Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.
೨೬೧.
ಅಂಗದೊಳಗೆ ಅಂಗವಾಗಿ ಅಂಗಲಿಂಗೈಕ್ಯವ ಮಾಡಿದೆ
ಮನದೊಳಗೆ ಮನವಾಗಿ ಮನ ಲಿಂಗೈಕ್ಯವ ಮಾಡಿದೆ
ಭಾವದೊಳಗೆ ಭಾವವಾಗಿ ಭಾವಲಿಂಗೈಕ್ಯವ ಮಾಡಿದೆ
ಅರಿವಿನೊಳಗೆ ಅರಿವಾಗಿ ಜ್ಞಾನಲಿಂಗೈಕ್ಯವ ಮಾಡಿದೆ
ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ
ನಿವೃತ್ತಿಲಿಂಗೈಕ್ಯವ ಮಾಡಿದೆ
ನಾನೆಂಬುದ ನಿಲಿಸಿ ನೀನೆಂಬುದ ಕೆಡಿಸಿ
ಉಭಯಲಿಂಗೈಕ್ಯವ ಮಾಡಿದೆ
ಚೆನ್ನಮಲ್ಲಿಕಾರ್ಜುನನೊಳಗೆ ನಾನಳಿದೆನಾಗಿ
ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು [=ಉಳಿಯಿತ್ತು?]
ಕಾಣಾ ಸಂಗನಬಸವಣ್ಣ
೨೬೨.
ಎನ್ನ ಭಕ್ತಿ ನಿಮ್ಮ ಧರ್ಮ
ಎನ್ನ ಜ್ಞಾನ ಪ್ರಭುದೇವರ ಧರ್ಮ
ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ
ಈ ಮೂವರೂ ಒಂದೊಂದ ಕೊಟ್ಟರೆನಗೆ-
ಮೂರು ಭಾವವಾಯಿತ್ತು
ಈ ಮೂರನು ನಿನ್ನಲ್ಲಿ ಸಮರ್ಪಿಸಿದ ಬಳಿಕ
ಎನಗಾವ ಜಂಜಡವಿಲ್ಲ
ಚೆನ್ನಮಲ್ಲಿಕಾರ್ಜುನದೇವರ ನೆನಹಿನಲ್ಲಿ
ನಿನ್ನ ಕರುಣದ ಶಿಶು ನಾನು ಕಾಣಾ ಸಂಗನಬಸವಣ್ಣ
೨೬೩.
ಲಿಂಗ ಸುಖಸಂಗದಲ್ಲಿ ಮನ ವೇದ್ಯವಾಯಿತ್ತು
ಇನ್ನೆಲ್ಲಿಯದಯ್ಯ ಎನಗೆ ನಿಮ್ಮಲ್ಲಿ ನಿರವಯವು?
ಇನ್ನೆಲ್ಲಿಯದಯ್ಯ ನಿಮ್ಮಲ್ಲಿ ಕೂಡುವುದು?
ಪರಮಸುಖಪರಿಣಾಮ ಮನ ಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ
೨೬೪.
ಮೂಲದ್ವಾರದ ಬೇರ ಮೆಟ್ಟಿ ಭೂಮಂಡಲವನೇರಿದೆ
ಆಚಾರದ ಬೇರ ಹಿಡಿದು ಐಕ್ಯದ ತುದಿಯನೇರಿದೆ
ವೈರಾಗ್ಯದ ಸೋಪಾನದಿಂದ ಶ್ರೀಗಿರಿಯನೇರಿದೆ
ಕೈವಿಡಿದು ತೆಗೆದುಕೊಳ್ಳಾ ಚೆನ್ನಮಲ್ಲಿಕಾರ್ಜುನ
೨೬೫.
ಬಯಲು ಲಿಂಗವೆಂಬೆನೆ? ಬಗಿದು ನಡೆದಲ್ಲಿ ಹೋಯಿತ್ತು
ಬೆಟ್ಟ ಲಿಂಗವೆಂಬೆನೆ? ಮೆಟ್ಟಿ ನಿಂದಲ್ಲಿ ಹೋಯಿತ್ತು
ತರುಮರಾದಿಗಳು ಲಿಂಗವೆಂಬೆನೆ! ತರಿದಲ್ಲಿ ಹೋಯಿತ್ತು
ಲಿಂಗ-ಜಂಗಮದ ಪಾದವೆ ಗತಿಯೆಂದು ನಂಬಿದ ಸಂಗನ ಬಸವಣ್ಣನ
ಮಾತು ಕೇಳದೆ ಕೆಟ್ಟೆನಯ್ಯ, ಚೆನ್ನಮಲ್ಲಿಕಾರ್ಜುನ
೨೬೬.
