋಡಶ ಭಕ್ತಿನಿರ್ವಾಹ
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಚನೆ
ತ್ರಿವಿಧ ಷಡ್ವಿಧ ನವವಿಧ ಜಪ
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಪಿತ
ಚಿದ್ವಿಭೂತಿ ಸ್ನಾನ ಧೂಳನ ಧಾರಣ
ಸರ್ವಾಂಗದಲ್ಲಿ ಚಿದ್ರುದ್ರಾಕ್ಷಿ ಧಾರವ
ತಾ ಮಾಡುವ ಸತ್ಯಕಾಯಕ
ತಾ ಬೇಡುವ ಸದ್ಭಕ್ತಿ ಭಿಕ್ಷ
ತಾ ಕೊಟ್ಟು ಕೊಂಬ ಭೇದ
ತಾನಾಚರಿಸುವ ಸತ್ಯ ನಡೆನುಡಿ
ತಾ ನಿಂದ ನಿರ್ವಾಣಪದ-
ಇಂತೀ ಮುವ್ವತ್ತೆರಡು ಕಲೆಗಳ ಸದ್ಗುರುಮುಖದಿಂದರಿದ
ಬಸವ ಮೊದಲಾದ ಸಮಸ್ತ ಪ್ರಮಥ ಗಣಂಗಳೆಲ್ಲ
ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದರೂ ನೋಡಾ!
ಇಂತು ಪ್ರಮಥಗಣಂಗಳಾಚರಿಸಿದ ಸತ್ಯಸನ್ಮಾರ್ಗವನರಿಯದ
ಮೂಢ ಅಧಮರನೆಂತು
ಶಿವಶಕ್ತಿ-ಶಿವಭಕ್ತಿ-ಶಿವಜಂಗಮವೆಂಬೆನಯ್ಯ
ಚೆನ್ನಮಲ್ಲಿಕಾರ್ಜುನ
೨೧೭.
ಸಪ್ತಕೋಟಿಮಹಾಮಂತ್ರಂಗಳಿಗೆ
ಉಪಮಂತ್ರಂಗಳುಂಟು
ಆ ಉಪಮಂತ್ರಂಗಳಿಂಗೆ ಲೆಕ್ಕವಿಲ್ಲ
ಆ ಜಾಳು ಮಂತ್ರಂಗಳಿಗೆ ಭ್ರಮಿಸಿ
ಚಿತ್ತವ್ಯಾಕುಲವಾಗಿ ಕೆಟ್ಟುಹೋಗದಿರು ಮನವೇ
ಶಿವಶಿವಾ ಎಂದೆಡೆ ಸಾಲದ್?
ಒಂದು ಕೋಟಿ ಮಹಾಪಾತಕ ಪರಿಹಾರವಕ್ಕು
ಆದೆಂತೆಂದಡೆ ಶಿವಧರ್ಮೇ
ಶಿವೇತಿ ಮಂಗಲಂ ನಾಮ
ಯಸ್ಯ ವಾಚಿ ಪ್ರವರ್ತತೇ
ಭಸ್ಮೀಭವಂತಿ ತಸ್ಯಾಶು
ಮಹಾಪಾತಕಕೋಟಯಃ
ಎಂದುದಾಗಿ, ಸದ್ಗುರು ಚೆನ್ನಮಲ್ಲಿಕಾರ್ಜುನ ತೋರಿದ
ಸಹಜಮಂತ್ರವೆನಗಿದೇ ಪರಮತತ್ವವಯ್ಯ
೨೧೮.
