Skip to main content

ಅಕ್ಕನ ವಚನಗಳು - 231 ರಿಂದ 240 ರವರೆಗೆ

೨೩೧.
ತನುವ ಮೀರಿತ್ತು, ಮನವ ಮೀರಿತ್ತು
ಮಹವ ಮೀರಿತ್ತು
ಅಲ್ಲಿಂದತ್ತ ಭಾವಿಸುವ ಭಾವಕರಿಲ್ಲಾಗಿ ತಾರ್ಕಣೆಯಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ ಬೆರಸಲಿಲ್ಲದ ನಿಜತತ್ವವು

೨೩೨.
ಆಧಾರ-ಸ್ವಾಧಿಷ್ಠಾನ-ಮಣಿಪೂರಕ-
ಅನಾಹುತ-ವಿಶುದ್ಧಿ-ಆಜ್ಞೇಯವ ನುಡಿದರೇನು?
ಆದಿಯನಾದಿಯ [ಸುದ್ದಿಯ] ಕೇಳಿದಡೇನು, ಹೇಳಿದಡೇನು
ತನ್ನಲ್ಲಿದ್ದುದ ತಾನರಿಯದನ್ನಕ್ಕರ
ಉನ್ಮನಿರಭಸದ ಮನ ಪವನದ ಮೇಲೆ
ಚೆನ್ನಮಲ್ಲಿಕಾರ್ಜುನಯ್ಯನ ಭೇದಿಸಲಯದವರು?

೨೩೩.
ನಿತ್ಯವೆಂಬ ನಿಜಪದವೆನ್ನ ಹತ್ತೆ ಸಾರ್ದುದ ಕಂಡ ಬಳಿಕ
ಚಿತ್ತ ಕರಗಿ ಮನ ಕೊರಗಿ
ಹೃದಯವರಳಿತು ನೋಡಯ್ಯ
ಒತ್ತಿ ಬಿಗಿದ ಸೆರೆಯೊಳಗೆ ಅತ್ತಿತ್ತಲೆಂದರಿಯದೆ
ಚೆನ್ನಮಲ್ಲಿಕಾರ್ಜುನನ ಪಾದದಲ್ಲಿ
ಮರೆದೊರಗಿದೆ ನೋಡಯ್ಯ

೨೩೪.
ಆಶೆಯಾಮಿಷವಳಿದು
ಹುಸಿ ವಿಷಯಂಗಳೆಲ್ಲಾ ಹಿಂಗಿ
ಸಂಶಯಸಂಬಂಧ ವಿಸಂಬಂಧವಾಯಿತ್ತು ನೋಡಾ
ಎನ್ನ ಮನದೊಳಗೆ ಘನಪರಿಣಾಮವ ಕಂಡು
ಮನ ಮಗ್ನವಾಯಿತ್ತಯ್ಯ
ಚೆನ್ನಮಲ್ಲಿಕಾರ್ಜುನ,
ನಿಮ್ಮ ಶರಣ ಪ್ರಭುದೇವರ ಕರುಣದಿಂದ ಬದುಕಿದೆನಯ್ಯ

