Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.
೨೮೧.
ಕಲ್ಲಹೊತ್ತು ಕಡಲೊಳಗೆ ಮುಳುಗಿದೊಡೆ
ಎಡರಿಂಗೆ ಕಡೆಯುಂಟೇ ಅವ್ವ?
ಉಂಡು ಹಸಿವಾಯಿತ್ತೆಂದೊಡೆ ಭಂಗವೆಂಬೆ
ಕಂಡ ಕಂಡ ಠಾವಿನಲ್ಲಿ ಮನ ಬೆಂದೊಡೆ
ಗಂಡ ಮಲ್ಲಿಕಾರ್ಜುನಯ್ಯನೆಂತೊಲಿವೆನಯ್ಯ
೨೮೨.
ಉಡುವೆ ನಾನು ಲಿಂಗಕ್ಕೆಂದು
ತೊಡುವೆ ನಾನು ಲಿಂಗಕ್ಕೆಂದು
ಮಾಡುವೆ ನಾನು ಲಿಂಗಕ್ಕೆಂದು
ನೋಡುವೆ ನಾನು ಲಿಂಗಕ್ಕೆಂದು
ಎನ್ನಂತರಂಗ ಬಹಿರಂಗಗಳು
ಲಿಂಗಕ್ಕಾಗಿ ಮಾಡಿಯೂ ಮಾಡದಂತಿಪ್ಪೆ ನೋಡಾ!
ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ
ಹತ್ತರೊಳಗೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವ?
೨೮೩.
ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗಾನೊಲಿದೆನವ್ವ
ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆ
ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ
ಇದುಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆ
ಈ ಸಾವ ಕೆಡುವ ಗಂಡರನೊಯ್ದು [ಒಲೆಯೊಳಗಿಕ್ಕು ತಾಯೆ]
೨೮೪.
ಅಯ್ಯ, ಪರಾತ್ಪರ ಸತ್ಯಸದಾಚಾರ ಗುರುಲಿಂಗ-
ಜಂಗಮದ ಶ್ರೀಚರಣವನ್ನು
ಹಿಂದೆ ಹೇಳದ ಅಚ್ಚಪ್ರಸಾದಿಯೋಪಾದಿಯಲ್ಲಿ
ನಿರ್ವಂಚಕತ್ವದಿಂದ
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಸಮರ್ಪಿಸಿ
ಒಪ್ಪೊತ್ತು ಅಷ್ಟವಿಧಾರ್ಚನೆಯ ಷೋಡಶೋಪಚಾರದಿಂದ
ಪಾದಾರ್ಚನೆಯ ಮಾಡಿ
ಪಾದೋದಕ ಪ್ರಸಾದವನ್ನು ತನ್ನ ಸರ್ವಾಂಗದಲ್ಲಿ ನೆಲೆಸಿರ್ಪ
ಇಷ್ಟ ಮಹಾಲಿಂಗದೇವನ ತ್ರಿವಿಧ ಸ್ಥಾನದಲ್ಲಿ
ಬಸವಣ್ಣ-ಚೆನ್ನಬಸವಣ್ಣ-ಅಲ್ಲಮ[+ಹಾ?]ಪ್ರಭು
ಎಂಬ ತ್ರಿವಿಧನಾಮಸ್ವರೂಪವಾದ
ಷೋಡಶಾಕ್ಷರಂಗಳೇ ಷೋಡಶವರ್ಣವಾಗಿ
ನೆಲಸಿರ್ಪರು ನೋಡಾ!
