Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.
೨೪೧.
ತನು ಶುದ್ಧವಾಯಿತ್ತು ಶಿವಭಕ್ತರೊಕ್ಕುದ ಕಂಡೆನ್ನ
ಮನ ಶುದ್ಧವಾಯಿತ್ತು ಅಸಂಖ್ಯಾತರ ನೆನೆದೆನ್ನ
ಕಂಗಳು ಶುದ್ಧವಾಯಿತ್ತು ಸಕಲಗಣಂಗಳ ನೋಡಿಯೆನ್ನ
ಶ್ರೋತ್ರ ಶುದ್ಧವಾಯಿತ್ತು
ಅವರ ಕೀರ್ತಿಯ ಕೇಳಿಯೆನ್ನ
ಘ್ರಾಣ ಶುದ್ಧವಾಯಿತ್ತು
ನಿಮ್ಮ ಪಾದಾರ್ಪಿತ ಪರಿಮಳವ ವಾಸಿಸಿಯೆನ್ನ
ಜಿಹ್ವೆ ಶುದ್ಧವಾಯಿತ್ತು ನಿಮ್ಮ ಶರಣರೊಕ್ಕುದ ಕೊಂಡೆನಾಗಿ
ಭಾವನೆಯೆನಗಿದು ಜೀವನ ಕೇಳಾ ಲಿಂಗ ತಂದೆ
ನೆಟ್ಟನೆ ನಿಮ್ಮ ಮನ ಮುಟ್ಟಿ ಪೂಜಿಸಿ
ಭವಗೆಟ್ಟೆ ನಾನು ಚೆನ್ನಮಲ್ಲಿಕಾರ್ಜುನ
೨೪೨.
ಕುಲಮದವೆಂಬುದಿಲ್ಲ ಅಯೋನಿಸಂಭವನಾಗಿ
ಛಲಮದವೆಂಬುದಿಲ್ಲ ಪ್ರತಿದೂರನಾಗಿ
ಧನಮದವೆಂಬುದಿಲ್ಲ ತ್ರಿಕರಣಶುದ್ಧನಾಗಿ
ವಿದ್ಯಾಮದವೆಂಬುದಿಲ್ಲ ಅಸಾಧ್ಯವ ಸಾಧಿಸಿದೆನಾಗಿ
ಮತ್ತಾವ ಮದವಿಲ್ಲ ನೀನವಗವಿಸಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣ ಅಕಾಯಚರಿತ್ರನಾಗಿ
೨೪೩.
ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿಯ ಅಳೆದು ತೀರದ ಮುನ್ನ
ಶಿವನ ನೆನೆಯಿರೇ! ಶಿವನ ನೆನೆಯಿರೇ!
ಈ ಜನ್ಮ ಬಳಿಕಿಲ್ಲ
ಚೆನ್ನಮಲ್ಲಿಕಾರ್ಜುನದೇವರ ದೇವ
ಪಂಚಮಹಾಪಾತಕರೆಲ್ಲ ಮುಕ್ತಿವಡೆದರು
೨೪೪.
ಕರುವಿನ ರೂಹು ಅರಗಿಳಿಯನೋದಿಸುವಂತೆ
ಓದಿಸುವುದಕೆ ಜೀವವಿಲ್ಲ
ಕೇಳುವುದಕ್ಕೆ ಜ್ಞಾನವಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮನರಿಯದವನ ಭಕ್ತಿ
ಕರುವಿನ ರೂಹು ಅರಗಿಳಿಯ ನೋದಿಸುವಂತೆ
೨೪೫.
ಪ್ರಥಮದಲಾದ ಮೋಹ ಸಾತ್ವಿಕವಾದಡೆ ಕಿತವೇಕಯ್ಯ?
ಹೆರರನೊಲ್ಲದೆ ಬೇಟಕ್ಕೆ ಕಿತವೇಕಯ್ಯ?
ಚೆನ್ನಮಲ್ಲಿಕಾರ್ಜುನದೇವರ ದೇವನೊಂದಿಗೆ
ಬಿಡದ ನೇಹಕ್ಕೆ ಕಿತವೇಕೆ?
೨೪೬.
ಮುತ್ತೂ ನೀರಲಾಯಿತ್ತು
ವಾರಿಕಲ್ಲೂ ನೀರಲಾಯಿತ್ತು
ಉಪ್ಪೂ ನೀರಲಾಯಿತ್ತು
ಉಪ್ಪು ಕರಗಿತ್ತು, ವಾರಿಕಲ್ಲೂ ಕರಗಿತ್ತು
ಮತ್ತು ಕರಗಿದುದನಾರೂ ಕಂಡವರಿಲ್ಲ
ಈ ಸಂಸಾರಿಮಾನವರು ಲಿಂಗವ ಮುಟ್ಟಿ
ಭವಭಾರಿಗಳಾದರು
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ
೨೪೭.