೨೩೫.
ಆದಿಅನಾದಿಯ ನಿತ್ಯಾನಿತ್ಯವ ತಿಳಿಯಲರಿಯದೆ
ವಾಯಕ್ಕೆ ಪರಬ್ರಹ್ಮವ ನುಡಿವ
ವಾಯುಪ್ರಾಣಿಗಳವರೆತ್ತ ಬಲ್ಲರೋ ಆ ಪರಬ್ರಹ್ಮದ ನಿಲವ?
ಅದೆಂತೆಂದಡೆ
ಆದಿಯೇ ದೇಹ, ಅನಾದಿಯೇ ನಿರ್ದೇಹ
ಆದಿಯೇ ಸಕಲ, ಅನಾದಿಯೇ ನಿಷ್ಕಲ
ಆದಿಯೇ ಜಡ, ಅನಾದಿಯೇ ಅಜಡ
ಆದಿಯೇ ಕಾಯ, ಅನಾದಿಯೇ ಪ್ರಾಣ
ಈ ಎರಡರ ಯೋಗವ ಭೇದಿಸಿ
ತನ್ನಿಂದ ತಾ ತಿಳಿದು ನೋಡಲು
ಆದಿಸಂಬಂಧಮಪ್ಪ ಭೂತಂಗಳೂ ನಾನಲ್ಲ,
ದಶೇಂದ್ರಿಯಗಳೂ ನಾನಲ್ಲ,
ಅಷ್ಟಮದಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು
ಷಡ್ಭಾವವಿಕಾರಂಗಳು ಷಟ್ಕರ್ಮಂಗಳು, ಷಡ್ಧಾತುಗಳು
ಸಪ್ತವ್ಯಸನಂಗಳು, ತನುತ್ರಯಂಗಳು, ಜೀವತ್ರಯಂಗಳು,
ಮನತ್ರಯಂಗಳು, ಮಲತ್ರಯಂಗಳು, ಗುಣತ್ರಯಂಗಳು,
ಭಾವತ್ರಯಂಗಳು, ತಾಪತ್ರಯಂಗಳು, ಷಟ್ಕರಣಂಗಳು,
ಇಂತಿವು ಆದಿಯಾಗಿ ತೋರುವ ತೋರಿಕೆಯೆ ನಾನಲ್ಲ
ಎನ್ನವೇ ಅಲ್ಲ!
ಎನ್ನ ಅಧೀನವಾಗಿರ್ಪವು, ನಾನಿವರ ಅಧೀನವಲ್ಲ
ಎನ್ನ ತುರ್ಯಾತುರ್ಯತೀತವಪ್ಪ ಸಚ್ಚಿದಾನಂದ,
ನಿತ್ಯಪರಿಪೂರ್ಣವೇ ತನ್ನಿರವೆಂದು ತಿಳಿಯೆ-
ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದಾ ಬೆಸುಗೆ ಬಿಟ್ಟು
ನಿರಾಳದಲ್ಲಿ ನಿರವಯವನೆಯ್ದಲರಿಯದೆ
ಮತ್ತೆಯೂ ಭೌತಿಕಸಂಬಂಧಿಯಾಗಿ ಇರುತಿರಲು
ಈ ತತ್ವದಾದಿ ತಾನೆಂತೆನಲು
ಆ ಪರಬ್ರಹ್ಮವಪ್ಪ-ನಿತ್ಯನಿರಾಳ ನಿಶ್ಶೂನ್ಯಲಿಂಗವೇ
ತನ್ನ ಲೀಲಾವಿಲಾಸದಿಂದ ತಾನೇ ಸುನಾದ-ಬಿಂದು-ಪ್ರಕಾಶ
ತೇಜೋಮೂರ್ತಿಯಾಗಿ ನಿಂದು
ಆ ಮಹಾಲಿಂಗವೆನಿಸಿತ್ತು
ಆ ಪಂಚಸಾದಾಖ್ಯವೇ ಪಂಚಲಿಂಗಪ್ರಕಾಶವೆನಿಸಿತ್ತು
ಆ ಪಂಚಲಿಂಗಪ್ರಕಾಶವೇ ಪಂಚಮುಖವೆನಿಸಿತ್ತು