ಇಂತು ಷೋಡಶಕಲಾಸ್ವರೂಪವಾದ ಚಿದ್ರನ ಮಹಾಲಿಂಗದೇವನ
ನಿರಂಜನ ಜಂಗಮದೋಪಾದಿಯಲ್ಲಿ
ಸುಗುಣ-ನಿರ್ಗುಣ ಪೂಜೆಗಳ ಮಾಡಿ
ಜಂಗಮಚರಣ ಸೋಂಕಿನಿಂ ಬಂದ
ಗುರುಪಾದೋದಕವನಾದರೂ ಸರಿಯೆ
ಒಂದು ಭಾಜನದಲ್ಲಿ ಸೂಕ್ಷ್ಮವಾಗಿ ರಚಿಸಿ
ಆ ಉದಕದೊಳಗೆ ಹಸ್ತೋದಕ ಮಂತ್ರೋದಕವ ಮಾಡಿ
ಆಮೇಲೆ ಅನಾದಿಪ್ರಣಮವ ಪ್ರಸಾದ ಪ್ರಣಮದೊಳಗೆ
ಅಖಂಡ ಮಹಾಜ್ಯೋತಿಪ್ರಣಮವ ಲಿಖಿತವ ಮಾಡಿ
ಶ್ರದ್ಧಾದಿಯಾದ ಪೂರ್ಣಭಕ್ತಿಯಿಂದ
ಮಹಾಚಿದ್ರನತೀರ್ಥವೆಂದು ಭಾವಿಸಿ
ಪಂಚಾಕ್ಷರ ಷಡಕ್ಷರ ಮಂತ್ರಧ್ಯಾನದಿಂದ
ಆನಿಮಿಷ ದೃಷ್ಟಿಯಿಂದ ನಿರೀಕ್ಷಿಸಿ
ಮೂರು ವೇಳೆ ಪ್ರದಕ್ಷಿಣೆಯ ಮಾಡಿ
ಆ ಚಿದ್ರನತೀರ್ಥವನ್ನು
ದ್ವಾದಶದಳಕಮಲದಲ್ಲಿ ನೆಲೆಸಿರುವ ಇಷ್ಟಮಹಾಲಿಂಗಜಂಗಮಕ್ಕೆ
ಅಷ್ಟವಿಧ ಮಂತ್ರ ಸಕೀಲಂಗಳಿಂದ
ಆಚಾರಾದಿ ಶೂನ್ಯಾಂತವಾದ ಅಷ್ಟವಿಧಲಿಂಗಧ್ಯಾನದಿಂದ
ಅಷ್ಟವಿಧ ಬಂಧಂಗಳಂ ಸಮರ್ಪಿಸಿದಲ್ಲಿಗೆ
ಅಷ್ಟವಿಧೋದಕವಾಗುವುದಯ್ಯ
ಆ ಇಷ್ಟ ಮಹಾಲಿಂಗ ಜಂಗಮವೇ
ಅಷ್ಟಾದಶ ಸ್ಮರಣೆಯಿಂದ ಮುಗಿದಲ್ಲಿಗೆ
ನವಮೋದಕವಾಗುವುದಯ್ಯ
ಉಳಿದುದಕವು ತ್ರಿವಿಧೋದಕವೆನಿಸುವುದಯ್ಯ
ಹೀಗೆ ಮಹಾಜ್ಞಾನ ಲಿಂಗಜಂಗಮಸ್ವರೂಪವಾದ
ತೀರ್ಥವ ಮುಗಿದಮೇಲೆ
ತಟ್ಟೆ-ಬಟ್ಟಲಲ್ಲಿ ಎಡೆಮಾಡಬೇಕಾದರೆ
ಗೃಹದಲ್ಲಿರ್ದ ಕ್ರಿಯಾಶಕ್ತಿಯರಿಗೆ ಧಾರಣವಿದ್ದರೆ
ತಾವು ಸಲಿಸಿದ ಪಾದೋದಕಪ್ರಸಾದವ ಕೊಡುವುದಯ್ಯ
ಸಹಜಲಿಂಗಭಕ್ತರಾದರೆ ಮುಖಮಜ್ಜನವ ಮಾಡಿಸಿ
ತಾವು ಧರಿಸುವ ವಿಭೂತಿಧಾರಣವ ಮಾಡಿಸಿ
ಶಿವಶಿವಾ ಹರಹರಾ ಬಸವಲಿಂಗ ಎಂದು ಬೋಧಿಸಿ
