Skip to main content

ಅಕ್ಕನ ವಚನಗಳು - 221 ರಿಂದ 230 ರವರೆಗೆ

Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.

Please follow my post and post your valuable comments.

 
 
೨೨೧.
ಸದ್ಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
ತತ್ ಶಿಷ್ಯನ ಮಸ್ತಕದ ಮೇಲೆ ತನ್ನ ಶ್ರೀಹಸ್ತವನಿರಿಸಿದಡೆ
ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯ
ಒಪ್ಪುವ ಶ್ರೀವಿಭೂತಿಯ ನೊಸಲಿಂಗೆ ಪಟ್ಟವ ಕಟ್ಟಿದಡೆ
ಮುಕ್ತಿಸಾಮ್ರಾಜ್ಯದೊಡೆತನಕ್ಕೆ ಪಟ್ಟವ ಕಟ್ಟಿದಂತಾಯಿತ್ತಯ್ಯ
ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನವೆಂಬ
ಪಂಚಕಲಶದ ಅಭಿಷೇಕವ ಮಾಡಿಸಲು
ಶಿವನ ಕಾರುಣ್ಯಾಮೃತದ ಸೋನೆ ಸುರಿದಂತಾಯಿತ್ತಯ್ಯ
ನೆರೆದ ಶಿವಂಗಳ ಮಧ್ಯದಲ್ಲಿ
ಮಹಾಲಿಂಗವನು ಕರಸ್ಥಲಾಮಲಕವಾಗಿ
ಶಿಷ್ಯನ ಕರಸ್ಥಲಕ್ಕೆ ಇಟ್ಟು, ಅಂಗದಲ್ಲಿ ಪ್ರತಿಷ್ಠಿಸಿ
ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ
ಕಂಕಣವ ಕಟ್ಟಿದಲ್ಲಿ ಕಾಯವೇ ಕೈಲಾಸವಾಯಿತ್ತು
ಪ್ರಾಣವೇ ಪಂಚಬ್ರಹ್ಮಮಯ ಲಿಂಗವಾಯಿತ್ತು
ಇಂದು ಮುಂದ ತೋರಿ ಹಿಂದ ಬಿಡಿಸಿದ
ಶ್ರೀಗುರುವಿನ ಸಾನಿದ್ಧ್ಯದಿಂದಾನು
ಬದುಕಿದೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ

೨೨೨.
ನಮ್ಮ ಮನೆಯಲಿಂದು ಹಬ್ಬ
ನಮಗೆ ಸಂದಣಿ ಬಹಳ
ಒಮ್ಮೆ ನುಡಿಸ ಹೊತ್ತಿಲ್ಲ
ಹೋಗಿ ವಿಷಯಗಳಿರಾ
ತನುವೆಂಬ ಮನೆಯೊಳಗೆ ನೆಲಸಿಪ್ಪ ಪರಮಾತ್ಮ
ಮನೆಯ ದೇವರ ಹಬ್ಬ! ಆ ಹಬ್ಬಕಿಂದು
ನೆನೆಯದೆ ಮಿಂದು ನಡೆಯದೆ ಹೋಗಿ ಬಲಗೊಂಡು
ನೆನಹಿನಮೃತಾನ್ನದುಪಹಾರವಿಡಬೇಕು
ನೆರಹುಗುಡದೆ ಏಕಾಂತದೊಳಗಿರಬೇಕು
ನೆರಹಬೇಕಮಲಗುಣ ಪರವಸ್ತುಗಳನು
ಪರಿಹರಿಸಿ ಕಳೆಯಬೇಕಯ್ಯ ವಿಷಯಗಳನು
ಎರಡಿಲ್ಲದೊಂದು ಮನದಲ್ಲಿ ಭಜಿಸಬೇಕು
ನೋಡದೆ ಕಂಡು, ನುಡಿಸದೆ ಹೊಗಳಿ ಭಕ್ತಿಯಿಂ
ಬೇಡದೆ ಪರಮಪದವಿಯ ಪಡೆಯಬೇಕು
ನಾಡಾಡಿ ದೈವದಂತಲ್ಲವಿದು ಅಸಮಾಕ್ಷ
ರೂಢಿಯೊಳು ಚೆನ್ನಮಲ್ಲನ ಭಜಿಸಬೇಕು