ಆ ಪಂಚಮುಖದಿಂದವೇ ಪಂಚಾಕ್ಷರಿ ಉತ್ಪತ್ತಿ
ಆ ಪಂಚಾಕ್ಷರಿಯಿಂದವೇ ಪಂಚಕಲೆಗಳುತ್ಪತ್ತಿ
ಆ ಪಂಚಕಲೆಗಳಿಂದಲೇ ಪಂಚಶಕ್ತಿಗಳುತ್ಪತ್ತಿ
ಆ ಪಂಚಶಕ್ತಿಗಳಿಂದವೇ
ಜ್ಞಾನ-ಮನ-ಬುದ್ಧಿ-ಚಿತ್ತ-ಅಹಂಕಾರಗಳ ಜನನ
ಆ ಜ್ಞಾನ-ಮನ-ಬುದ್ಧಿ-ಅಹಂಕಾರಗಳಿಂದವೇ
ಪಂಚತನ್ಮಾತ್ರೆಗಳುತ್ಪತ್ತಿ
ಆ ಪಂಚತನ್ಮಾತ್ರೆಗಳಿಂದವೇ ಪಂಚಭೂತಂಗಳುತ್ಪತ್ತಿ
ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು
ಆ ಅಂಗಕ್ಕೆ ಜ್ಞಾನೇಂದ್ರಿಯಗಳು ಕರ್ಮೇಂದ್ರಿಯಗಳು
ಪ್ರತ್ಯಂಗವೆನಿಸಿತ್ತು
ಇಂತೀ ದೇಹಸಂಬಂಧಮಂ
ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ
ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು
ಎಲ್ಲಿ ಆಯಿತು ಅಲ್ಲೇ ಅಡಗಿಸಿ
ಆ ಕಾಯದ ಪೂರ್ವಾಶ್ರಯವನಳಿದು
ಮಹಾಘನಲಿಂಗವ ವೇಧಿಸಿ [ಕೊಟ್ಟು]
ಶಿವ ತಾನೆ ಗುರುವಾಗಿ ಬಂದು
ಆ ಗುರು ತಾನೆ ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿಯೆಂತೆಂದೆಡೆ
ಆತ್ಮಗೂಡಿ ಪಂಚಭೂತಂಗಳನೆ ಷಡಂಗವೆಂದೆನಿಸಿ
ಆ ಅಂಗಕ್ಕೆ ಕಲೆಗಳನೆ ಷಡ್ವಿಧಭಕ್ತಿಗಳೆಂದೆನಿಸಿ
ಆ ಶಕ್ತಿಗಳಿಗೆ ಷಡ್ವಿಧಭಕ್ತಿಯನಳವಡಿಸಿ
ಆ ಭಕ್ತಿಗಳಿಗೆ ಭಾವ-ಜ್ಞಾನ-ಮನ-ಬುದ್ಧಿ-ಚಿತ್ತ-ಅಹಂಕಾರಗಳನೆ
ಷಡ್ವಿಧ ಹಸ್ತಂಗಳೆನಿಸಿ
ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ
ಷಡ್ವಿಧ ಲಿಂಗಗಳೆಂದೆನಿಸಿ
ಆ ಲಿಂಗಂಗಳಿಗೆ ಷಡಕ್ಷರಿಯನೇ ಷಡ್ವಿಧ ಮಂತ್ರವೆಂದೆನಿಸಿ
ಆ ಮಂತ್ರಲಿಂಗಂಗಳಿಗೆ ಹೃದಯವೊಂದುಗೂಡಿ
ಆ ಪಂಚೇಂದ್ರಿಯಂಗಳನೆ ಷಡ್ವಿಧಮುಖಂಗಳೆಂದೆನಿಸಿ
ಆ ಮುಖಂಗಳಿಗೆ ತನ್ಮಾತ್ರೆಗಳನೆ ದ್ರವ್ಯಪದಾರ್ಥಂಗಳೆನಿಸಿ
ಆ ದ್ರವ್ಯಪದಾರ್ಥಂಗಳನು ಆಯಾಯಾ ಮುಖದ ಲಿಂಗಂಗಳಲ್ಲಿ
ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ
ಅಂಗಸ್ಥಲಂಗಳಡಗಿ ತ್ರಿವಿಧಲಿಂಗಸ್ಥಲಂಗಳುಳಿದು
ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ
ಗುರುವಿನಲ್ಲಿ ಶುದ್ಧ ಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ
ಜಂಗಮದಲ್ಲಿ ಪ್ರಸಿದ್ಧಪ್ರಸಾದ
ಇಂತೀ ತ್ರಿವಿಧಪ್ರಸಾದ ಏಕಾರ್ಥವಾಗಿ
ಮಹಾಘನ ಪರಿಪೂರ್ಣ ಪ್ರಸಾದವಳವಟ್ಟ ಶರಣನು
ಜ್ಞಾನಿ ಅಲ್ಲ, ಅಜ್ಞಾನಿ ಮುನ್ನವೇ ಅಲ್ಲ
ಶೂನ್ಯನಲ್ಲ, ನಿಶ್ಶೂನ್ಯನಲ್ಲ
ದ್ವೈತಿಯಲ್ಲ, ಅದ್ವೈತಿಯಲ್ಲ
ಇಂತೀ ಉಭಯಾತ್ಮಕ ತಾನೆಯಾಗಿ
ಇದು ಕಾರಣ-
ಅದರ ಆಗು-ಹೋಗು ಸಕೀಲಸಂಬಂಧವ
ಚೆನ್ನಮಲ್ಲಿಕಾರ್ಜುನ ನಿಮ್ಮ ಶರಣರೇಬಲ್ಲರು

