Skip to main content

ಅಕ್ಕನ ವಚನಗಳು - 301 ರಿಂದ 310 ರವರೆಗೆ


Dear friends,
Daily I will post Basavannana Vachanagalu, Sarvagnana Vachanagalu, Akka Mahadevi Vachana
Allama Prabhudevara Vachanagalu.

Please follow my post and post your valuable comments.
 
೩೦೧.
ಕಾಮನ ತಲೆಯ ಕೊರೆದು, ಕಾಲನ ಕಣ್ಣ ಕಳೆದು
ಸೋಮಸೂರ್ಯರ ಹರಿದು ಹುಡಿಮಾಡಿ ತಿಂಬವಳಿಂಗೆ
ನಾಮವನಿಡಬಲ್ಲವರಾರು ಹೇಳಿರೆ!
ನೀ ಮದುವಳಿಗನಾಗಿ
ನಾ ಮದುವಳಿಗಿತಿಯಾಗಿ
ಯವನ(=ಆನಲನ?) ಕೂಡುವ ಮರುತನಂತೆ (?) ನೋಡಾ,
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

೩೦೨.
ಬಸವನ ಭಕ್ತಿ ಕೊಟ್ಟಣದ ಮನೆ
ಸಿರಿಯಾಳನ ಭಕ್ತಿ ಕಸಬಗೇರಿ
ಸಿಂಧುಬಲ್ಲಾಳನ ಭಕ್ತಿ ಪರದಾರದ್ರೋಹ
ಉಳಿದಾದ[+ಟ}ಮಟ ಉದಾಸೀನ ದಾಸೋಹ
ಮಾಡುವವರ ದೈನ್ಯವೆಂಬ ಭೂತ ಸೋಂಕಿತು
ಮಣ್ಣಿನ ಮನೆಯ ಕಟ್ಟಿ
ಮಾಯಾಮೋಹಿನಿಯೆಂಬ ಮಹೇಂದ್ರಜಾಲದೊಳಗಾಗಿ
ಮಾಡುವ ಮಾಟ
ಭಕ್ತನಲ್ಲಿ ಉಂಡು ಉದ್ದಂಡ ವೃತ್ತಿಯಲ್ಲಿ
ನಡೆದವರು ಶಿವನಲ್ಲ
ಇವರು ದೇವಲೋಕ ಮರ್ತ್ಯಲೋಕಕ್ಕೆ ಹೊರಗು
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ,
ನನ್ನ ಭಕ್ತಿ ನಿನ್ನೊಳಗೈಕ್ಯವಾಯಿತಾಗಿ
ನಿರ್ವಯಲಾದೆ ಕಾಣಾ!

೩೦೩.
ಅನ್ನವ ನೀಡುವವರಿಗೆ ಧಾನ್ಯವೆ [ಶಿವ]ಲೋಕ
ಅರ್ಥವ ಕೊಡುವವರಿಂಗೆ ಪಾಷಾಣವೆ [ಶಿವ]ಲೋಕ
ಹೆಣ್ಣು-ಹೊನ್ನು-ಮಣ್ಣು ಮೂರನೂ
ಕಣ್ಣಿನಲ್ಲಿ ನೋಡಿ, ಕಿವಿಯಲಿ ಕೇಳಿ
ಕೈ[ಯಲಿ] ಮುಟ್ಟಿ ಮಾಡುವ ಭಕ್ತಿ
ಸಣ್ಣವರ ಸಮಾರಾಧನೆಯಾಯಿತು
ತನ್ನನಿತ್ತು ತುಷ್ಟಿವಡೆವರನೆನಗೆ ತೋರಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