೨೨೩.
ಕಂಗಳ ನೋಟವು, ಕಾಯದ ಕರದಲಿ
ಲಿಂಗದ ಕೂಟವು ಶಿವಶಿವ ಚೆಲುವನು
ಮಂಗಳ ಮೂರುತಿ ಮಲೆಗಳ ದೇವಂಗೆತ್ತುವೆನಾರತಿಯ ||ಪಲ್ಲವ||
ಜಗವಂದ್ಯಗೆ ಬೇಟವ ಮಾಡಿದೆ, ನಾ
ಹಗೆಯಾದೆನು ಸಂಸಾರಕೆಲ್ಲ
ನಗುತೈದರೆ ಲಜ್ಜೆ ನಾಚಿಕೆಯೆಲ್ಲವ ತೊರೆದವಳೆಂದೆನ್ನ
ಗಗನಗಿರಿಯ ಮೇಲಿರ್ದಹನೆಂದೆಡೆ
ಲಗುನಿಯಾಗಿ ನಾನರುಸುತ ಬಂದೆನು
ಅಘಹರ ಕರುಣಿಸು ನಿಮಗಾನೊಲಿದೆನು ಮಿಗೆ ಒಲಿದಾರತಿಯ ||೧||
ಭಕುತಿರತಿಯ ಸಂಭಾಷಣೆಯಿಂದವೆ
ಯುಕುತಿಯ ಮರೆದೆನು, ಕಾಯದ ಜೀವದ
ಪ್ರಕೃತಿಯ ತೊರೆದೆನು, ಸುತ್ತಿದ ಮಾಯಾಪಾಶವ ಹರಿದೆನಲಾ
ಸುಕೃತಿಯಾಯಿತು ನಿಮ್ಮಯ ನೆನಹಿಂದವೆ
ಮುಕುತಿಯ ಫಲಗಳ ದಾಂಟಿಯೆ ಬಂದೆನು
ಸಕುತಿಯಾದೆ ನಾ ಪ್ರಾಣಲಿಂಗಕೆ ಮನವೊಲಿದಾರತಿಯ ||೨||
ಮೆಚ್ಚಿ ಒಲಿದು ಮನವಗಲದ ಭಾವವು
ಬಿಚ್ಚದೆ ಬೇರೊಂದೆನಿಸದೆ, ಪ್ರಾಣವು
ಬೆಚ್ಚಂತಿರ್ದುದು, ಅಚ್ಚೊತ್ತಿದಾ ಮಹಘನ ತಾ ನೆಲೆಗೊಂಡು
ಪಶ್ಚಿಮ ಮುಖದಲಿ ಬೆಳಗು ಪ್ರಕಾಶವು
ನಿಚ್ಚನಿರಂಜನ ಚೆನ್ನಮಲ್ಲಿಕಾರ್ಜುನ
ಗೆತ್ತುವೆನಾರತಿ ಈ ರತಿಯಿಂದವೆ ಮನವೊಲಿದಾರತಿಯ ||೩||