೨೩೬.
ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ
ಏಕೆ?
ಆತನ ಧನಕ್ಕೆ ತಂದೆಯಾದನಲ್ಲದೆ
ಆತನ ಮನಕ್ಕೆ ತಂದೆಯಾದನೆ?
ಏಕೆ?
ಆತನ ಮನವನರಿಯನಾಗಿ
ಆತನ ಧನಕ್ಕೆ ತಂದೆಯಾದನು
ತಮ್ಮಲ್ಲಿರ್ದ ಭಕ್ತಿಯ ಮಾರಿಕೊಂಡುಂಬವರು
ನಿಮ್ಮ ನಿಜಭಕ್ತರಲ್ಲಯ್ಯ ಚೆನ್ನಮಲ್ಲಿಕಾರ್ಜುನ

೨೩೭.
ಅರ್ಥ ಸಂನ್ಯಾಸಿಯಾದಡೇನಯ್ಯಾ,
ಆವಂಗದಿಂದ ಬಂದಡೆಯೂ ಕೊಳ್ಳದಿರಬೇಕು
ರುಚಿ ಸನ್ಯಾಸಿಯಾದಡೇನಯ್ಯಾ
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು
ಸ್ತ್ರೀ-ಸನ್ಯಾಸಿಯಾದಡೇನಯ್ಯಾ
ಜಾಗ್ರತ್-ಸ್ವಪ್ನ-ಸುಷುಪ್ತಿಯಲ್ಲಿ ತಪ್ಪಿಲ್ಲದಿರಬೇಕು
ದಿಗಂಬರಿಯಾದಡೇನಯ್ಯಾ
ಮನ ಬತ್ತಲೆಯಿರಬೇಕು
ಇಂತೀ ಚತುರ್ವಿಧ ಹೊಲಬನರಿಯದೆ
ವೃಥಾ ಕೆಟ್ಟರು ಕಾಣಾ ಚೆನ್ನಮಲ್ಲಿಕಾರ್ಜುನಾ

೨೩೮.
ಸದ್ಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
ತಚ್ಛಿಷ್ಯನ ಮಸ್ತಕದ ಮೇಲೆ ತನ್ನ ಶ್ರೀಹಸ್ತವನಿರಿಸಿದಡೆ
ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯ
ಒಪ್ಪುವ ಶ್ರೀವಿಭೂತಿಯ ನೊಸಲಿಂಗೆ ಪಟ್ಟವ ಕಟ್ಟಿದೊಡೆ
ಮುಕ್ತಿರಾಜ್ಯದೊಡೆತನಕ್ಕೆ ಪಟ್ಟವ ಕಟ್ಟಿದಂತಾಯಿತ್ತಯ್ಯ
ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನವೆಂಬ
ಪಂಚಕಳಶದ ಅಭಿಷೇಕವ ಮಾಡಿಸಲು
ಶಿವನ ಕರುಣಾಮೃತದ ಸೋನೆ ಸುರಿದಂತಾಯಿತ್ತಯ್ಯ
ನೆರೆದ ಶಿವಗಣಂಗಳ ಮಧ್ಯದಲ್ಲಿ
ಮಹಾಲಿಂಗವನು ಕರತಳಾಮಳಕವಾಗಿ
ಶಿಷ್ಯನ ಕರಸ್ಥಲಕ್ಕೆ ಇತ್ತು ಪ್ರತಿಷ್ಠಿಸಿ
ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ
ಕಂಕಣವ ಕಟ್ಟಿದಲ್ಲಿ
ಕಾಯವೇ ಕೈಲಾಸವಾಯಿತ್ತು
ಪ್ರಾಣವೇ ಪಂಚಬ್ರಹ್ಮಮಯ ಲಿಂಗವಾಯಿತ್ತು
ಇಂತು ಮುಂದ ತೋರಿಸಿ ಹಿಂದೆ ಬಿಡಿಸಿದ
ಶ್ರೀಗುರುವಿನ ಸಾನ್ನಿಧ್ಯದಿಂದಾನು ಬದುಕಿದೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ

೨೩೯.
ಧನದ ಮೇಲೆ ಬಂದವರೆಲ್ಲ ಅನುಸಾರಿಗಳಲ್ಲದೆ
ಅನುವ ಮಾಡಬಂದವರಲ್ಲ
ಮನದ ಮೇಲೆ ಬಂದು ನಿಂದು ಜರಿದು ನುಡಿದು
ಪಥವ ತೋರಬಲ್ಲಡಾತನೇ ಸಂಬಂಧಿ
ಹೀಂಗಲ್ಲದೆ, ಅವರಿಚ್ಛೆಯ ನುಡಿದು ತನ್ನುದರವ ಹೊರೆವನಕ
ಬಚ್ಚಣಿಗಳ ಮೆಚ್ಚುವನೆ ಚೆನ್ನಮಲ್ಲಿಕಾರ್ಜುನ

೨೪೦.
ಸೆಜ್ಜೆ ಉಪ್ಪರಿಸಿ, ಶಿವಲಿಂಗ ಕರಸ್ಥಲಕ್ಕೆ ಬರೆ,
ಪ್ರಜ್ವಲಿಸಿ ತೊಳಗಿ ಬೆಳಗುತ್ತಿಹ ಕಾಂತಿಯಲ್ಲಿ
ಜಜ್ಜರಿಸಿ ತನು-ಮನ, ದೃಷ್ಟಿನಟ್ಟು
ನಟ್ಟದೃಷ್ಟಿಯೊಳು ಒಜ್ಜರಿಸಿ ಹರಿವ
ಶಿವಸುಖರಸದೊಳೋಲಾಡುತೆಂದಿಪ್ಪೆನೊ
ನಿಮ್ಮ ಸಜ್ಜನಿಕೆ-ಸದ್ಭಕ್ತಿಯ ತಲೆಯೊತ್ತಿ ಕೂಡಿ ಆಡಿ ಲಜ್ಜೆಗೆಟ್ಟು
ನಿಮ್ಮನೆಂದಿಗೆ ನೆರೆವೆ ಚೆನ್ನಮಲ್ಲಿಕಾರ್ಜುನ

Comments

Popular posts from this blog

ಬಸವಣ್ಣನ ವಚನಗಳು - 331 ರಿಂದ 340 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೩೧. ವ್ಯಾಸ ಬೋಯಿತಿಯ ಮಗ. ಮಾರ್ಕಂಡೇಯ ಮಾತಂಗಿಯ ಮಗ. ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿ ಭೋ! ಕುಲದಿಂದ ಮುನ್ನೇನಾದಿರಿ ಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ. ದೂರ್ವಾಸ ಮಚ್ಚಿಗ. ಕಶ್ಯಪ ಕಮ್ಮಾರ. ಕೌಂಡಿನ್ಯನೆಂಬ ಋಷಿ ಮೂರುಲೋಕವರಿಯೆ ನಾವಿದ ಕಾಣಿ ಭೋ! ನಮ್ಮ ಕೂಡಲಸಂಗನ ವಚನವಿಂತೆಂದುದು- "ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ! ೩೩೨. ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ. ಜಲಬಿಂದುವಿನ ವ್ಯವಹಾರವೊಂದೇ. ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ. ಏನನೋದಿ ಏನ ಕೇಳಿ ಏನು ಫಲ ?! ಕುಲಜನೆಂಬುದಕ್ಕೆ ಆವುದು ದೃಷ್ಟ ? "ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸ್ಸಮಸ್ತಸ್ಮಾತ್ ವರ್ಣಾನಾಂ ಕಿಂ ಪ್ರಯೋಜನಂ ?" || ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ? ಇದು ಕಾರಣ, ಕೂಡಲಸಂಗಮದೇವ, ಲಿಂಗಸ್ಥಲವನರಿದವನೇ ಕುಲಜನು! ೩೩೩. ಕೊಲುವವನೇ ಮಾದಿಗ! ಹೊಲಸ ತಿಂಬವನೇ ಹೊಲೆಯ! ಕುಲವೇನೋ ? ಆವದಿರ ಕುಲವೇನೋ ? ಸಕಲ ಜೀವಾ