೩೦೪.
ನಿತ್ಯ ತೃಪ್ತಂಗೆ ನೈವೇದ್ಯದ ಮಜ್ಜನದ ಹಂಗೇತಕ್ಕೆ?
ಸುರಾಳ-ನಿರಾಳಂಗೆ ಮಜ್ಜನದ ಹಂಗೇತಕ್ಕೆ?
ಸ್ವಯಂಜ್ಯೋತಿರ್ಮಯಂಗೆ ದೀಪಾರಾಧನೆಯ ಹಂಗೇತಕ್ಕೆ?
ಸುವಾಸನಸೂಕ್ಷ್ಮಗಂಧಕರ್ಪೂರಗೌರಂಗೆ
ಪುಷ್ಪದ ಹಂಗೇತಕ್ಕೆ?
ಮಾಟದಲಿ ಮನನಂಬುಗೆ ಇಲ್ಲದ
ಅಹಂಕಾರಕೀಡಾದ, ಭಕ್ತಿಯೆಂಬ ಪ್ರಸಾರವನಿಕ್ಕಿ
ಹೊಲೆ ಹದಿನೆಂಟು ಜನ್ಮವ ಹೊರೆವುದರಿಂದ
ಅಂಗೈಯಲೊರಿಸಿ ಮುಕ್ತಿಯ
ಮೂಲ ಶಿಖಿರಂಧ್ರದ (?) ಕಾಮನ ಸುಟ್ಟು
ಶುದ್ಧ ಸ್ಪಟಿಕ ಸ್ವಯಂಜ್ಯೋತಿಯನು
ಸುನ್ನಾಳ[=ಸುಷುಮ್ನಾನಾಳ?]ದಿಂದ
ಹರಿಕ್ಷಾಯ[=ಹಕ್ಷ?]ವೆಂಬೆರಡಕ್ಷರವ
ಸ್ವಯಾನುಭಾವ ಭಕ್ತಿನಿರ್ವಾಣವಾದ[+ವರ]ನೆನಗೊಮ್ಮೆ
ತೋರಿದೆ ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

೩೦೫.
ಮಾಟ ಮದುವೆಯ ಮನೆ
ದಾನ-ಧರ್ಮ ಸಂತೆಯ ಪಸಾರ
ಸಾಜ ಸಾಜೇಶ್ವರಿ ಸೂಳೆಗೇರಿಯ ಸೊಬಗು
ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ
ಭಕ್ತಿಯೆಂ[ಬುದು?] ಬಾಜಗಾರರಾಟ
ಬಸವಣಗೆ ತರ ನಾನರಿಯದೆ ಹುಟ್ಟಿದೆ (?)
ಹುಟ್ಟಿ ಹುಸಿಗೀಡಾದೆ
ಹುಸಿ ವಿಷಯದೊಳಡಗಿತ್ತು
ವಿಷಯ ಮಸಿಮಣ್ಣಾಯಿತ್ತು
ನಿನ್ನ ಗಸಣೆಯನೊಲ್ಲೆ
ಹೋಗಾ ಚೆನ್ನಮಲ್ಲಿಕಾರ್ಜುನ

೩೦೬.
ಚಿನ್ನದ ಸಂಕೋಲೆಯಾದಡೇನು, ಬಂಧನವಲ್ಲವೆ?
ಮುತ್ತಿನ ಬಲೆಯಾದಡೇನು, ತೊಡರಲ್ಲವೆ?
ನಚ್ಚುಮಚ್ಚಿನ ಭಕ್ತಿಯಲ್ಲಿ ಸಿಕ್ಕಿಕೊಂಡಿದ್ದರೆ
ಭವ ಹಿಂಗುವುದೇ ಚೆನ್ನಮಲ್ಲಿಕಾರ್ಜುನ?

೩೦೭.
ಕುಲಗಿರಿ ಶಿಖರದ ಮೇಲೆ ಬಾಳೆ [ಬೆಳೆವುದಯ್ಯ] ಎಂದಡೆ
ಬಾಳೆ [ಬೆಳೆವುದಯ್ಯ] ಎನ್ನಬೇಕು
ಓಲೆಕಲ[=ಓಲೆಕಲ್ಲ] ನುಗ್ಗುಕುಟ್ಟಿ ಮೆಲಬಹುದಯ್ಯ ಎಂದಡೆ
ಅದು ಅತ್ಯಂತ ಮೃದು
ಮೆಲಬಹುದಯ್ಯ ಎನಬೇಕು
ಸಿಕ್ಕಿದ ಠಾವಿನಲ್ಲಿ ಉಚಿತವೆ ನುಡಿವುದೆ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ,
ಮರ್ತ್ಯಕ್ಕೆ ಬಂದುದಕ್ಕಿದೇ ಗೆಲುವು