೨೨೪.
ಅಯ್ಯ, ಸರ್ವಮೂಲಾಹಂಕಾರವಿಡಿದು
ಕುಲಭ್ರಮೆ! ಬಲಭ್ರಮೆ! ಜಾತಿಭ್ರಮೆ!
ನಾಮ-ವರ್ಣ-ಆಶ್ರಮ-ಮತ-ಶಾಸ್ತ್ರಭ್ರಮೆ! ರಾಜ್ಯಭ್ರಮೆ!
ಧನ-ಧಾನ್ಯ-ಪುತ್ರ-ಮಿತ್ರ-ಐಶ್ವರ್ಯ-ತ್ಯಾಗ-ಯೋಗಭ್ರಮೆ!
ಕಾಯ-ಕರಣ-ವಿಷಯಭ್ರಮೆ!
ವಾಯು-ಮನ-ಭಾವ-ಜೀವ-ಮೋಹಭ್ರಮೆ!
ನಾಹಂ-ಕೋಹಂ ಭ್ರಮೆ! ಶಿವೋಹಂ ಭ್ರಮೆ ಮಾಯಾಭ್ರಮೆ!
ಮೊದಲಾದ ಮೂವತ್ತೆರಡು ಪಾಶಭ್ರಮಿತರಾಗಿ ತೊಳಲುವ
ವೇಷಧಾರಿಗಳ ಕಂಡು-
ಶಿವಭಕ್ತಿ-ಶಿವಭಕ್ತ-ಶಿವಪ್ರಸಾದಿ-ಶಿವಶರಣ-
ಶಿವೈಕ್ಯ-ಶಿವಜಂಗಮವೆಂದು
ನುಡಿಯಲಾರದೆ ಎನ್ನ ಮನ ನಾಚಿ
ನಿಮ್ಮಡಿಗಳಿಗಭಿಮುಖವಾಯಿತ್ತಯ್ಯ, ಚೆನ್ನಮಲ್ಲಿಕಾರ್ಜುನ

೨೨೫.
ಅಯ್ಯ ಚಿದಂಗ-ಚಿದ್ರನಲಿಂಗ-
ಶಿವ-ಭಕ್ತಿ-ಹಸ್ತ-ಮುಖ-ಪದಾರ್ಥ-ಪ್ರಸಾದ
ಎಂಬಿವಾದಿಯಾದ ಸಮಸ್ತಸಕೀಲಂಗಳ ನೆಲೆಕಲೆಯನರಿಯದೆ
ಜಿಹ್ವಾಲಂಪಟಕ್ಕೆ ಆಹ್ವಾನಿಸಿ
ಗುಹ್ಯಲಂಪಟದಲ್ಲಿ ವಿಸರ್ಜಿಸಿ
ಸಕಲೇಂದ್ರಿಯ ಮುಖದಲ್ಲಿ ಮೋಹಿಯಾಗಿ
ಸದ್ಗುರು ಕರುಣಾಮೃತರಸ ತಾನೆಂದರಿಯದೆ
ಬರಿದೆ, ಭಕ್ತ-ಮಾಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯ
ಗುರು-ಚರ-ಪರವೆಂದು ಬೊಗಳುವ ಕುನ್ನಿಗಳ ನೋಡಿ
ಎನ್ನ ಮನ ಬೆರಗು ನಿಬ್ಬೆರಗು ಆಯಿತ್ತಯ್ಯ
ಚೆನ್ನಮಲ್ಲಿಕಾರ್ಜುನ

೨೨೬.
ಹಸಿವಿಂಗೆ ಭಿಕ್ಷವುಂಟು
ತೃಷೆಗೆ ಹಳ್ಳದಲ್ಲಿ ಸುಚಿತ್ತವಾದ ಅಗ್ರವಣಿಯುಂಟು
ಕಟ್ಟಿಕೊಂಬೆಡೆ ತಿಪ್ಪೆಯ ಮೇಲೆ ಅರಿವೆಯುಂಟು
ಶಯನಕ್ಕೆ ಹಾಳುದೇಗುಲವುಂಟು
ನಮ್ಮ ಸಮಸುಖಿಯಾಗಿ ನಿಮ್ಮ ಜ್ಞಾನವುಂಟು
ಚೆನ್ನಮಲ್ಲಿಕಾರ್ಜುನ