ಒಪ್ಪುವ ಶ್ರೀವಿಭೂತಿಯ ನೊಸಲಲ್ಲಿ ಧರಿಸಿ
ದೃಷ್ಟಿವಾರೆ ನಿಮ್ಮ ನೋಡಲೊಡನೆ
ಬೆಟ್ಟದಷ್ಟು ತಪ್ಪುಳ್ಳಡೆಯೂ ಮುಟ್ಟಲಮ್ಮವು ನೋಡಾ
ದುರಿತವ ಪರಿಹರಿಸಬಲ್ಲಡೆ
ಓಂ ನಮಶ್ಶಿವಾಯ ಶರಣೆಂಬುದೇ ಮಂತ್ರ
ಓಂ ನಮಶ್ಶಿವಾಯೇತಿ ಮಂತ್ರಂ
ಯಃ ಕರೋತಿ ತ್ರಿಪುಂಡ್ರಕಂ
ಸಪ್ತ ಜನ್ಮಕೃತಂ ಪಾಪಂ
ತತ್ ಕ್ಷಣಾದೇವ ವಿನಶ್ಯತಿ
ಎಂದುದಾಗಿ ಸಿಂಹದ ಮರಿಯ ಸೀಳುನಾಯಿ ತಿಂಬಡೆ
ಭಂಗವಿನ್ನಾರದು ಚೆನ್ನಮಲ್ಲಿಕಾರ್ಜುನ?
೨೧೯.
ಹಿತವಿದೇ, ಸಕಲಲೋಕದ ಜನಕ್ಕೆ ಮತವಿದೇ
ಶೃತಿ-ಪುರಾಣಾಗಮದ ಗತಿಯಿದೇ
ಭಕುತಿಯ ಬೆಳಗಿನ ಉನ್ನತಿಯಿದೇ
ಇಂತಪ್ಪ ಶ್ರೀವಿಭೂತಿಯ ಧರಿಸಿರೆ
ಭವವ ಪರಿವುದು, ದುರಿತಸಂಕುಳವನೊರೆಸುವುದು
ನಿರುತವಿದು ನಂಬು ಮನುಜ! ಜವನ ಭೀತಿಯೀ ವಿಭೂತಿ
ಮರಣಭಯದಿಂದ ಅಗಸ್ತ್ಯ-ಕಶ್ಯಪ-ಜಮದಗ್ನಿಗಳು
ಧರಿಸಿದರಂದು ನೋಡಾ
ಶ್ರೀಶೈಲಚೆನ್ನಮಲ್ಲಿಕಾರ್ಜುನನೊಲಿಸುವ ವಿಭೂತಿ
೨೨೦.
ಹಾಲು ಹಿಡಿದು ಬೆಣ್ಣೆಯನರಸಲುಂಟೆ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ?
ಲಿಂಗದ ಪಾದತೀರ್ಥಪ್ರಸಾದವ ಕೊಂಡು
ಅನ್ನಬೋಧೆ-ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದರೆ
ತಡೆಯದೇ ಹುಟ್ಟಿಸುವ ಶ್ವಾನಗರ್ಭದಲ್ಲಿ
ಆದೆಂತೆಂದಡೆ-ಶಿವಧರ್ಮಪುರಾಣೇ
ಇಷ್ಟಲಿಂಗಮವಿಶ್ವಸ್ಯ
ತೀರ್ಥಲಿಂಗಂ ನಮಸ್ಕೃತಃ
ಶ್ವಾನಯೋನಿಶತಂ ಗತ್ವಾ
ಚಂಡಾಲಗೃಹಮಾಚರೇತ್
ಎಂದುದಾಗಿ-ಇದನರಿದು
ಗುರು ಕೊಟ್ಟ ಲಿಂಗದಲ್ಲಿಯೇ
ಎಲ್ಲಾ ತೀರ್ಥಂಗಳು, ಎಲ್ಲಾ ಕ್ಷೇತ್ರಂಗಳು
ಇಹವೆಂದು ಭಾವಿಸಿ ಮುಕ್ತರಪ್ಪುವುದಯ್ಯ
ಇಂತಲ್ಲದೆ-ಗುರು ಕೊಟ್ಟ ಲಿಂಗವ ಕಿರಿದು ಮಾಡಿ
ತೀರ್ಥಲಿಂಗವ ಹಿರಿದು ಮಾಡಿ ಹೋದಾತಂಗೆ
ಅಘೋರನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನ
Comments
Post a Comment