೩೦೮.
ಅಯ್ಯ ವಿರಕ್ತರೆಂದರೇನೋ?
ವಿರಕ್ತಿಯ ಮಾತಾಡುವರಲ್ಲದೆ,
ವಿರಕ್ತಿ ಎಲ್ಲರಿಗೆಲ್ಲಿಯದೋ?
ಕೈಯೊಳಗಣ ಓಲೆ, ಕಂಕುಳೊಳಗಣ ಸಂಪುಟ
ಬಾಯೊಳಗಣ ಮಾತು
ಪುಣ್ಯವಿಲ್ಲ; ಪಾಪವಿಲ್ಲ;
ಕರ್ಮವಿಲ್ಲ; ಧರ್ಮವಿಲ್ಲ,
ಸತ್ಯವಿಲ್ಲ, ಅಸತ್ಯವಿಲ್ಲವೆಂದು ಮಾತನಾಡುತ್ತಿಪ್ಪರು
ಅದೆಂತೆಂದಡೆ-
ಕಂಗಳ ನೋಟ ಹಿಂಗದನ್ನಕ
ಕೈಯೊಳಗಣ ಬೆರಟು ನಿಲ್ಲದನ್ನಕ
ಹೃದಯದ ಕಾಮ ಉಡುಗದೆನ್ನಕ
ವಿರಕ್ತಿಕೆ ಎಲ್ಲರಿಗೆಲ್ಲಿಯದೋ?
ಬಲ್ಲ ವಿರಕ್ತನ ಹೃದಯವು ಕಾಡೊಳಗಣ್ಣ
ಗುಂಡಿನಲ್ಲಿ ಮಾಣಿಕ್ಯದ ಪ್ರಭೆಯ ಕಂಡವರಾರೋ
[ಲಿಂಗವ] ಕಂಡಾತಂಗೆ
ಕಂಗಳಲ್ಲಿ ನೋಡಿದ ಸರ್ವವಸ್ತುಗಳು ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ಕರ್ಣದಲ್ಲಿ ಕೇಳಿದಾಗಮಪುರಾಣಂಗಳು ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ನಾಸಿಕದಲ್ಲಿ ಸೋಂಕಿದ ಪರಿಮಳದ್ರವ್ಯಂಗಳು ಆ ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ಜಿಹ್ವೆಯಲ್ಲಿ ರುಚಿಸಿದ ರುಚಿಪದಾರ್ಥಂಗಳು ಆ ಲಿಂಗಕರ್ಪಿತ
ಅದೆಂತೆಂದಡೆ-
ಅಂಗವು-ಲಿಂಗವು ಏಕೀಭವಿಸಿದಡೆ
ಅವಂಗೆ ಪುಣ್ಯವಿಲ್ಲ ಪಾಪವಿಲ್ಲ
ಕರ್ಮವಿಲ್ಲ ಧರ್ಮವಿಲ್ಲ
ಅದೆಂತೆಂದಡೆ-
ಬಂದುದ ಲಿಂಗಕ್ಕೆ ಕೊಟ್ಟನಾಗಿ, ಬಾರದುದ ಬಯಸನಾಗಿ
ಆಂಗನೆಯರು ಬಂದು ಕಾಮಿತಾರ್ಥದಿಂದ ತನ್ನನಪ್ಪಿದಡೆ
ತಾ ಮಹಾಲಿಂಗವನಪ್ಪುವನಾಗಿ
ಅವಂಗೆ ಮುಖ ಬೇರಲ್ಲದೆ ಆತ್ಮನೆಲ್ಲ ಒಂದೆ
ಅದಕ್ಕೆ ಜಗವು ಪಾಪ-ಪುಣ್ಯವೆಂದು ಮಾತಾಡುತ್ತಿಪ್ಪರು
ಅದೆಂತೆಂದಡೆ;
ಶಿವಂಗೆ ತಾಯಿಲ್ಲ
ಭುವನಕ್ಕೆ ಬೆಲೆ[=ನೆಲೆ?]ಯಿಲ್ಲ
ತರು-ಗಿರಿ-ಗಹ್ವರಕ್ಕೆ ಮನೆಯಿಲ್ಲ
ಲಿಂಗವನೊಡಗೂಡಿದ ವಿರಕ್ತಂಗೆ
ಪುಣ್ಯಪಾಪವಿಲ್ಲ ಕಾಣಾ ಚೆನ್ನಮಲ್ಲಿಕಾರ್ಜುನ