ಅಕ್ಕನ ವಚನಗಳು - 271 ರಿಂದ 280 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೨೭೧. ತನು ಶುದ್ಧ, ಮನ ಶುದ್ಧ, ಭಾವಶುದ್ಧವಾದವರನೆನಗೊಮ್ಮೆ ತೋರಾ! ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ, ನಿತ್ಯಶುದ್ಧರಾದವರನೆನಗೊಮ್ಮೆ ತೋರಾ! ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ ೨೭೨. ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ ೨೭೩. ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಸತ್ಯಶರಣರನುಭಾವವ! ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೇ! ೨೭೪. ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ! ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ! ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ! ಎಡರುವ ಹರಳೆಲ್ಲ ಚಿಂತಾಮಣಿ! ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ ನೋಡುತ ಬಂದು, ಕದಳಿಯ ಬನವ ಕಂಡೆ ನಾನು ೨೭೫. ತನುವೆಲ್ಲ ಜರಿದ

ಬಸವಣ್ಣನ ವಚನಗಳು - 371 ರಿಂದ 380 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೭೧. ಜಂಬೂದ್ವೀಪನವಖಂಡಪೃಥ್ವಿಯೊಳಗೆ ಕೇಳಿರಯ್ಯ ಎರಡಾಳಿನ ಭಾಷೆಯ! ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು. ಸತ್ಯವೆಂಬ ಕೂರಲಗನೆ ಕಳೆದುಕೊಂಡು ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವ. ೩೭೨. ಶಿವಭಕ್ತನಾಗಿ ತನ್ನ ಹಿಡಿದಹೆನೆಂದು ಹೋದರೆ ನುಗ್ಗುಮಾಡುವ, ನುಸಿಯ ಮಾಡುವ! ಮಣ್ಣುಮಾಡುವ, ಮಸಿಯ ಮಾಡುವ! ಕೂಡಲಸಂಗಮದೇವರ ನೆರೆನಂಬಿದನಾದರೆ ಕಡೆಗೆ ತನ್ನಂತೆ ಮಾಡುವ. ೩೭೩. ಅರೆವನಯ್ಯ ಸಣ್ಣವಹನ್ನಕ ಒರೆವನಯ್ಯ ಬಣ್ಣಗಾಬನ್ನಕ ಅರೆದರೆ ಸುಣ್ಣವಾಗಿ, ಒರೆದರೆ ಬಣ್ಣವಾದರೆ ಕೂಡಲಸಂಗಮದೇವನೊಲಿದು ಸಲಹುವನು. ೩೭೪. ಎಡದ ಪಾದದಲೊದ್ದರೆ ಬಲದ ಪಾದವ ಹಿಡಿವೆ! ಬಲದ ಪಾದದಲೊದ್ದರೆ ಎಡದ ಪಾದವ ಹಿಡಿವೆ! ತ್ರಾಹಿ, ತ್ರಾಹಿ! ತಪ್ಪೆನ್ನದು, ಕ್ಷಮೆ ನಿನ್ನದು! ಕೂಡಲಸಂಗಮದೇವ ನಿಮ್ಮ ಕರುಣದ ಕಂದ ನಾನು! ೩೭೫. ಅಂಜಿದರಾಗದು, ಅಳುಕಿದರಾಗದು! ವಜ್ರಪಂಜರದೊಳಗಿದ್ದರಾಗದು! ತಪ್ಪದೆಲವೋ ಲಲಾಟಲಿಖಿತ! ಕಕ್ಕುಲತೆಬಟ್ಟರಾಗದು ನೋಡಾ! ಧೃತಿಗೆಟ್ಟು ಮನ ಧಾತುಗೆಟ್ಟರೆ ಅಪ್ಪುದು ತಪ್ಪದು ಕೂಡಲಸಂಗಮದೇವ. ೩೭೬. ಆಯುಷ್ಯ ತೀರಿದಲ್ಲದೆ ಮರಣವಿಲ್ಲ. ಭಾಷೆ ತೀರಿದಲ