ಎಡೆಮಾಡಿಸಿಕೊಂಬುದಯ್ಯ
ಆಮೇಲೆ-ತಾನು ಸ್ಥೂಲ[=ಸ್ವಸ್ಥಲ?]ವಾದೊಡೆ ಸಂಬಂಧವಿಟ್ಟು
ಪರಸ್ಥಲವಾದೊಡೆ ಚಿದ್ರನ ಇಷ್ಟಮಹಾಲಿಂಗ-ಜಂಗಮನ
ಕರಸ್ಥಲದಲ್ಲಿ ಮೂರ್ತವ ಮಾಡಿಸಿಕೊಂಡು
ದಕ್ಷಿಣಹಸ್ತದಲ್ಲಿ ಗುರು-ಲಿಂಗ-ಜಂಗಮಸೂತ್ರವಿಡಿದು
ಬಂದ ಕ್ರಿಯಾಭಸಿತವ ಲೇಪಿಸಿ
ಮೂಲಪ್ರಮಾಣವ ಪ್ರಸಾದಪ್ರಣವದೊಳಗೆ
ಗೋಳಕಪ್ರಣವ-ಅಖಂಡಗೋಳಕಪ್ರಣವ-
ಜ್ಯೋತಿಪ್ರಣವ ಧ್ಯಾನದಿಂದ
ದ್ವಾದಶಮಣಿಯ ಧ್ಯಾನಿಸಿ
ಪ್ರದಕ್ಷಿಣವ ಮಾಡಿ
ಮೂಲಮೂರ್ತಿ ಲಿಂಗಜಂಗಮದ ಮಸ್ತಕದ ಮೇಲೆ ಸ್ಪರ್ಶನವ ಮಾಡಿ
ಬಟ್ಟಲಿಗೆ ಮೂರು ವೇಳೆ ಸ್ಪರ್ಶನವ ಮಾಡಿ
ಪದಾರ್ಥದ ಪೂರ್ವಾಶ್ರಯವ ಕಳೆದು
ಶುದ್ಧಪ್ರಸಾದವೆಂದು ಭಾವಿಸಿ
ಇಷ್ಟಮಹಾಲಿಂಗ-ಜಂಗಮಕ್ಕೆ
ಅಷ್ಟಾದಶಸ್ಮರಣೆಯಿಂದ ಮೂರು ವೇಳೆ ರೂಪನರ್ಪಿಸಿ
ಎರಡು ವೇಳೆ ರೂಪವ ತೋರಿ
ಸುರುಚಿ ಪ್ರಾಣಲಿಂಗ ಮಂತ್ರಜಿಹ್ವೆಯಲ್ಲಿಟ್ಟು
ಆರನೆಯ ವೇಳೆ ಭೋಜನವ
ಇಷ್ಟಮಹಾಲಿಂಗ ಮಂತ್ರಧ್ಯಾನದಿಂದ ಸಮರ್ಪಿಸಿ
ಷಡ್ವಿಧಲಿಂಗಲೋಲುಪ್ತಿಯಿಂದ ಆಚರಿಸಿದಾತನೇ
ಗುರುಭಕ್ತನಾದ ನಿಚ್ಚಪ್ರಸಾದಿ ಎಂಬೆ
ಚೆನ್ನಮಲ್ಲಿಕಾರ್ಜುನ
೨೮೫.
ಒಲ್ಲೆ ಗಂಡನ ಕೂಟ ಒಗೆತನವ
ಅಕ್ಕಟ ಗಂಡನ ಮನೆಯ ಬಿರಿಸಯ್ಯಯ್ಯೋ! ||ಪಲ್ಲವ||
ಒಡಕು ಗಂಗಳದಲ್ಲಿ ನೀರಂಬಲಿಯ ನೀಡಿ
ಹೊಡೆದಳು ನಮ್ಮತ್ತೆ ಮೊರದಲ್ಲಿ
ಕಡುದುಃಖದಿಂದ ನಾ ಒಲೆಯ ಮುಂದೆ ಕುಳಿತಿರೆ
ಕೊಡಿತನದಿ ಬಂದು ಒದ್ದಳಯ್ಯಯ್ಯೋ! ||೧||
ನೆತ್ತಿಗೆಣ್ಣೆಯಿಲ್ಲದೆ ತಲೆ ಬತ್ತಿಗಟ್ಟಿತು
ವೃತ್ತಜವ್ವನ ಬಾಡಿಹೋದವಲ್ಲ!