೩೦೯.
ವಿರಕ್ತಿ ವಿರಕ್ತಿಯೆಂಬರು
ವಿರಕ್ತಿ ಪರಿಯೆಂತುಂಟು ಹೇಳಿರಯ್ಯ
ಕಟ್ಟದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ?
ಹುಟ್ಟು ಕೆತ್ತುವ ಡೊಂಬನಂತೆ
ಬಿಟ್ಟ ಮಂಡೆಯ ಕೇಶವ ನುಣ್ಣಿಸಿ
ಎಣ್ಣೆಗಂಟ ಹಾಕಿದಡೆ ವಿರಕ್ತನೆ?
ಕಟ್ಟುಹರಿದಿಹ ಪಂಜಿನಂತೆ
ಬಿಟ್ಟ ಮಂಡೆಯ ಕಟ್ಟದಿದ್ದಡೆ ವಿರಕ್ತನೆ?
ಹರ[+ದ?]ನಂತೆ ಹೇಸಿಯಾಗಿದ್ದರೆ ವಿರಕ್ತನೆ?
ಮೂಗನಂತೆ ಮಾತಾಡದಿದ್ದರೆ ವಿರಕ್ತನೆ?
ಹೊನ್ನು-ಹೆಣ್ಣು-ಮಣ್ಣ ಬಿಟ್ಟು
ಅಡವಿ-ಅರಣ್ಯದಲ್ಲಿದ್ದರೆ ವಿರಕ್ತನೆ?
ಅಲ್ಲ!
ವಿರಕ್ತನಾ ಪರಿಯೆಂತೆಂದಡೆ-
ಒಡಲ ಹುಡಿಗುಟ್ಟಿ
ಮೃಡನೊಳು ಎಡೆದೆರಹಿಲ್ಲದಿರಬಲ್ಲಡೆ ವಿರಕ್ತನಪ್ಪ
ಅಲ್ಲದಿರ್ದಡೆ ಮೈಲಾರಿಯ ಮಲ್ಲಿಗೊರವಿತಿಯಲ್ಲವೆ
ಮಲ್ಲಿಕಾರ್ಜುನ?

೩೧೦.
ಎಮ್ಮೆಗೊಂದು ಚಿಂತೆ! ಸಮ್ಮಗಾರನಿಗೊಂದು ಚಿಂತೆ!
ನನಗೆ ನನ್ನ ಚಿಂತೆ! ತನಗೆ ತನ್ನ ಕಾಮದ ಚಿಂತೆ!
ಒಲ್ಲೆ ಹೋಗು, ಸೆರಗ ಬಿಡು ಮರುಳೆ!
ನನಗೆ ಚೆನ್ನಮಲ್ಲಿಕಾಜುನದೇವರು
ಒಲಿವನೋ ಒಲಿಯನೋ ಎಂಬ ಚಿಂತೆ!

Comments

Popular posts from this blog

ಅಕ್ಕನ ವಚನಗಳು - 271 ರಿಂದ 280 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೨೭೧. ತನು ಶುದ್ಧ, ಮನ ಶುದ್ಧ, ಭಾವಶುದ್ಧವಾದವರನೆನಗೊಮ್ಮೆ ತೋರಾ! ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ, ನಿತ್ಯಶುದ್ಧರಾದವರನೆನಗೊಮ್ಮೆ ತೋರಾ! ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ ೨೭೨. ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ ೨೭೩. ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಸತ್ಯಶರಣರನುಭಾವವ! ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೇ! ೨೭೪. ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ! ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ! ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ! ಎಡರುವ ಹರಳೆಲ್ಲ ಚಿಂತಾಮಣಿ! ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ ನೋಡುತ ಬಂದು, ಕದಳಿಯ ಬನವ ಕಂಡೆ ನಾನು ೨೭೫. ತನುವೆಲ್ಲ ಜರಿದ