ನೋಡಿಹೆನೆಂದಡೆ ದೃಷ್ಟಿ ಮರೆಯಾಯಿತ್ತು
ಕೂಡಿಹೆನೆಂದೊಡೆ ಭಾವ ಮರೆಯಾಯಿತ್ತು
ಏನೆಂಬೆನೆಂತೆಂಬೆನಯ್ಯ?
ಅರಿದಿ[ದ=?]ಹೆನೆಂದೊಡೆ ಮರಹು ಮರೆಯಾಯಿತ್ತು
ನಿನ್ನ ಮಾಯೆಯನತಿಗಳೆವೊಡೆ ಎನ್ನಳವೇ
ಕಾಯಯ್ಯ ಚೆನ್ನಮಲ್ಲಿಕಾರ್ಜುನ
೨೬೭.
ಭಾವ ಬೀಸರವಾಯಿತ್ತು
ಮನ ಮೃತ್ಯುವನಪ್ಪಿತ್ತು, ಆನೇವೆನಯ್ಯ?
ಅಳಿತನದ ಮನ ತಲೆಕೆಳಗಾಯಿತ್ತು, ಆನೇವೆನಯ್ಯ?
ಬಿಚ್ಚಿ ಬೇರಾಗದ ಭಾವವಾಗಿ ಬೆರೆದೊಪ್ಪಚ್ಚಿ
ನಿನ್ನ ನಿತ್ಯಸುಖದೊಳಗಾನೆಂದಿಪ್ಪೆನಯ್ಯ
ಚೆನ್ನಮಲ್ಲಿಕಾರ್ಜುನ
೨೬೮.
ಹಗಲೆನ್ನೆ, ಇರುಳೆನ್ನೆ!
ಉದಯವೆನ್ನೆ, ಅಸ್ತಮಾನವೆನ್ನೆ! ಹಿಂದೆನ್ನೆ, ಮುಂದೆನ್ನೆ!
ನೀನಲ್ಲದೆ ಪರತೊಂದಹುದೆನ್ನೆ! ಮನ ಘನವಾದುದಿಲ್ಲಯ್ಯ!
ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯ!
ನಿಮ್ಮ ಶರಣ ಬಸವಣ್ಣನ ತೇಜದೊಳಗಲ್ಲದೆ
ಆನೆನ್ನ [=ಆಂ ನಿನ್ನ?]ನೆಂತು ಕಾಂಬೆನು ಹೇಳಾ
ಚೆನ್ನಮಲ್ಲಿಕಾರ್ಜುನ
೨೬೯.
ಕಾಯದ ಕಾರ್ಪಣ್ಯವರತಿತ್ತು
ಕರಣಂಗಳ ಕಳವಳವಳಿದಿತ್ತು
ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು
ಇನ್ನೇವೆನಿನ್ನೇವೆನಯ್ಯ?
ನಿಮ್ಮ ಶರಣ ಬಸವಣ್ಣನ ಶ್ರೀಪಾದವ ಕಂಡಲ್ಲದೆ
ಬಯಕೆ ಬಯಲಾಗದು!
ಇನ್ನೇವೆನಿನ್ನೇವೆನಯ್ಯ ಚೆನ್ನಮಲ್ಲಿಕಾರ್ಜುನ
೨೭೦.
ಅಯ್ಯ ಕತ್ತಲೆಯ ಕಳೆದುಳಿದ
ಸತ್ಯ ಶರಣರ ಪರಿಯನೇನೆಂಬೆನಯ್ಯ!
ಘನವನೊಳಕೊಂಡ ಮನದ ಮಹಾನುಭಾವಿಗಳ
ಬಳಿವಿಡಿದು ಬದುಕುವೆನಯ್ಯ
ಅಯ್ಯ, ನಿನ್ನಲ್ಲಿ ಬೇರೊಂದರಿಯದ ಲಿಂಗಸುಖಿಗಳ ಸಂಗದಲ್ಲಿ
ದಿನವ ಕಳೆಯಿಸಯ್ಯ, ಚೆನ್ನಮಲ್ಲಿಕಾರ್ಜುನ
Comments
Post a Comment