೨೨೭.
ಯೋಗಿಗೆ ಯೋಗಿಣಿಯಾಗಿಹಳು ಮಾಯೆ
ಜೋಗಿಗೆ ಜೋಗಿಣಿಯಾಗಿಹಳು ಮಾಯೆ
ಶ್ರವಣಗೆ ಕಂತಿಯಾದಳು ಮಾಯೆ
ಯತಿಗೆ ಪರಾರ್ಥ [=ಪರಾಕಿ]ವಾದಳು ಮಾಯೆ
ಹೆಣ್ಣಿಗೆ ಗಂಡು ಮಾಯೆ
ಗಂಡಿಗೆ ಹೆಣ್ಣು ಮಾಯೆ
ನಿಮ್ಮ ಮಾಯೆಗೆ ನಾನಂಜುವವಳಲ್ಲ ಚೆನ್ನಮಲ್ಲಿಕಾರ್ಜುನ

೨೨೮.
ಕಲ್ಯಾಣ-ಕೈಲಾಸವೆಂಬ ನುಡಿ ಹಸನಾಯಿತ್ತು
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ
ಇದರಂತುವನಾರು ಬಲ್ಲರೈಯ್ಯಾ ?
ನಿಮ್ಮ ಸತ್ಯಶರಣರ ಸುಳುಹು ತೋರುತ್ತಿದೆಯಯ್ಯಾ
ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು
ಕೇಳಾ ಚೆನ್ನಮಲ್ಲಿಕಾರ್ಜುನ

೨೨೯.
ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ
ಗಂಡು ಗಂಡಾದೊಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದೊಡೆ
ತನುವಿನ ಸೂತಕಕ್ಕೆ ತೆರಹುಂಟೇ ಅಯ್ಯ?
ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನೆಂಬ
ಗರುವಂಗೆ ಜಗವೆಲ್ಲ ಹೆಣ್ಣು ನೋಡಾ!

೨೩೦.
ಲೋಕವಿಡಿದು ಲೋಕದ ಸಂಗದಿಂದಿಪ್ಪೆನು
ಆಕಾರವಿಡಿದು ಸಾಕಾರಸಹಿತ ನಡೆವೆನು
ಹೊರಗೆ ಬಳಸಿ ಒಳಗೆ ಮೈಮರೆದಿಪ್ಪೆನು
ಬೆಂದ ನುಲಿಯಂತೆ ಹುರಿಗುಂದದಿಪ್ಪೆನು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ,
ಹತ್ತರೊಳಗೆ ಹನ್ನೊಂದಾಗಿ ನೀರ ತಾವರೆಯಂತಿಪ್ಪೆನು

Comments

  1. really good collection...i havent read so many vachanas till now...really i am getting new ones here..nice to read these daily...thanks a lot...

    ReplyDelete

Post a Comment

Popular posts from this blog

ಸರ್ವಜ್ಞನ ವಚನಗಳು - 91 ರಿಂದ 100

ಸರ್ವಜ್ಞನ ವಚನಗಳು -  91 ರಿಂದ 100 ೯೧. ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು ಹುಟ್ಟಿಸನದೇಕೆ ಸರ್ವಜ್ಞ ೯೨. ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು ಮತ್ತೆ ಪಾಂಡವರಿಗಾಳಾದ ಹರಿಯು ತಾ ನೆತ್ತಣಾ ದೈವ ಸರ್ವಜ್ಞ ೯೩. ನರಸಿಂಹನವತಾರ ಹಿರಿದಾದ ಅದ್ಭುತವು ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ ೯೪. ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ ಪಾಲಿಸದೆ ಹೋದ ಸರ್ವಜ್ಞ ೯೫. ಹರನವನ ಕೊಲುವಂದು, ಎರಳೆಯನು ಎಸೆವಂದು ಮರಳಿ ವರಗಳನು ಕೊಡುವಂದು ಪುರಹರಗೆ ಸರಿಯಾದ ಕಾಣೆ ಸರ್ವಜ್ಞ ೯೬. ಹರಿ ಬೊಮ್ಮನೆಂಬವರು, ಹರನಿಂದಲಾದವರು ಅರಸಿಗೆ ಆಳು ಸರಿಯಹನೆ ಶಿವನಿಂದ ಮೆರೆವರಿನ್ನಾರು ಸರ್ವಜ್ಞ ೯೭. ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ ನೆರೆಹತ್ತು ಜನನವಾಹರಿಗೆ ಇವರುಗಳು ಸರಿಯಹರೆ ಸರ್ವಜ್ಞ ೯೮. ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ ಸರಿಯಾರು ಹೇಳಿ ಸರ್ವಜ್ಞ ೯೯. ಇಂದ್ರನಾನೆಯನೇರಿ ಒಂದನೂ ಕೊಡಲರಿಯ ಚ್ಂದ್ರಶೇಖರನು ಮುದಿಯೆತ್ತನೇರಿ ಬೇಕೆಂದುದನು ಕೊಡುವ ಸರ್ವಜ್ಞ ೧೦೦. ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ ಶಂಭುವಿದ್ದಂತೆ ಮತ್ತೊಂದು ದೈವವನು ನಂಬುವನೆ ಹೆಡ್ಡ ಸರ್ವಜ್ಞ