ಬಸವಣ್ಣನ ವಚನಗಳು - 331 ರಿಂದ 340 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೩೧. ವ್ಯಾಸ ಬೋಯಿತಿಯ ಮಗ. ಮಾರ್ಕಂಡೇಯ ಮಾತಂಗಿಯ ಮಗ. ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿ ಭೋ! ಕುಲದಿಂದ ಮುನ್ನೇನಾದಿರಿ ಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ. ದೂರ್ವಾಸ ಮಚ್ಚಿಗ. ಕಶ್ಯಪ ಕಮ್ಮಾರ. ಕೌಂಡಿನ್ಯನೆಂಬ ಋಷಿ ಮೂರುಲೋಕವರಿಯೆ ನಾವಿದ ಕಾಣಿ ಭೋ! ನಮ್ಮ ಕೂಡಲಸಂಗನ ವಚನವಿಂತೆಂದುದು- "ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ! ೩೩೨. ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ. ಜಲಬಿಂದುವಿನ ವ್ಯವಹಾರವೊಂದೇ. ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ. ಏನನೋದಿ ಏನ ಕೇಳಿ ಏನು ಫಲ ?! ಕುಲಜನೆಂಬುದಕ್ಕೆ ಆವುದು ದೃಷ್ಟ ? "ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸ್ಸಮಸ್ತಸ್ಮಾತ್ ವರ್ಣಾನಾಂ ಕಿಂ ಪ್ರಯೋಜನಂ ?" || ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ? ಇದು ಕಾರಣ, ಕೂಡಲಸಂಗಮದೇವ, ಲಿಂಗಸ್ಥಲವನರಿದವನೇ ಕುಲಜನು! ೩೩೩. ಕೊಲುವವನೇ ಮಾದಿಗ! ಹೊಲಸ ತಿಂಬವನೇ ಹೊಲೆಯ! ಕುಲವೇನೋ ? ಆವದಿರ ಕುಲವೇನೋ ? ಸಕಲ ಜೀವಾ

ಬಸವಣ್ಣನ ವಚನಗಳು - 371 ರಿಂದ 380 ರವರೆಗೆ

Dear friends, Daily I will post Basavannana Vachanagalu , Sarvagnana Vachanagalu , Akka Mahadevi Vachana Allama Prabhudevara Vachanagalu . Please follow my post and post your valuable comments.   ೩೭೧. ಜಂಬೂದ್ವೀಪನವಖಂಡಪೃಥ್ವಿಯೊಳಗೆ ಕೇಳಿರಯ್ಯ ಎರಡಾಳಿನ ಭಾಷೆಯ! ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು. ಸತ್ಯವೆಂಬ ಕೂರಲಗನೆ ಕಳೆದುಕೊಂಡು ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವ. ೩೭೨. ಶಿವಭಕ್ತನಾಗಿ ತನ್ನ ಹಿಡಿದಹೆನೆಂದು ಹೋದರೆ ನುಗ್ಗುಮಾಡುವ, ನುಸಿಯ ಮಾಡುವ! ಮಣ್ಣುಮಾಡುವ, ಮಸಿಯ ಮಾಡುವ! ಕೂಡಲಸಂಗಮದೇವರ ನೆರೆನಂಬಿದನಾದರೆ ಕಡೆಗೆ ತನ್ನಂತೆ ಮಾಡುವ. ೩೭೩. ಅರೆವನಯ್ಯ ಸಣ್ಣವಹನ್ನಕ ಒರೆವನಯ್ಯ ಬಣ್ಣಗಾಬನ್ನಕ ಅರೆದರೆ ಸುಣ್ಣವಾಗಿ, ಒರೆದರೆ ಬಣ್ಣವಾದರೆ ಕೂಡಲಸಂಗಮದೇವನೊಲಿದು ಸಲಹುವನು. ೩೭೪. ಎಡದ ಪಾದದಲೊದ್ದರೆ ಬಲದ ಪಾದವ ಹಿಡಿವೆ! ಬಲದ ಪಾದದಲೊದ್ದರೆ ಎಡದ ಪಾದವ ಹಿಡಿವೆ! ತ್ರಾಹಿ, ತ್ರಾಹಿ! ತಪ್ಪೆನ್ನದು, ಕ್ಷಮೆ ನಿನ್ನದು! ಕೂಡಲಸಂಗಮದೇವ ನಿಮ್ಮ ಕರುಣದ ಕಂದ ನಾನು! ೩೭೫. ಅಂಜಿದರಾಗದು, ಅಳುಕಿದರಾಗದು! ವಜ್ರಪಂಜರದೊಳಗಿದ್ದರಾಗದು! ತಪ್ಪದೆಲವೋ ಲಲಾಟಲಿಖಿತ! ಕಕ್ಕುಲತೆಬಟ್ಟರಾಗದು ನೋಡಾ! ಧೃತಿಗೆಟ್ಟು ಮನ ಧಾತುಗೆಟ್ಟರೆ ಅಪ್ಪುದು ತಪ್ಪದು ಕೂಡಲಸಂಗಮದೇವ. ೩೭೬. ಆಯುಷ್ಯ ತೀರಿದಲ್ಲದೆ ಮರಣವಿಲ್ಲ. ಭಾಷೆ ತೀರಿದಲ