ಅತ್ತೆಯಾಸೆಯಿಲ್ಲ ಮಾವನ ಲೇಸಿಲ್ಲ
ಚಿತ್ತವಲ್ಲಭನಲ್ಲಿ ಗಣವಿಲ್ಲವಯ್ಯಯ್ಯೋ! ||೨||
ಹೇಳಿ ಕಳುಹುವೆ ನಾನವ್ವೆಗಳೂರಿಗೆ
ಕೇಳಯ್ಯ ಶ್ರೀಶೈಲ ಮಲ್ಲಿಕಾರ್ಜುನ
ಭಾಳಪಾಪಿಗಳಲ್ಲಿ ಕೊಟ್ಟರಯ್ಯಯ್ಯೋ! ||೩||
೨೮೬.
ಆಪತ್ತಿಗೊಳಗಾದೆನಮ್ಮಯ್ಯ, ನಾ
ನಾಪತ್ತಿಗೊಳಗಾದೆ ||ಪಲ್ಲವ||
ಪಡುವಣ ದೇಶದಿ ಹುಟ್ಟಿದೆನಮ್ಮ
ಬಡಗಣ ದೇಶದಿ ಬೆಳೆದೆ
ಆಗರದ ನಾಡಿಗೆ ಇತ್ತರೆನ್ನನು
ದೂರದ ನೀರ ನಾ ಹೊರಲಾರೆನಮ್ಮ ||೧||
ಕೂಳಿಲ್ಲ ಹೊಟ್ತೆಗೆ, ತಲೆ ಬತ್ತಿಗಟ್ಟಿತು
ಬಲ್ಮೊಲೆಗಳು ಬತ್ತಿ ಬಡವಾದೆ
ಒಲ್ಲದ ಗಂಡನ ಒಲಿಸಿಹೆನೆಂದಡೆ
ಬಲ್ಲವರೊಂದು ಮದ್ದ ಹೇಳಿರಮ್ಮ ||೨||
ಆರೂ ಬಾರದ ತವರೂರ ದಾರಿಯಲಿ
ಬಾರದ ಭವದಲಿ ಬಂದೆನು
ಊರ ಕಡೆಗೆ ನೋಡಿ ಕಣ್ಣೆಲ್ಲ ಕೆಟ್ಟವು
ನೀರ ಹೊಳೆಗೆ ಹೋಗಿ ಅತ್ತೆನಮ್ಮ ||೩||
ಅತ್ತೆಯ ಲೇಸುಂಟೆ? ಮಾವನ ಲೇಸುಂಟೆ?
ಗಂಡನ ಲೇಸುಂಟೆಂಬುದನರಿಯೆ
ಆಸತ್ತು ಬೇಸತ್ತು ಒಲೆಯ ಮುಂದೆ ಕುಳಿತರೆ
ಪಾಪಿ ಗಂಡ ಕಾಲೊಳೊದ್ದನಮ್ಮ ||೪||
ಉನ್ನತ ಶ್ರೀಶೈಲ ಚೆನ್ನಮಲ್ಲಿಕಾರ್ಜುನ
ನಿನ್ನ ನಂಬಿದ ಭಕ್ತೆ ನಾನೆಯಲ್ಲಾ!
ಮುನ್ನಿನ ಶರಣರ ಸಲಹಿದಂದದಿ ಬೇಗ
ಎನ್ನ ಸಲಹೊ ದೇವರ ದೇವ ||೫||
೨೮೭.
ಏನೇನೆಂಬೆ ಎನ್ನೊಗೆತನವ ಅಭಿ-
ಮಾನಭಂಗವ ಮಾಡಿದ ಮನೆಯಾತ ||ಪಲ್ಲವ||
ಒಡಕು ಮಡಕೆಯೊಳುದಕವ ತುಂಬಿಟ್ಟು
ಹುಡುಕಿ ತಂದೆನು ನಾನೊಮ್ಮ ನವ
ಅಡುಗೆಯ ಮಾಡುವಾಗಳುವ ಮಕ್ಕಳ ಕಾಟ
ಬಿಡದೆ ಮನೆಯಾತನ ಬಿರುನುಡಿ ಘನವಮ್ಮ ||೧||
ಮೊಸರ ಕಡೆದು ಬೆಣ್ಣೆಯ ನೆಲುವಿನ ಮೇಲಿಕ್ಕಿ
ಶಿಶುವಿಗೆ ನಾ ಮೊಲೆಯ ಕೊಡುತಿರಲು
ಅಸಿಯ ಕಲ್ಲಿನ ಮೇಲೆ ಮಸಿಯನರೆದು ಚೆಲ್ಲಿ
ಹಸಿಯ ಬೆಣ್ಣೆಯ ತಿಂಬ ಹಂಡಿಗತನವ ||೨||
ಉಟ್ಟುದ ಸೆಳೆಕೊಂಡೊಂದರುವೆಯನೆ ಕೊಟ್ಟು
ಹುಟ್ಟು ಮುರಿದು ಬಟ್ಟಬಯಲನಿತ್ತ
ಸೃಷ್ಟಿಗೆ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಬಿಟ್ಟಿಯಿಂದಲಿ ಕಟಕವ ಕಂಡ ತರನು ||೩||
೨೮೮.