ಬೋಳೆಯನೆಂದು ನಂಬಬೇಡ
ಡಾಳಕನವನು, ಜಗದ ಬಿನ್ನಾಣಿ
ಬಾಣ-ಮಯೂರ-ಕಾಳಿದಾಸ-ಓಹಿಲನುದ್ಭಟ
ಮಲುಹಣನವರಿಗಿತ್ತ ಪರಿ ಬೇರೆ
ಮುಕ್ತಿ-ಭುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬನು
ಚೆನ್ನಮಲ್ಲಿಕಾರ್ಜುನನು
೨೪೮.
ಜಾತಿಶೈವ-ಅಜಾತಿಶೈವವೆಂದೆರಡು
ಪ್ರಕಾರವಾಗಿಹುದಯ್ಯ
ಜಾತಿಶೈವರೆಂಬವರು ಶಿವಂಗೆ ಭೋಗಸ್ತ್ರೀಯರಯ್ಯ
ಅಜಾತಿಶೈವರೆಂಬವರು ಶಿವಂಗೆ ಕುಲಸ್ತ್ರೀಯರಯ್ಯ
ಜಾತಿಶೈವರೆಂಬವರು ಸರ್ವಭೋಗಂಗಳ ಬಯಸಿ ಮಾಡುವರಾಗಿ
ಯದ್ದ್ವಾರೇ ಮತ್ತ ಮಾತಂಗಾಃ ವಾಯುವೇಗಾಸ್ತುರಂಗಮಾಃ
ಪೂರ್ಣೇಂದುವದನಾ ನಾರ್ಯಃ ಶಿವಪೂಜಾವಿಧೇ ಫಲಂ
ಎಂದುದಾಗಿ-ಇದು ಜಾತಿಶೈವರಿಗೆ ಕೊಟ್ಟ ಭೋಗಂಗಳಯ್ಯ
ಅಜಾತಿಶೈವರು ಗುರುಲಿಂಗಕ್ಕೆ ತನುಮನಧನವ ನಿವೇದಿಸಿ
ಸರ್ವಸೂತಕರಹಿತವಾಗಿಹರಯ್ಯ
ಅಹಂ ಮಾಹೇಶ್ವರಪ್ರಾಣೋ ಮಾಹೇಶ್ವರೋ ಮಮ ಪ್ರಾಣಃ
ತಥೈವೈಕ್ಯಂ ತು ನಿಷ್ಕ್ರಿಯಂ ಅಚ್ಚಲಿಂಗೈಕ್ಯಮೇವ ಚ
ಇದು ಕಾರಣ ಸರ್ವೇಶ್ವರ ಚೆನ್ನಮಲ್ಲಿಕಾರ್ಜುನಯ್ಯನು
ಭಕ್ತಿ ಕಾಯವೆಂಬೈಕ್ಯಪದವನು
ಅಜಾತಿಶೈವರಿಗೆ ಕೊಡುವನಯ್ಯ
೨೪೯.
ಸತ್ತ ಹೆಣ ಕೂಗಿದುದುಂಟು
ಬೈಚಿಟ್ಟ ಬಯಕೆ ಕರೆದುದುಂಟು
ಹೆಪ್ಪಿಟ್ಟ ಹಾಲು ಗಟ್ಟಿಗೊಂಡು ಸಿಹಿಯಾದುದುಂಟು
ಇದು ನಿಶ್ಚಯಿಸಿ ನೋಡಿ ಚೆನ್ನಮಲ್ಲಿಕಾರ್ಜುನದೇವನಲ್ಲಿ
೨೫೦.
ಮರೆದೊರಗಿ ಕನಸ ಕಂಡೇಳುವಲ್ಲಿ
ಸತ್ತ ಹೆಣ ಎದ್ದಿತ್ತು
ತನ್ನ ಋಣನಿಧಾನ ಎದ್ದು ಕರೆಯಿತ್ತು
ಹೆಪ್ಪಿಟ್ಟ ಹಾಲು ಘಟ್ಟಿ ತುಪ್ಪವಾಗಿ ಸಿಹಿಯಾಯಿತ್ತು
ಇದಕ್ಕೆ ತಪ್ಪ ಸಾಧಿಸಲೇಕೆ?
ಚೆನ್ನಮಲ್ಲಿಕಾರ್ಜುನದೇವನ ಅಣ್ಣಗಳಿರಾ
೨೫೧.
ಎನಗೇಕಯ್ಯ? ಸಾವ ಪ್ರಪಂಚಿನ ಪುತ್ಥಳಿ
ಮಾಯಿಕದ ಮಲಭಾಂಡ ಆತುರದ ಭವನಿಳಯ
ಜಲಕುಂಭದ ಒಡೆಯಲ್ಲಿ ಒಸರುವ ನೆಲೆಮನೆ ಎನಗೇಕಯ್ಯ?
ಬೆರಳು ತಾಳ ಹಣ್ಣ ಹಿಸಿದಡೆ ಮೆಲಲುಂಟೆ
ಎನ್ನ ತಪ್ಪನೊಪ್ಪಗುಳ್ಳಾ ಚೆನ್ನಮಲ್ಲಿಕಾರ್ಜುನದೇವ
Comments
Post a Comment