ಬಸವಣ್ಣನ ವಚನಗಳು - 331 ರಿಂದ 340 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೩೧. ವ್ಯಾಸ ಬೋಯಿತಿಯ ಮಗ. ಮಾರ್ಕಂಡೇಯ ಮಾತಂಗಿಯ ಮಗ. ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿ ಭೋ! ಕುಲದಿಂದ ಮುನ್ನೇನಾದಿರಿ ಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ. ದೂರ್ವಾಸ ಮಚ್ಚಿಗ. ಕಶ್ಯಪ ಕಮ್ಮಾರ. ಕೌಂಡಿನ್ಯನೆಂಬ ಋಷಿ ಮೂರುಲೋಕವರಿಯೆ ನಾವಿದ ಕಾಣಿ ಭೋ! ನಮ್ಮ ಕೂಡಲಸಂಗನ ವಚನವಿಂತೆಂದುದು- "ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ! ೩೩೨. ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ. ಜಲಬಿಂದುವಿನ ವ್ಯವಹಾರವೊಂದೇ. ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ. ಏನನೋದಿ ಏನ ಕೇಳಿ ಏನು ಫಲ ?! ಕುಲಜನೆಂಬುದಕ್ಕೆ ಆವುದು ದೃಷ್ಟ ? "ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸ್ಸಮಸ್ತಸ್ಮಾತ್ ವರ್ಣಾನಾಂ ಕಿಂ ಪ್ರಯೋಜನಂ ?" || ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ? ಇದು ಕಾರಣ, ಕೂಡಲಸಂಗಮದೇವ, ಲಿಂಗಸ್ಥಲವನರಿದವನೇ ಕುಲಜನು! ೩೩೩. ಕೊಲುವವನೇ ಮಾದಿಗ! ಹೊಲಸ ತಿಂಬವನೇ ಹೊಲೆಯ! ಕುಲವೇನೋ ? ಆವದಿರ ಕುಲವೇನೋ ? ಸಕಲ ಜೀವಾ...

ಅಕ್ಕನ ವಚನಗಳು - 271 ರಿಂದ 280 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೨೭೧. ತನು ಶುದ್ಧ, ಮನ ಶುದ್ಧ, ಭಾವಶುದ್ಧವಾದವರನೆನಗೊಮ್ಮೆ ತೋರಾ! ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ, ನಿತ್ಯಶುದ್ಧರಾದವರನೆನಗೊಮ್ಮೆ ತೋರಾ! ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ ೨೭೨. ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ ೨೭೩. ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಸತ್ಯಶರಣರನುಭಾವವ! ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೇ! ೨೭೪. ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ! ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ! ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ! ಎಡರುವ ಹರಳೆಲ್ಲ ಚಿಂತಾಮಣಿ! ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ ನೋಡುತ ಬಂದು, ಕದಳಿಯ ಬನವ ಕಂಡೆ ನಾನು ೨೭೫. ತನುವೆಲ್ಲ ...