ಕರಕರೆ ಕರಕನೆ ಘನವಯ್ಯೋ
ಕರೆದು ಹೇಳಿ ಎಮ್ಮವರಿಗೆ ಸುದ್ದಿಯ ||ಪಲ್ಲವ||
ಅತ್ತೆಯ ಮಾತುಗಳೆ ಚಿತ್ತವ ಕಲಕಿವೆ
ಮತ್ತೆ ಮಾವನೊಳ್ಳಿದನಲ್ಲ; ಎನ್ನ
ಚಿತ್ತವಲ್ಲಭನಿಂದಾದ ಭಂಡ ನಾ
ವಿಸ್ತರಿಸಲಾರೆ, ಹೇಳಿ, ಎಮ್ಮವರಿಗೆ ||೧||
ಮುನ್ನ ಹುಟ್ಟಿದ ಮೂರು ಮಕ್ಕಳ ಕಾಟ
ಕನ್ನೆಯರೈವರ ಕೂಡಿಕೊಂಡು
ಮನ್ನಣೆಯನಿತಿಲ್ಲ ಮೈದುನರೈವರ
ಇನ್ನಿರಲಾರೆ ಹೇಳಿ ಎಮ್ಮವರಿಗೆ ||೨||
ನಾರಿಯರೈವರ ಕೂಡಿಕೊಂಡು ನಾ
ದಾರಿ ಸಂಗಡವಾಗಿ ಬರುತಿರಲು
ಭೋರನೆ ಶ್ರೀಶೈಲ ಚೆನ್ನಮಲ್ಲೇಶಂಗೆ
ಓರಂತೆ ಮನಸೋತೆ ಸಾರಿತ್ತ ಬಾರೆನೆ ತಾಯಿ ||೩||
೨೮೯.
ಎಲ್ಲ ಎಲ್ಲವನರಿದು ಫಲವೇನು
ಮತ್ತೆ ಎಲ್ಲ ಎಲ್ಲವನರಿದು ಫಲವೇನು?
ತನ್ನ ತಾನರಿಯದನ್ನಕ್ಕ?
ತನ್ನರಿವು ಕರಿಗೊಂಡ ಬಳಿಕ ಇದಿರಿಟ್ಟು ಕೇಳಲುಂಟ?
ನಿಮ್ಮರಿವು ತಲೆದೋರಿದ ಕಾರಣ
ನನ್ನ ನಾನರಿದೆ ಚೆನ್ನಮಲ್ಲಿಕಾರ್ಜುನ
೨೯೦.
ಅಯ್ಯ, ನಿಮ್ಮ ಮುಟ್ಟಿ ಮುಟ್ಟದೆನ್ನ ಮನ ನೊಡಾ!
ಬಿಚ್ಚಿ ಬೀಸರವಾಯಿತ್ತೆನ್ನ ಮನ
ಹೊಳಲ ಸುಂಕಿಗನಂತೆ ಹೊದಕುಳಿಗೊಂಡಿತ್ತೆನ್ನ ಮನ
ಎರಡೆಂಬುದ ಮರೆದು ಬರಡಾಗದೆನ್ನ ಮನ
ನೀನು ಆನಪ್ಪ ಪರಿಯೆಂತು ಹೇಳಾ ಚೆನ್ನಮಲ್ಲಿಕಾರ್ಜುನ
Comments
Post a Comment